ಐಎಂಎ ಮಾಲೀಕ ಆತ್ಮಹತ್ಯೆ ಮಾಡಿಕೊಂಡಿಲ್ವಂತೆ – ಲಾಭಾಂಶದ ಆಸೆಗೆ ಲಕ್ಷ, ಕೋಟಿ ಕಳೆದುಕೊಂಡ್ರು

Public TV
2 Min Read

ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್ ಅವರಿಗೆ ಏನು ಆಗಿಲ್ಲ ಎಂದು ಜ್ಯುವೆಲ್ಲರಿಯ ಸೇಲ್ಸ್ ಅಸೋಶಿಯೇಟ್ ಮಹಮ್ಮದ್ ಶಾಬಾದ್ ತಿಳಿಸಿದ್ದಾರೆ.

ಮಾನ್ಸೂರ್ ಮೃತಪಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಮಹಮದ್ ಶಾಬಾದ್ ಅವರನ್ನು ಸಂಪರ್ಕಿಸಿತ್ತು. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಎಂಡಿ ಸೇಫ್ ಆಗಿದ್ದಾರೆ. ಅವರಿಗೆ ಏನು ಆಗಿಲ್ಲ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಸುಳ್ಳು ಎಂಂದು ಹೇಳಿದ್ದಾರೆ.

ನಮ್ಮ ಎಂಡಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಸೆಕ್ಯೂರಿಟಿ ಉದ್ದೇಶದಿಂದ ಬೇರೆ ಕಡೆ ಹೋಗಿರಬಹುದು ಅಂದಿದ್ದಾರೆ. ಅಲ್ಲದೆ ಆಡಿಯೋದಲ್ಲಿ ರೋಷನ್ ಬೇಗ್ ಹೆಸರನ್ನು ಯಾರೋ ಸೃಷ್ಟಿ ಮಾಡಿದ್ದಾರೆ. ನಾವು ಸೈಬರ್ ಕ್ರೈಮ್‍ಗೆ ದೂರು ನೀಡಿದ್ದೇವೆ ಎಂದು ಶಾಬಾದ್ ಹೇಳಿದ್ದಾರೆ.

ಈ ನಡುವೆ ಶಾಬಾದ್ ಯುಎಇಗೆ ತೆರಳಿದ್ದಾರೆ ಎನ್ನುವ ಸುದ್ದಿ ಹರಿದಾಡತೊಡಗಿದೆ. ಕಂಪನಿ ವಿರುದ್ಧ ಗ್ರಾಹಕರು ತಿರುಗಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಜೂನ್ 8 ಶನಿವಾರ ಸಂಜೆಯೇ ಯುಎಇಗೆ ಶಾಬಾದ್ ಪರಾರಿಯಾಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಎಸ್‍ಐಟಿ ರಚನೆ?
ಐಎಂಎ ವಂಚನೆ ಕೇಸ್ ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ವಿಶೇಷ ತನಿಖಾ ತಂಡ(ಎಸ್‍ಐಟಿ) ರಚನೆ ಮಾಡುವ ಸಾಧ್ಯತೆಯಿದೆ. ಸುಮಾರು 25 ಸಾವಿರಕ್ಕೂ ಹೆಚ್ಚುಮಂದಿ ಹೂಡಿಕೆ ಮಾಡಿದ್ದು, ಎಸ್‍ಐಟಿ ರಚನೆ ಮಾಡಿ ಪ್ರಕರಣದಿಂದ ನೊಂದವರಿಗೆ ನ್ಯಾಯ ಕೊಡಿಸಲು ಸರ್ಕಾರ ಮುಂದಾಗಿದೆ.

ಇವತ್ತು ಮುಖ್ಯಮಂತ್ರಿಗಳ ಜೊತೆ ಗೃಹ ಸಚಿವ ಎಂಬಿ ಪಾಟೀಲರು ಚರ್ಚೆ ಮಾಡಿದ ಬಳಿಕ, ಎಸ್‍ಐಟಿ, ಸಿಐಡಿ, ಸಿಸಿಬಿ ಎನ್ನುವುದು ಗೊತ್ತಾಗಲಿದೆ.

ಆಂಬಿಡೆಂಟ್ ಕೇಸ್ ತನಿಖೆ ನಡೆಸಿದ ಕೆಲ ಅಧಿಕಾರಿಗಳನ್ನ ಬಳಸಿಕೊಂಡು ಎಸ್‍ಐಟಿ ರಚಿಸಿದರೆ ಒಳ್ಳೆಯದು. ಮನ್ಸೂರ್ ವಿದೇಶದಲ್ಲಿ ತಲೆ ಮರೆಸಿಕೊಂಡಿರುವುದರಿಂದ ಆದಷ್ಟು ಬೇಗ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಿದೆ. ಈ ಮಧ್ಯೆ, ಕಾಂಗ್ರೆಸ್ ಪಕ್ಷ ಹಾಗೂ ಸಮ್ಮಿಶ್ರ ಸರ್ಕಾರದ ವಿರುದ್ಧ ರೋಷಕಾರಿದ್ದ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಎಸ್‍ಐಟಿ ತನಿಖೆಯ ಇಕ್ಕಟ್ಟಿಗೆ ಸಿಲುಕಿಸಲು ದೊಡ್ಡ ಅಸ್ತ್ರ ಸಿಕ್ಕಿದಂತಾಗಿದೆ ಎನ್ನುವ ಮಾತೂ ಕೇಳಿ ಬಂದಿದೆ.

ವಂಚನೆ ಹೇಗೆ?
ಐಎಂಎ ಜ್ಯುವೆಲ್ಸ್ ನಿಂದ ಚಿನ್ನ, ವಜ್ರ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷ ರೂ. 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು. ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ ಕಳೆದ 2-3 ತಿಂಗಳಿನಿಂದ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ ಜೂನ್ 10 ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದರು.

Share This Article
Leave a Comment

Leave a Reply

Your email address will not be published. Required fields are marked *