ಐಎಂಎ ಪ್ರಕರಣ- ಅಜ್ಜಿ, 3ನೇ, 4ನೇ ಪತ್ನಿ, ಮಕ್ಕಳು ಸೇರಿ 10 ಮಂದಿಯೊಂದಿಗೆ ಖಾನ್ ಎಸ್ಕೇಪ್

Public TV
2 Min Read

ಬೆಂಗಳೂರು: ರಾಜ್ಯಾದ್ಯಂತ ಭಾರೀ ವಂಚನೆ ಮಾಡಿದ ಐಎಂಎ ಜ್ಯುವೆಲ್ಲರಿ ಮಾಲೀಕ ಮನ್ಸೂರ್ ತನ್ನ ಅಜ್ಜಿ, 3ನೇ ಪತ್ನಿ, 4ನೇ ಹೆಂಡತಿ ಹಾಗೂ ಮಕ್ಕಳು ಸೇರಿದಂತೆ ಸುಮಾರು 10 ಮಂದಿಯೊಂದಿಗೆ ಪರಾರಿಯಾಗಿದ್ದಾನೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಸೋಮವಾರ(ಮೇ 10)ದಂದು 2 ತಿಂಗಳ ಬಡ್ಡಿ ಹಾಕೋಣ ಎಂದು ಹೇಳಿದ್ದ ಖತರ್ನಾಕ್ ಖಾನ್ ಬಗ್ಗೆ ಇದೀಗ ಮತ್ತಷ್ಟು ದೋಖಾಗಳು ಬಯಲಾಗುತ್ತಿವೆ. ಐಎಂಎ ಕಂಪನಿ ವಂಚನೆಯಿಂದ ಕಂಗಾಲಾದ ಗ್ರಾಹಕರು ಬೀದಿಗಿಳಿಯುತ್ತಿದ್ದಂತೆಯೇ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈ ವೇಳೆ ಆತನ ಒಂದೊಂದೇ ಖತರ್ನಾಕ್ ಸ್ಟೋರಿಗಳು ಹೊರಬರುತ್ತಿವೆ.

1,900 ಕೋಟಿ ಹಣವಿರುವ ಖಾತೆಯಿಂದ ಬರೋಬ್ಬರಿ 1,200 ಕೋಟಿ ಹಣವನ್ನು ತನ್ನ ಮತ್ತೊಂದು ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಹೀಗೆ ಹಣ ವರ್ಗಾವಣೆ ಮಾಡಿಕೊಂಡ ತಕ್ಷಣ ಮನ್ಸೂರ್ ತನ್ನ ಕುಟುಂಬಸ್ಥರ ಜೊತೆ ಎಸ್ಕೇಪ್ ಆಗಿದ್ದಾನೆ.

ಈ ಮಧ್ಯೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಾಟಕವಾಡಿದ್ದನು. ಈ ಹೇಳಿಕೆ ನೀಡಿದ ಬಳಿಕ ಆತ ನಿನ್ನೆಯೇ 17 ಕೋಟಿ ಹಣವನ್ನು ವರ್ಗಾವಣೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಇತ್ತ ಐಎಂಎ ಮಾಲೀಕ ಮನ್ಸೂರ್ ಅವರಿಗೆ ಏನು ಆಗಿಲ್ಲ ಎಂದು ಜ್ಯುವೆಲ್ಲರಿಯ ಸೇಲ್ಸ್ ಅಸೋಶಿಯೇಟ್ ಮಹಮ್ಮದ್ ಶಾಬಾದ್ ತಿಳಿಸಿದ್ದಾರೆ.

ವಂಚನೆ ಹೇಗೆ?
ಐಎಂಎ ಜ್ಯುವೆಲ್ಸ್ ಚಿನ್ನ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷ ರೂ. 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು. ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ ಕಳೆದ 2-3 ತಿಂಗಳಿನಿಂದ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ ಜೂನ್ 10 ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದರು.

Share This Article
Leave a Comment

Leave a Reply

Your email address will not be published. Required fields are marked *