ಎಲ್ಲ PIL ಗಳನ್ನು ನಾವೇ ವಿಚಾರಣೆ ನಡೆಸುವುದಾದರೆ ಜನ ಸರ್ಕಾರವನ್ನು ಆಯ್ಕೆ ಮಾಡಿರುವುದ್ಯಾಕೆ? – ಸುಪ್ರೀಂಕೋರ್ಟ್ ಗರಂ

By
1 Min Read

ನವದೆಹಲಿ: ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳನ್ನೂ ನಾವೇ ವಿಚಾರಣೆ ನಡೆಸುವುದಾದರೆ ಜನರು ಸರ್ಕಾರವನ್ನು ಆಯ್ಕೆ ಮಾಡಿರುವುದ್ಯಾಕೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕ, ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಅವರು ವಕೀಲರ ವಿರುದ್ಧ ಹರಿಹಾಯ್ದರು. ಪಶ್ಚಿಮ ಬಂಗಾಳಕ್ಕೆ ಅಕ್ರಮವಾಗಿ ನುಸುಳಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿ, ಬಂಧಿಸಬೇಕು ಮತ್ತು ಗಡಿಪಾರು ಮಾಡಬೇಕು ಎಂದು ಅಶ್ವಿನಿ ಉಪಾಧ್ಯಾಯ ಮನವಿ ಮಾಡಿದ್ದರು. ಕೋಟ್ಯಂತರ ಉದ್ಯೋಗಗಳು ಅಕ್ರಮ ವಲಸಿಗರಿಂದ ಭಾರತೀಯರಿಗೆ ದೊರೆಯುತ್ತಿಲ್ಲ, ಜೀವನೋಪಾಯದ ಹಕ್ಕಿಗೆ ದಕ್ಕೆಯಾಗುತ್ತಿದೆ ಎಂದು ಅವರು ವಾದಿಸಿದರು. ಇದನ್ನೂ ಓದಿ: ಐಎನ್‌ಎಸ್ ದೇಣಿಗೆ ವಂಚನೆ: ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ, ಪುತ್ರನ ವಿರುದ್ಧ ಪ್ರಕರಣ ದಾಖಲು

ಇದಕ್ಕೆ ಕೇಂದ್ರ ಸರ್ಕಾರದ ಪ್ರತಿವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಅರ್ಜಿಯ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದರು. ವಾದ ಪ್ರತಿವಾದ ಆಲಿಸಿದ ಸಿಜೆಐ ಎನ್.ವಿ ರಮಣ, ಇವು ರಾಜಕೀಯ ವಿಷಯಗಳು, ಇವುಗಳನ್ನು ಸರ್ಕಾರದೊಂದಿಗೆ ಚರ್ಚಿಸಿ ಈ ಅರ್ಜಿಗಳನ್ನು ನಾವೇ ವಿಚಾರಣೆ ನಡೆಸುವುದಾದರೆ ನಾವು ಸರ್ಕಾರ ಯಾಕೆ ಆರಿಸಿದ್ದೇವೆ ಎಂದು ಪ್ರಶ್ನಿಸಿದರು.

ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು, ಇದನ್ನು ಚರ್ಚಿಸಲು ಲೋಕಸಭೆ ರಾಜ್ಯಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದರೆ ಉತ್ತಮ. ಅದಾಗ್ಯೂ ಕೇಂದ್ರ ಸರ್ಕಾರ ಅಫಿಡೆವಿಟ್ ಸಲ್ಲಿಸುವುದಾದರೇ ನಾವು ವಿಚಾರಣೆಗೆ ಪಟ್ಟಿ ಮಾಡುತ್ತೇವೆ ಎಂದರು. ಇದನ್ನೂ ಓದಿ: ಪಾಕ್‍ನಲ್ಲಿ ತಿಕ್ಕಾಟ – ಭಾರತದ ಸಹಾಯ ಕೇಳಿದ ಪಿಒಕೆ ಪ್ರಜೆ

ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶೀಯರು ಪಶ್ಚಿಮ ಬಂಗಾಳಕ್ಕೆ ನುಸುಳಲು ಸರ್ಕಾರಿ ನೌಕರರು, ಪೊಲೀಸ್ ಸಿಬ್ಬಂದಿ ಮತ್ತು ಭದ್ರತಾ ಪಡೆಗಳು ಸಹಾಯ ಮಾಡುತ್ತಿದೆ. ಅಂತವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮತ್ತು ರಾಜ್ಯಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಬೇಕು ಎಂದು ಪ್ರಾರ್ಥಿಸಲಾಗಿತ್ತು. ಒಟ್ಟು ಐದು ಕೋಟಿ ನುಸುಳುಕೋರರು ಭಾರತಕ್ಕೆ ಅಕ್ರಮ ಪ್ರವೇಶ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *