ಅಕ್ರಮ ಮದ್ಯ ಮಾರಾಟ ತಡೆದ ಯೋಧನ ಕುಟುಂಬಕ್ಕೆ ಬಹಿಷ್ಕಾರ

Public TV
2 Min Read

– ತಾಯಿ ಸತ್ತರೂ ಹೋಗದಂತೆ ಗ್ರಾಮಸ್ಥರಿಗೆ ತಾಕೀತು

ಗದಗ: ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆದ ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿ, ಯೋಧನ ತಾಯಿ ಮೃತಪಟ್ಟರೂ ಸ್ಥಳೀಯರು ಅಂತ್ಯಕ್ರಿಯೆಗೆ ಹೊದರೆ 10 ಸಾವಿರ ರೂ. ದಂಡ ಘೋಷಣೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಉಳ್ಳಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಕುರಿತು ಪಬ್ಲಿಕ್ ಟಿವಿ ಸುದ್ದಿ ಮಾಡುತ್ತಿದ್ದಂತೆ ತಾಲೂಕು ಆಡಳಿತ ಹಾಗೂ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

ಯೋಧ ಬಾಬಣ್ಣ ಲಮಾಣಿ ಕುಟುಂಬವನ್ನು ಗ್ರಾಮದಿಂದ ಬಹಿಷ್ಕರಿಸಲಾಗಿದೆ. ಲಾಕ್‍ಡೌನ್ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ ಲಮಾಣಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ. ಈ ಕುರಿತು ಯೋಧ ಬಾಬಣ್ಣ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಅವರ ಮೇಲೆ ಕ್ರಮ ಜರುಗುವಂತೆ ಮಾಡಿದ್ದರು. ಈ ಸಿಟ್ಟಿನಿಂದಾಗಿ ಯೋಧನ ಕುಟುಂಬಕ್ಕೆ ಗ್ರಾಮದ ಯಾರೊಬ್ಬರು ನೆರವಾಗದಂತೆ ಕೃಷ್ಣಪ್ಪ ಲಮಾಣಿ ಊರಿನ ಜನರಿಗೆ ಆದೇಶ ಮಾಡಿ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಇಂದು ಯೋಧನ ತಾಯಿ ಸಕ್ರವ್ವ ಲಮಾಣಿ ಮೃತಪಟ್ಟಿದ್ದಾರೆ. ಈ ವೇಳೆ ಗ್ರಾಮಸ್ಥರು ಯಾರೂ ಭಾಗವಹಿಸಿಲ್ಲ. ಯೋಧ ಬಾಬಣ್ಣ ಕಣ್ಣೀರಿಡುತ್ತಿದ್ದಾರೆ. ಬಾಬಣ್ಣ ಜಮ್ಮು ಕಾಶ್ಮೀರದಲ್ಲಿ ಸೇನೆಯಲ್ಲಿ ನಾಯಕನಾಗಿ ಸೇವೆಸಲ್ಲಿಸುತ್ತಿದ್ದಾರೆ. ರಜೆಗೆಂದು ಊರಿಗೆ ಬಂದಿದ್ದರು. ಏ.16 ಕ್ಕೆ ಯೋಧ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಲಾಕ್‍ಡೌನ್ ಹಿನ್ನೆಲೆ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಈ ಸಂದರ್ಭದಲ್ಲಿ ಅಕ್ರಮ ತಡೆಯಲು ಮುಂದಾಗಿದ್ದಕ್ಕೆ ಈ ಶಿಕ್ಷೆ ನೀಡಲಾಗಿದೆ. ಈಗ ತಾಯಿ ಸಕ್ರವ್ವ ಮೃತಪಟ್ಟಿದ್ದಾರೆ. ಅವರ ಮನೆಗೆ ಯಾರಾದರೂ ಹೋದರೆ 10 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಹೀಗಾಗಿ ಯಾರೂ ಬರುತ್ತಿಲ್ಲ. ಇಷ್ಟೆಲ್ಲ ರಾದ್ಧಾಂತ ನಡೆದರೂ ತಾಲೂಕು ಹಾಗೂ ಜಿಲ್ಲಾಡಳಿತ ಇತ್ತ ತಲೆ ಹಾಕಿರಲಿಲ್ಲ.

ಪಬ್ಲಿಕ್ ಟಿವಿ ವರದಿ ನೋಡಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಅಧಿಕಾರಿಗಳು ಯೋಧನ ನೆರವಿಗೆ ಬಂದಿದ್ದಾರೆ. ಗ್ರಾ.ಪಂ. ಸದಸ್ಯನ ಆದೇಶ ಮೇರೆಗೆ ಸ್ಥಳೀಯರು ಬಹಿಷ್ಕಾರ ಮಾಡಿದ್ದರು. ಯೋಧನ ತಾಯಿ ಮೃತಪಟ್ಟ ವೇಳೆ ಸ್ಥಳೀಯರು ಸಹ ತೆರಳಿರಲಿಲ್ಲ. ಇದೀಗ ಸ್ಥಳೀಯರನ್ನು ಪೊಲೀಸರು ಮನವೊಲಿಸಿದ್ದು, ಅವರ ಸಮ್ಮುಖದಲ್ಲೇ ಯೋಧನ ತಾಯಿ ಸಕ್ರವ್ವ ಅವರ ಅಂತ್ಯಕ್ರಿಯೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *