ಅನೈತಿಕ ಸಂಬಂಧಕ್ಕೆ ಕೊಲೆ: ಅಂಬಾಜಿ ದುರ್ಗ ಬೆಟ್ಟದಲ್ಲಿ ಪತ್ತೆಯಾದ ಶವದ ಡಿಎನ್‍ಎ ಪರೀಕ್ಷೆಗೆ ಮುಂದಾದ ಪೊಲೀಸ್ರು!

Public TV
2 Min Read

ಚಿಕ್ಕಬಳ್ಳಾಪುರ: ಪತ್ನಿ, ಪ್ರಿಯಕರ ಮತ್ತು ಪ್ರಿಯಕರನ ತಾಯಿಯನ್ನು ಪತಿಯೇ ಹತ್ಯೆ ಮಾಡಿದ್ದಾನೆ ಎನ್ನುವ ಸಂಶಯಾಸ್ಪದ ಪ್ರಕರಣದಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಈ ಶವ ನಾಪತ್ತೆಯಾಗಿರುವ ಶ್ರೀನಾಥ್‍ ನದ್ದಾ ಎನ್ನುವ ಪ್ರಶ್ನೆ ಎದ್ದಿದೆ.

ಹೌದು. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಉಪ್ಪಾರಪೇಟೆ ಬಳಿಯ ಅಂಬಾಜಿ ದುರ್ಗ ಬೆಟ್ಟದಲ್ಲಿ ಜುಲೈ 26 ರಂದು ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಅಪರಿಚಿತ ವ್ಯಕ್ತಿಯನ್ನ ಕೊಲೆ ಮಾಡಿ ಗೋಣಿ ಚೀಲದಲ್ಲಿ ಹಾಕಿ ಅಂಬಾಜಿದುರ್ಗ ಬೆಟ್ಟದಲ್ಲಿ ಎಸೆಯಲಾಗಿತ್ತು. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಹತ್ಯಾ ಪ್ರಕರಣ ಬಯಲಾದ ಬೆನ್ನಲ್ಲೇ, ಸಿಕ್ಕಿರುವ ಅಪರಿಚಿತ ಶವ ಈ ಪ್ರಕರಣದಲ್ಲಿ ನಾಪತ್ತೆಯಾಗಿರುವ ಶ್ರೀನಾಥ್ ನದ್ದೇನಾ ಅನ್ನೋ ಅನುಮಾನಗಳು ದಟ್ಟವಾಗಿ ಮೂಡಿವೆ. ಕಾರಣ ಜುಲೈ 17 ರಂದು ಶ್ರೀನಾಥ್ ತಾಯಿ ತೀರಿಕೊಂಡ 3 ದಿನ ಅಂದರೆ ಜುಲೈ 20 ರಂದು, ಮೂರು ದಿನದ ಹಾಲೆರೆಯುವ ಕಾರ್ಯ ಮುಗಿಸಿಕೊಂಡು ಹೋಗಿದ್ದ ಶ್ರೀನಾಥ್ ಅಂದಿನಿಂದ ನಾಪತ್ತೆಯಾಗಿದ್ದ.

ಇದನ್ನೂ ಓದಿ: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಮೂವರನ್ನ ಕೊಂದನಾ ಪತಿ? – ಪೊಲೀಸರಿಗೆ ಇನ್ನೂ ಸಿಕ್ತಿಲ್ಲ ಸ್ಪಷ್ಟ ಮಾಹಿತಿ

ಇನ್ನೂ ಜುಲೈ 26 ರಂದು ಪತ್ತೆಯಾದ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿ, ಕೊಲೆಯಾಗಿ 5-6 ದಿನಗಳು ಆಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತು. ಈಗ ಈ ಹತ್ಯೆ ಪ್ರಕರಣದ ಬಯಲಾದ ಬೆನ್ನಲ್ಲೇ, ದಿನಾಂಕಗಳ ನಡುವಿನ ಅಂತರ ಹೋಲಿಕೆ ಆಗುತ್ತಿರುವ ಕಾರಣ ಪೊಲೀಸರಿಗೆ ಕೂಡ ಈ ಬಗ್ಗೆ ಅನುಮಾನ ಮೂಡಿದ್ದು, ಈ ಬಗ್ಗೆ ಮೃತದೇಹದ ಡಿಎನ್‍ಎ ಪರೀಕ್ಷೆಗೆ ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರ ಹಾಗೂ ಕಾಡುಗೋಡಿ ಪೊಲೀಸರು ಈ ದಿಕ್ಕಿನಲ್ಲೂ ಪ್ರಕರಣದ ತನಿಖೆಯನ್ನ ಚುರುಕುಗೊಳಿಸಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿಗೆ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅಂದಹಾಗೆ ಪತಿ ವೆಂಕಟರೆಡ್ಡಿ ಎಂಬಾತ ತನ್ನ ಪತ್ನಿ ಪ್ರೇಮಾ ಶ್ರೀನಾಥ್ ಜೊತೆ ಪರಾರಿಯಾಗಿದ್ದಕ್ಕೆ ಪತ್ನಿ ಪ್ರೇಮಾ, ಪ್ರಿಯಕರ ಶ್ರೀನಾಥ್ ಹಾಗೂ ಆತನ ತಾಯಿ ಭಾಗ್ಯಮ್ಮಳಿಗೆ ಕಿರುಕುಳ ಕೊಟ್ಟು ಹತ್ಯೆ ಮಾಡಿದ್ದಾನೆ ಎಂಬ ಆರೋಪಕ್ಕೆ ಗುರಿಯಾಗಿದ್ದಾನೆ. ಈ ಸಂಬಂಧ ಆರೋಪಿ ವೆಂಕಟರೆಡ್ಡಿಯನ್ನು ಕಾಡುಗೋಡಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *