ಕಂದಮ್ಮನ ಎದುರೇ ಆತ್ಯಹತ್ಯೆ ಮಾಡಿಕೊಂಡ ತಾಯಿ – ಎರಡೂವರೆ ಗಂಟೆ ಅಮ್ಮ…ಎಂದು ಕಣ್ಣೀರಿಟ್ಟ ಮಗು

Public TV
2 Min Read

ಮಂಡ್ಯ: ತನ್ನ ಪುಟ್ಟ ಕಂದಮ್ಮನ ಎದುರೇ ತಾಯಿ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಮಂಡ್ಯದಲ್ಲಿ ಜರುಗಿದೆ.

ಕೆಂಪೇಗೌಡ ಬಡಾವಣೆಯಲ್ಲಿ ವಾಸವಿದ್ದ ರವಿಶಂಕರ್ ಪತ್ನಿ ಕವಿತಾ ತನ್ನ ಒಂದು ವರ್ಷದ ಮಗುವಿನ ಮುಂದೆಯೇ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿಯನ್ನು ನೋಡಿದ ಒಂದು ವರ್ಷದ ಎಳೆಯ ಕಂದಮ್ಮ ಅಮ್ಮ, ಅಮ್ಮ ಎಂದು ಸುಮಾರು ಎರಡೂವರೆ ಗಂಟೆಗಳ ಕಾಲ ಮಮ್ಮಲ ಮರುಗಿದೆ. ಇದನ್ನೂ ಓದಿ:  ಯೋಧರು ಪ್ರಯಾಣಿಸುತ್ತಿದ್ದ ವಾಹನ ಸ್ಫೋಟ: 3 ಸೈನಿಕರ ಸ್ಥಿತಿ ಗಂಭೀರ 

ಮಗುವಿನ ಆಕ್ರಂದನ ಕೇಳಿ ಅಕ್ಕ-ಪಕ್ಕದ ಮನೆಯವರು ಕಿಟಕಿಯಿಂದ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಒಂದು ಕಡೆ ಕವಿತಾ ನೇಣು ಬಿಗಿದುಕೊಂಡಿದ್ದು, ಮತ್ತೊಂದು ಕಡೆ ಪುಟ್ಟ ಕಂದಮ್ಮ ಗೋಳಾಡುವ ದೃಶ್ಯ ಕಂಡುಬಂದಿದೆ. ನಂತರ ಕವಿತಾ ಪತಿ ರವಿಶಂಕರ್ ಮತ್ತು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ರವಿಶಂಕರ್ ಮತ್ತು ಕವಿತಾ ಕಳೆದ ಒಂಭತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಏಳು ವರ್ಷದ ಗಂಡು ಹಾಗೂ ಒಂದು ವರ್ಷದ ಹೆಣ್ಣು ಮಗುವಿದೆ. ದೈಹಿಕ ಶಿಕ್ಷಕರಾಗಿರುವ ರವಿಶಂಕರ್ ಮೂಲತಃ ಮಂಡ್ಯದವರಾಗಿದ್ದರು ಸಹ ಹಲವು ವರ್ಷಗಳಿಂದ ಹೆಂಡತಿ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲಸಿದ್ದರು. ಇದೀಗ ರವಿಶಂಕರ್‌ಗೆ ಮೈಸೂರಿನಲ್ಲಿ ಕೆಲಸ ಸಿಕ್ಕಿತ್ತು. ಈ ಕಾರಣ ಮಂಡ್ಯದ ಕೆಂಪೇಗೌಡ ಬಡಾವಣೆಯಲ್ಲಿ ಕಳೆದ ಮೂರು ತಿಂಗಳಿನಿಂದ ಬಾಡಿಗೆ ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ಇದ್ದರು.

ಅಕ್ಕ-ಪಕ್ಕದ ಮನೆಯವರು ಹೇಳುವ ಪ್ರಕಾರ ಇವರು ಸಂತೋಷದಿಂದಲೇ ಇದ್ದರು. ಕಳೆದ ಮೂರು ದಿನಗಳ ಹಿಂದೆ ಎರಡನೇ ಮಗುವಿನ ಮೊದಲ ಹುಟ್ಟುಹಬ್ಬವನ್ನು ಸಹ ಮಾಡಿದ್ರು. ಆದ್ರೆ ಅದ್ಯಾವ ಕಾರಣಕ್ಕೆ ಹೀಗೆ ಕವಿತಾ ಮಾಡಿಕೊಂಡಿದ್ದಾಳೆ ಎಂದು ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ನಾಯಿ ಆಸೆ ತೋರಿಸಿ ಚಿರತೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು 

ಡೆತ್‍ನೋಟ್
ಕವಿತಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‍ನೋಟ್‍ನ್ನು ಬರೆದಿಟ್ಟಿದ್ದು, ಇಂದು ನನ್ನ ಕೊನೆಯ ದಿನವಾಗಿದೆ. ಎಲ್ಲ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ. ನನ್ನ ಎಲ್ಲ ಆಭರಣಗಳು ನನ್ನ ಮಗ ಮಗಳಿಗೆ ಸೇರಬೇಕು. ಇಲ್ಲವಾದರೆ ನಾನು ಮತ್ತು ನನ್ನ ದೇವರು ಕ್ಷಮಿಸುವುದಿಲ್ಲ. ಇವು ನಾನು ಕಷ್ಟಪಟ್ಟ ಆಭರಣಗಳು ಇಂತಿ ದುರ್ದೈವಿ ಕವಿತಾ ಎಂದು ಬರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *