ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಿದ್ರೆ ಬಾಂಬ್ ಸ್ಫೋಟ ಆಗ್ತಿರಲಿಲ್ಲ: ಗೋವಾ ಸಿಎಂ ಪ್ರಮೋದ್ ಸಾವಂತ್

By
2 Min Read

ಚಿತ್ರದುರ್ಗ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಿದ್ದರೆ ಬಾಂಬ್ ಸ್ಫೋಟ ಆಗುತ್ತಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pramod Sawant) ಹರಿಹಾಯ್ದರು.

ಬಿಜೆಪಿ ಬೂತ್ ಪ್ರಮುಖರ ಸಭೆಯಲ್ಲಿ ಭಾಗಿಯಾಗಲು ಚಿತ್ರದುರ್ಗಕ್ಕೆ ಆಗಮಿಸಿರುವ ಪ್ರಮೋದ್ ಸಾವಂತ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲದಂತಾಗಿದೆ. ಶೀಘ್ರದಲ್ಲೇ ರಾಜ್ಯದ ಲೋಕಸಭೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ ಆಗಲಿದೆ. ಪೊಲೀಸರಿಗೆ ಫ್ರೀಹ್ಯಾಂಡ್ ಇಲ್ಲದ ಕಾರಣ ಬಾಂಬರ್ ಬಂಧನ ವಿಳಂಬವಾಗಿದೆ. ಬಾಂಬರ್ ಬಂಧನ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಆಗುತ್ತಿದೆ ಎಂದು ಕರ್ನಾಟಕ ಸರ್ಕಾರದ ವಿರುದ್ಧ ಆರೋಪ ಮಾಡಿದರು. ಇದನ್ನೂ ಓದಿ: ಹೂಡಿಯ ಪ್ರಾರ್ಥನಾ ಮಂದಿರದ ಬಳಿ ಬಟ್ಟೆ ಬದಲಾಯಿಸಿ ಟೋಪಿ ಬಿಟ್ಟು ಹೋದ ಬಾಂಬರ್‌

ಕಾಂಗ್ರೆಸ್ ಜನರನ್ನು ವಿಭಜನೆ ಮಾಡುತ್ತದೆ. ಕಾಂಗ್ರೆಸ್ ಅಂದರೆ ಸ್ಕ್ಯಾಮ್, ಕಾಂಗ್ರೆಸ್ ಅಂದರೆ ಕರಪ್ಟ್. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದ್ದು, ಇದು ಆರಂಭ. ಕಾಂಗ್ರೆಸ್ ಕಾಲದಲ್ಲಿ ಈ ಹಿಂದಿನಂಥ ಸ್ಥಿತಿ ನಿರ್ಮಾಣವಾಗಿದೆ. ಕರಪ್ಟ್ ಕಾಂಗ್ರೆಸ್ ಮನೆಗೆ ಕಳಿಸಿ, ಡಬಲ್ ಇಂಜಿನ್ ಸರ್ಕಾರ ತನ್ನಿ ಎಂದು ಜನತೆಗೆ ಕರೆ ನೀಡಿದರು.

ರಾಜ್ಯದಲ್ಲಿ ಡಬಲ್ ಇಂಜನ್ ಸರ್ಕಾರವಿದ್ದಾಗ ಅಭಿವೃದ್ಧಿ ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿಂದ ಅಭಿವೃದ್ಧಿಗೆ ಬ್ರೇಕ್ ಬಿದ್ದಿದೆ. ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿ ಸರ್ಕಾರ ಆಡಳಿತಕ್ಕೆ ಬರಬೇಕಿದೆ. ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ಭರವಸೆಯಿದೆ. ಪ್ರಧಾನಿ ಮೋದಿ ನೀಡಿದ ಗ್ಯಾರಂಟಿ ಪೂರ್ಣಗೊಳಿಸುತ್ತಾರೆ. ಕಾಂಗ್ರೆಸ್ ಸುಳ್ಳು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದಿದೆ ಎಂದು ಟೀಕಿಸಿದರು. ಇದನ್ನೂ ಓದಿ: ವೋಲ್ವೋ ಬಸ್ಸಿನಲ್ಲಿ ಸಿಸಿಟಿವಿ ನೋಡಿ ಹೆದರಿದ ಬಾಂಬರ್‌!

ಕರ್ನಾಟಕ ರಾಜ್ಯದ ಜನರಿಗೆ ಈಗಾಗಲೇ ಅನುಭವಕ್ಕೆ ಬಂದಿದೆ. ಕಾಂಗ್ರೆಸ್ ಚುನಾವಣೆಗೆ ಮುನ್ನ ಘೋಷಿಸಿದ ಒಂದು ಗ್ಯಾರಂಟಿಯೂ ಪೂರ್ಣಗೊಳಿಸಿಲ್ಲ. ಕರ್ನಾಟಕದ ಜನ ಈಗ ಪಶ್ಚಾತ್ತಾಪ ಪಡುವಂತಾಗಿದೆ. ಬೈ ಮಿಸ್ಟೇಕ್ ಕಾಂಗ್ರೆಸ್‌ಗೆ ಆಡಳಿತಕ್ಕೆ ಅವಕಾಶ ನೀಡಿದ ಭಾವನೆ ಜನರಲ್ಲಿದೆ. ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ಶೀಘ್ರ ಬರುವ ವಿಶ್ವಾಸವಿದೆ. 70 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಲಾಗದ ಸಾಧನೆ ಮೋದಿ ಕಾಲದಲ್ಲಾಗಿದೆ. ಎಲ್ಲಾ ವಿಭಾಗದಲ್ಲೂ ಅಭಿವೃದ್ಧಿ ಕಾರ್ಯಕ್ರಮಗಳಾಗಿವೆ ಎಂದು ಬಣ್ಣಿಸಿದರು.

ರಾಜ್ಯದ 28 ಕ್ಕೆ 28 ಕ್ಷೇತ್ರದಲ್ಲಿ ಎನ್‌ಡಿಎ ಮತ್ತು ಮೋದಿಗೆ ಗೆಲುವಾಗಲಿದೆ. ಬಿಜೆಪಿ ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆ ಮಾಡುವುದಿಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಬಿಜೆಪಿಯ ಮೂಲಮಂತ್ರ ಎಂದರು. ಇದನ್ನೂ ಓದಿ: ಸಿಸಿಬಿಯಿಂದ ರಾಮೇಶ್ವರಂ ಕೆಫೆ ಬಾಂಬರ್ ರೇಖಾಚಿತ್ರ ಬಿಡುಗಡೆ

Share This Article