ಪೊಲೀಸ್ ಸರ್ಪಗಾವಲಿನಲ್ಲಿ ಗಣಪತಿ ಶೋಭಾ ಯಾತ್ರೆ ಆರಂಭ

Public TV
1 Min Read

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇಂದು ಪೊಲೀಸ್ ಸರ್ಪಗಾವಲಿನಲ್ಲಿ ವಿದ್ಯಾಗಣಪತಿ ವಿಸರ್ಜನಾ ಮಹೋತ್ಸವ ಆರಂಭವಾಗಿದೆ. ವಿದ್ಯಾಗಣಪತಿ ಮೆರವಣಿಗೆಗೆ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಮೂರು ದಶಕಗಳ ಹಿಂದೆ ಗಣಪತಿ ವಿಸರ್ಜನಾ ಮಹೋತ್ಸವದ ವೇಳೆ ಎರಡು ಕೋಮುಗಳ ನಡುವೆ ಗಲಾಟೆ ನಡೆದು ಕೆಲ ದಿನಗಳ ನಂತರ ಪೊಲೀಸರೇ ಗಣಪತಿ ವಿಸರ್ಜನೆ ಮಾಡಿದ್ದರು. ಅಂದಿನಿಂದ ವಿಸರ್ಜನಾ ಮಹೋತ್ಸವಕ್ಕೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿಕೊಂಡು ಬರಲಾಗುತ್ತಿದೆ.

ಮೆರವಣಿಗೆ ಸಂದರ್ಭದಲ್ಲಿ ಎಲ್ಲೆಲ್ಲೂ ಪೊಲೀಸರೇ ಕಾಣಿಸುತ್ತಾರೆ. ಹಾಗಾಗಿ ಇದಕ್ಕೆ ‘ಪೊಲೀಸ್ ಗಣಪತಿ’ ಎಂಬ ಖ್ಯಾತಿಯೂ ಇದೆ. ನಗರದ ರಥದ ಬೀದಿಯಿಂದ ಶೋಭಾ ಯಾತ್ರೆ ಆರಂಭಗೊಂಡಿದ್ದು, ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯುತ್ತಿದೆ.

ಮಹಿಳಾ ವೀರಗಾಸೆ, ಕಂಸಾಳೆ, ಚಂಡೆಮದ್ದಳೆ, ಪೂಜಾ ಕುಣಿತ, ಗೊರವರ ಕುಣಿತ ಮೊದಲಾದ ಜಾನಪದ ಕಲಾ ತಂಡಗಳು ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುವ ಶೋಭಾ ಯಾತ್ರೆ ದೊಡ್ಡರಸನಕೊಳದಲ್ಲಿ ಅಂತ್ಯಗೊಳ್ಳಲ್ಲಿದ್ದು ಇಂದು ಮಧ್ಯೆರಾತ್ರಿ ವೇಳೆಗೆ ವಿದ್ಯಾಗಣಪತಿ ವಿಸರ್ಜನೆ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *