ಅಕ್ರಮ ಮಾರಾಟ – ಮನೆಗೆ ನುಗ್ಗಿ ಮದ್ಯಗಳನ್ನು ನಾಶಗೊಳಿಸಿದ ಮಹಿಳೆಯರು

Public TV
2 Min Read

ಕಾರವಾರ: ಅಕ್ರಮವಾಗಿ ದಂಧೆ ಮಾಡುತ್ತಿದ್ದವರ ಮನೆಗಳಿಗೆ ನೂರಾರು ಮಹಿಳೆಯರು ನುಗ್ಗಿ, ಮಾರಾಟಕ್ಕೆ ತರಲಾಗಿದ್ದ ಮದ್ಯದ ಪೊಟ್ಟಣಗಳನ್ನು ಪತ್ತೆ ಹಚ್ಚಿ ನಾಶಪಡಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಿಕೇರಿ ಸಮೀಪದ ದೇಶಪಾಂಡೆ ನಗರದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಹಾಗೂ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೂ ಅಧಿಕಾರಿಗಳು ಕ್ರಮ ಜರುಗಿಸದೇ ನಿರ್ಲಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯರೇ ಅಕ್ರಮ ಮದ್ಯವನ್ನು ನಾಶ ಪಡಿಸಿದ್ದಾರೆ.

ಗ್ರಾಮದ ಕೆಲವು ಮನೆಗಳು ಹಾಗೂ ಬಾರ್ ಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಹಲವು ಯುವಕರು ಮದ್ಯದ ವ್ಯಸನದಿಂದ ಅನಾರೋಗ್ಯ ಪೀಡಿತರಾಗಿದ್ದರು. ಅಕ್ರಮ ಮದ್ಯ ಮಾರಾಟ ಸಂಬಂಧಿಸಿದಂತೆ ಇಲಾಖೆಗಳಿಗೆ ದೂರು ನೀಡಿದರೂ, ಕ್ರಮ ಕೈಗೊಳ್ಳದಿದ್ದರಿಂದ ಅಕ್ರಮ ಮದ್ಯ ಮಾರಾಟ ಅಧಿಕವಾಗಿ ನಡೆಯುತ್ತಿತ್ತು.

ಇದರಿಂದ ಆಕ್ರೋಶಗೊಂಡ ಸ್ಥಳೀಯ ಮಹಿಳೆಯರು ಹಾಗೂ ಮಂಜುನಾಥ ಪ್ರಗತಿ ಬಂಧು ಸಂಘದ ಸದಸ್ಯರು ಇಂದು ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳು ಹಾಗೂ ಮನೆಗೆ ತೆರಳಿ ಅಕ್ರಮ ಮದ್ಯವನ್ನು ಪತ್ತೆ ಮಾಡಿ ನಾಶ ಪಡಿಸಿದ್ದಾರೆ.

ತಾಲೂಕಿನಲ್ಲಿ ನಡೆಯುತ್ತಿರುವ ಇಂತಹ ಅನೇಕ ಕಾನೂನು ಬಾಹಿರ ಚಟುವಟಿಕೆಗಳಿಗೆ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದು ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಶಿರಸಿ ಡಿವೈಎಸ್ಪಿ ಹಾಗೂ ಶಿರಸಿ ಉಪ ವಿಭಾಗಾಧಿಕಾರಿಗಳು ಯಲ್ಲಾಪುರದಲ್ಲಿಯೇ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಬೇಕು ಎಂದು ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಟ್ರ್ಯಾಕ್ಟರ್‌ಗೆ ಗುದ್ದಿದ ಕಾರ್- ಐದು ಮಂದಿ ಸ್ಥಳದಲ್ಲೇ ಸಾವು

ಶ್ರೀ ಮಂಜುನಾಥ ಪ್ರಗತಿ ಬಂಧು ಸಂಘದ ಸದಸ್ಯರಾದ ನಕಲಿ ದೂಳು ಕೊಕರೆ, ನಾಗಿ ಲಕ್ಕು ಕೊಕರೆ, ಶೋಭಾ ದೋಂಡು ಕೊಕರೆ, ಸಾವಿತ್ರಿ ಮಾಕು ಕೊಕರೆ, ನಕಲಿ ನಾವು ಪಟಕಾರೆ, ಸವಿತಾ ಜಾನು ಖರಾತ್, ಕಣ್ಣಿಗೇರಿ ಗ್ರಾಮ ಪಂಚಾಯ್ತಿ ಸದಸ್ಯೆ ಲಕ್ಷ್ಮೀ ವಸಂತ ಪಾಟೀಲ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು. ಇದನ್ನೂ ಓದಿ: ಕೆಟ್ಟದಾಗಿ ಮುಟ್ಟಿದ್ದಕ್ಕಾಗಿ ಛೀಮಾರಿ ಹಾಕಿದ ಮಹಿಳೆಯನ್ನೇ ಕೊಲ್ಲಲು ಮುಂದಾದ ವ್ಯಕ್ತಿ ಅರೆಸ್ಟ್

Share This Article
Leave a Comment

Leave a Reply

Your email address will not be published. Required fields are marked *