ರಾಯಚೂರು: ಜಿಲ್ಲೆಯಲ್ಲಿ ಮನೆ ಕಟ್ಟಲು ಮರಳು ಸಿಗುತ್ತಿಲ್ಲ. ಆದರೆ ಕಳ್ಳತನದಿಂದ ಹೊರರಾಜ್ಯಕ್ಕೆ ನೂರಾರು ಟನ್ಗಟ್ಟಲೇ ಅಕ್ರಮ ಮರಳು ಸಾಗಣೆಯಾಗುತ್ತಿದೆ.
ದೇವದುರ್ಗ ತಾಲೂಕಿನ ಮೆದರಗೋಳ ಗ್ರಾಮದ ಬಳಿ ಕೃಷ್ಣ ನದಿಯಲ್ಲಿ ರಾತ್ರಿ ಹಗಲೆನ್ನದೇ ನಿಯಮಬಾಹಿರವಾಗಿ ಮರಳುಗಾರಿಕೆ ನಡೆದಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಾತ್ರೋರಾತ್ರಿ ಮರಳು ಸಾಗಣೆ ಮಾಡುತ್ತಿದ್ದ ಲಾರಿಗಳನ್ನ ತಡೆದು ಗಲಾಟೆ ಮಾಡಿದ್ದಾರೆ.
ಕಳ್ಳ ಸಾಗಣೆದಾರರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. 5 ವರ್ಷದ ಅವಧಿಗೆ 3 ಲಕ್ಷದ 19 ಸಾವಿರ ಮೆಟ್ರಿಕ್ ಟನ್ ಮರಳುಗಾರಿಕೆಗೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಈಗಾಗಲೇ ಲೆಕ್ಕವಿಲ್ಲದಷ್ಟು ಮರಳನ್ನ ಅಕ್ರಮ ಸಾಗಣೆ ಮಾಡಿದ್ದಾರೆ ಅಂತ ಸಾರ್ವಜನಿಕರು ಆರೋಪಿಸಿದ್ದಾರೆ.
ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಸ್ಥಳೀಯ ಹೋರಾಟಗಾರರಾದ ರಘುವೀರ್ ನಾಯಕ್ ಅವರು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.