ಕೆಲಸ ಮಾಡದಿದ್ರೆ ಜಿಲ್ಲೆಯವನಾದ್ರೂ ಸುಮ್ಮನೆ ಬಿಡೋದಿಲ್ಲ- ಅಧಿಕಾರಿಗೆ ಮಾಜಿ ಶಾಸಕ ಧಮ್ಕಿ

Public TV
1 Min Read

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕ ವಸಂತ ಬಂಗೇರ ಅಧಿಕಾರಿಗಳನ್ನು ಹೀನಾಯವಾಗಿ ನಡೆಸಿಕೊಳ್ಳೋದರ ಮೂಲಕ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

ಗುರುವಾರ ಚಾರ್ಮಾಡಿ ಘಾಟ್ ವೀಕ್ಷಣೆಗೆ ತೆರಳಿದ್ದ ವಸಂತ ಬಂಗೇರ ಅವರು ತನ್ನ ಬೆಂಬಲಿಗರ ಎದುರಲ್ಲಿಯೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಧಿಕಾರಿಗೆ ಕರೆ ಮಾಡಿದ ಬಂಗೇರ, `ಚಾರ್ಮಾಡಿಯಲ್ಲಿ ಎಲ್ಲಿವರೆಗೆ ನಿಮ್ಮ ರಸ್ತೆ ಬರುತ್ತದೆ. ಅಲ್ಲಿವರೆಗೆ ಚರಂಡಿಗಳನ್ನು ಸರಿಪಡಿಸಿ ನೀರು ಸರಿಯಾಗಿ ಹೋಗುವಂತೆ ಮಾಡಿ. ಇಲ್ಲಿವರೆಗೆ ಈ ರಸ್ತೆಗೆ ಬಂದಿದ್ದೀರಾ? ಎಷ್ಟು ಸಮಯವಾಯ್ತು ಈ ಕಡೆ ಬರದೆ? ಯಾಕ್ ಬರಲಿಲ್ಲ ಅಂತ ಪ್ರಶ್ನಿಸಿದ್ದಾರೆ.

ಉಡುಪಿಯವರಾಗಿದ್ದುಕೊಂಡು ನೀವೊಬ್ಬ ದಕ್ಷಿಣ ಕನ್ನಡ ಜಿಲ್ಲೆಯವರಾಗಿ ನಿಮಗೆ ಮಾನ ಮರ್ಯಾದೆ ಇದೆಯಾ? ಸಾರ್ವಜನಿಕ ರಸ್ತೆ ಈ ರೀತಿಯಾಗಲು ಕಾರಣ ಯಾರು? ನಿಮ್ಮ ಇಲಾಖೆ. ಹೀಗಾಗಿ 10 ದಿವಸದೊಳಗೆ ರಸ್ತೆ ಸರಿಪಡಿಸಿ ಕೊಡಿ. ಮಾಡದಿದ್ದರೆ ನಿಮ್ಮನ್ನು ಏನು ಮಾಡಬೇಕೆಂದು ನಮಗೆ ಗೊತ್ತಿದೆ. ನೀವು ನಮ್ಮ ಜಿಲ್ಲೆಯವರು ಅಂತ ನಿಮ್ಮನ್ನು ಸುಮ್ಮನೆ ಬಿಡೋದಿಲ್ಲ. ನಿಮಗೆ ನಾನು ಗೌರವ ಕೊಡುತ್ತೇನೆ. ಹೀಗಾಗಿ ಗೌರವ ಕೊಟ್ಟಾಗಲೂ ನೀವು ಕೆಲಸ ಮಾಡದಿದ್ದರೆ ಏನು ಮಾಡಬೇಕೋ ಅದನ್ನು ಮಾಡ್ತೀನಿ’ ಅಂತ ಜೋರು ದನಿಯಲ್ಲೇ ಗದರಿಸಿದ್ದಾರೆ.

ವಸಂತ ಬಂಗೇರ ಅಧಿಕಾರದಲ್ಲಿ ಇರುವಾಗಲೂ ದರ್ಪದಿಂದಲೇ ಕುಖ್ಯಾತಿ ಪಡೆದಿದ್ದು, ಸೋಲಿನ ಬಳಿಕವೂ ದರ್ಪ ಮುಂದುವರಿಸಿರೋದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *