ಬಳ್ಳಾರಿ: ಸಂಸತ್ ನಲ್ಲಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಮಕ್ಕೆಜೋಳ ಹಾನಿ ಪರಿಶೀಲನೆ ಮಾಡಲು ಇಂದು ಜಿಲ್ಲೆಯ ಹೂವಿನ ಹಡಗಲಿಗೆ ದೇವೇಗೌಡರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು, ಸಂಸತ್ನಲ್ಲಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಕಳೆದ ವರ್ಷ ಸರ್ಕಾರದ ಬಜೆಟ್ ಮೇಲೆ ನಾನು ಮಾತನಾಡಿದ್ದೇನೆ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕಠಿಣವಾಗಿ ಮಾತನಾಡುತ್ತಿದ್ದೆ. ಆದರೆ ಈಗ ಸಂಖ್ಯಾಬಲದ ಆಧಾರವೆಂದು ಹೊಸ ನಿಯಮ ಜಾರಿಗೆ ತಂದು ನನ್ನ ಭಾಷಣವನ್ನು ಹತ್ತಿಕ್ಕಲಾಗುತ್ತಿದೆ ಎಂದು ಕೋಪಗೊಂಡು ಹೇಳಿದ್ದಾರೆ.
ಮಾತನ್ನು ಮುಂದುವರೆಸಿ, ಸೈನಿಕ ಹುಳಕಾಟದಿಂದ ಮೆಕ್ಕೆಜೋಳ ಎಲ್ಲಾವೂ ಹಾಳಾಗಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅತಿಯಾದ ಮಳೆಯಿಂದ ಕೂಡಾ ಬೆಳೆಹಾನಿಯಾಗಿದೆ. ಪರಿಹಾರ ನೀಡಬೇಕಾದ ಎರಡು ಸರ್ಕಾರಗಳು ರೈತರ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿವೆ. ಅಷ್ಟೇ ಅಲ್ಲದೇ ಟಿಪ್ಪು ಜಯಂತಿ ವಿವಾದದಿಂದ ಕಾಂಗ್ರೆಸ್-ಬಿಜೆಪಿ ಒಬ್ಬರಿಗೊಬ್ಬರು ಪೈಪೋಟಿ ನಡೆಸುತ್ತಿದ್ದಾರೆ. ಈ ರೀತಿಯ ಪರವಿರೋಧ ಚರ್ಚೆಗೆ ಅರ್ಥವಿಲ್ಲ. ಬಿಜೆಪಿ ಅತಿರೇಕಕ್ಕೆ ಹೋಗಬಾರದು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಟಿಪ್ಪು ಜಯಂತಿಗೆ ಬೆಂಬಲ ನೀಡಿದ್ದರು. ಆದರೆ ಈಗ ವಿರೋದಿಸುತ್ತಿರುವುದು ಸರಿಯಲ್ಲ. ಅನಂತಕುಮಾರ ಹೆಗಡೆ ಮಂತ್ರಿಯಾಗಿ ಈ ರೀತಿ ಮುಸ್ಲಿಮರ ಓಟು ನನಗೆ ಬೇಕಿಲ್ಲ ಎಂದು ಮಾತನಾಡುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಯಾಗುತ್ತದೆ. ಮುಸ್ಲಿಂ ಮತ್ತು ಕ್ರೈಸ್ತರನ್ನು ಕಳುಹಿಸಿ 2ನೇ ಪಾಕಿಸ್ತಾನ ಹುಟ್ಟು ಹಾಕೋಕೆ ಆಗುತ್ತಾ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.