ಬಾಗಲಕೋಟೆ: ಅನೈತಿಕ ಸಂಬಂಧ ಬಿಡುವಂತೆ ಬೈದು ಬುದ್ಧಿ ಹೇಳಿದ್ದಕ್ಕೆ ಗೃಹಿಣಿಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ನಡೆದಿದೆ.
ಬೀಳಗಿ ತಾಲೂಕಿ ಸುನಗಾ ಗ್ರಾಮದ ದೀಪಾ ಲಮಾಣಿ (21) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ದೀಪಾ ತಮ್ಮ ಗ್ರಾಮದಿಂದ 6 ಕಿ.ಮೀ. ದೂರದಲ್ಲಿರುವ ಅನಗವಾಡಿ ಸೇತುವೆಗೆ ಬಂದು ಘಟಪ್ರಭಾ ನದಿಗೆ ಹಾರಿ ಪ್ರಾಣಬಿಟ್ಟಿದ್ದಾಳೆ. ಮೃತಳಿಗೆ ಪತಿ ಹಾಗೂ ಇಬ್ಬರು ಮಕ್ಕಳಿದ್ದಾರೆ.
ಏನಿದು ಪ್ರಕರಣ?:
ದೀಪಾ ಲಮಾಣಿ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಬೇರೆ ವ್ಯಕ್ತಿಯೊಬ್ಬನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಕುರಿತು ಮನೆಯವರಿಗೆ ಹಾಗೂ ಗ್ರಾಮಸ್ಥರಿಗೆ ಗೊತ್ತಾಗಿ ಪಂಚಾಯ್ತಿ ನಡೆಸಿದ್ದಾರೆ. ಹಿರಿಯರ ಪಂಚಾಯ್ತಿ ನಡೆಸಿ ಬುದ್ಧಿವಾದ ಹೇಳಿದಾಗ ದೀಪಾ ನಾನು ಗಂಡನನ್ನು ಬಿಡುತ್ತೇನೆಯೇ ಹೊರತು, ಆತನನ್ನು ಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾಳೆ.
ದೀಪಾ ವರ್ತನೆಯಿಂದ ಕೋಪಗೊಂಡ ಗ್ರಾಮಸ್ಥರು ಆಕೆಗೆ ಚೀಮಾರಿ ಹಾಕಿದ್ದಾರೆ. ಇದರಿಂದ ಮನನೊಂದು ನನ್ನ ಸಾವಿನ ಮೂಲಕ ಎಲ್ಲರಿಗೂ ಬಿಸಿ ಮುಟ್ಟಿಸುತ್ತೇನೆ ಅಂತ ದೀಪಾ ಹೇಳಿದ್ದಳಂತೆ. ಪಂಚಾಯ್ತಿ ನಡೆಸಿದ ಬಳಿಕ ಕೆಲ ದಿನಗಳು ಸುಮ್ಮನಿದ್ದ ದೀಪಾ ಭಾನುವಾರ ಅನಗವಾಡಿ ಸೇತುವೆಗೆ ಬಂದು ಘಟಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ದೀಪಾ ಮೃತದೇಹವನ್ನು ನದಿಯಿಂದ ಹೊರ ತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv