ತುಮಕೂರು: ಜಿಲ್ಲೆಯಲ್ಲಿ ಜಾನುವಾರುಗಳನ್ನು ಅಮಾನವೀಯವಾಗಿ ಕೈ ಕಾಲುಗಳನ್ನು ಮುರಿದು ಗೋಣಿಚೀಲದಲ್ಲಿ ಹಾಕಿ ಕಸಾಯಿ ಖಾನೆಗೆ ಸಾಗಾಟ ಮಾಡುತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಹುಲಿಯೂರು ದುರ್ಗದ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ರೀತಿ ನಿರ್ಧಯವಾಗಿ ದನಗಳ ಕರುಗಳನ್ನು ಕಸಾಯಿಖಾನೆಗೆ ಸಾಗಿಸುವರ ಸಂಖ್ಯೆ ಹೆಚ್ಚಾಗಿದೆ. ಸುತ್ತಮುತ್ತಲಿನ ಹಳ್ಳಿಗಳಿಂದ ಗಂಡು ಕರುಗಳನ್ನು ಕಡಿಮೆ ದುಡ್ಡಿಗೆ ಖರೀದಿಸಿ ಅವುಗಳ ಕೈಕಾಲು ಮುರಿದು ಚೀಲದಲ್ಲಿ ಕಟ್ಟಿ ಸಾಗಿಸಲಾಗುತ್ತಿದೆ.
ದ್ವಿಚಕ್ರ ವಾಹನದಲ್ಲಿ ರಾಜರೋಷವಾಗಿ ಪ್ರತಿದಿನ ಕಸಾಯಿಖಾನೆಗೆ ಸಾಗಾಟ ಮಾಡಲಾಗುತ್ತಿದೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಾಗೂ ಪೊಲೀಸರಿಗೆ ಈ ವಿಷಯ ತಿಳಿದಿದ್ದರೂ ಮೌನವಾಗಿದ್ದಾರೆಂದು ಇಲ್ಲಿನ ಸ್ಥಳೀಯರು ಆರೋಪಿಸುತ್ತಿದ್ದಾರೆ.
ಹುಲಿಯೂರುದುರ್ಗ ಪೊಲೀಸ್ ಠಾಣೆ ಎದುರೇ ಕರುಗಳನ್ನು ಸಾಗಿಸಲಾಗುತ್ತದೆ. ಆದರೆ ಈವರೆಗೂ ಯಾರನ್ನು ಬಂಧಿಸಿಲ್ಲ. ಕುಣಿಗಲ್ ತಾಲೂಕಿನ ಹಲವೆಡೆ ಈ ರೀತಿ ಕರುಗಳನ್ನು ಸಾಗಾಟ ಮಾಡಲಾಗುತ್ತಿದೆ.
ಹೆಣ್ಣು ಕರುಗಳನ್ನು ಸಾಕುವ ರೈತರು, ಗಂಡು ಕರುಗಳು ನಿರುಪಯುಕ್ತ ಎಂದು ಮಾರಾಟ ಮಾಡುತ್ತಿದ್ದಾರೆ. ಕರುಗಳ ಕೈ ಕಾಲು ಮುರಿದು ಚೀಲದಲ್ಲಿ ತರುವ ದೃಶ್ಯ ನೋಡಿದರೆ ಎಲ್ಲರ ಮನ ಕಲುಕುವಂತಿದೆ.