ಕಾಂಗ್ರೆಸ್ ನವರು ಕರೆದ್ರೆ ಮೈತ್ರಿಗೆ ಸಿದ್ಧ: ಹೆಚ್.ಡಿ.ದೇವೇಗೌಡ

Public TV
1 Min Read

ಬೆಂಗಳೂರು: ಕಾಂಗ್ರೆಸ್ ನವರು ನಮ್ಮನ್ನು ಕರೆದ್ರೆ ನಾವು ಮೈತ್ರಿಗೆ ಸಿದ್ಧ ಎಂಬ ಅಚ್ಚರಿಯ ಹೇಳಿಕೆಯೊಂದನ್ನು ಜೆಡಿಎಸ್ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನೀಡಿದ್ದಾರೆ.

ಇನ್ನೇನು ಕೆಲವೇ ಸಮಯದಲ್ಲಿ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡುತ್ತಿದೆ. ಕಾಂಗ್ರೆಸ್ ಒಂದು ದೊಡ್ಡ ರಾಷ್ಟ್ರೀಯ ಪಕ್ಷ ಮತ್ತು ಜಾತ್ಯಾತೀತ ಅಂತಾ ಹೇಳಿಕೊಳ್ಳುತ್ತಿದೆ. ನಾವು ಪಕ್ಷದ ಹೆಸರಿನಲ್ಲಿಯೇ ಜಾತ್ಯಾತೀತವನ್ನು ಹೊಂದಿದ್ದೇವೆ. ಕಾಂಗ್ರೆಸ್ ನಮಗೆ ಎಷ್ಟು ಸೀಟ್ ಬಿಟ್ಟುಕೊಡುತ್ತವೆ ಹಾಗು ನಾವು ಅವರಿಗೆ ಎಷ್ಟು ಸೀಟ್ ಬಿಟ್ಟುಕೊಡುತ್ತೇವೆ ಎಂಬುದು ಅಲ್ಲಿಯೇ ನಿರ್ಣಯವಾಗಬೇಕಿದೆ ಅಂತಾ ದೇವೇಗೌಡರು ಹೇಳಿದ್ದಾರೆ.

ಕಳೆದು ಒಂದು ವಾರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ ಜೆಡಿಎಸ್ ವಿರುದ್ಧ ಸತತವಾಗಿ ವಾಗ್ದಾಳಿ ನಡೆಸುತ್ತಾ ಬಂದಿದ್ದರು. ಕಾಂಗ್ರೆಸ್ ನಾಯಕರ ಹೇಳಿಕೆಗೆ ದೇವೇಗೌಡ್ರು ಸಹ ತಿರುಗೇಟು ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಇಂದು ದೇವೇಗೌಡ್ರು ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ವ್ಯಂಗ್ಯ ಮಾಡಿದ್ರಾ ಹೆಚ್‍ಡಿಡಿ?: ಕಳೆದ ಕೆಲವು ದಿನಗಳಿಂದ ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂಬ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ. ಹಾಸನದಲ್ಲಿ ದೇವೇಗೌಡರ ಮಕ್ಕಳನ್ನು ಗೆಲ್ಲಿಸಿದ್ದು ಸಾಕು ಎಂಬ ಸಿಎಂ ಆಡಿಯೋ ಸಹ ವೈರಲ್ ಆಗಿತ್ತು. ರಾಹುಲ್ ಗಾಂಧಿ ಸಹ ನೇರಾ ನೇರ ಮಾಜಿ ಪ್ರಧಾನಿಗಳನ್ನೇ ಟಾರ್ಗೆಟ್ ಮಾಡಿಕೊಂಡು ವಾಗ್ದಾಳಿ ನಡೆಸಿದ್ರು. ಈ ಎಲ್ಲ ಬೆಳವಣಿಗೆಗೆ ಸಂಬಂಧಪಟ್ಟಂತೆ ದೇವೇಗೌಡ್ರು ಕಾಂಗ್ರೆಸ್ ಗೆ ತಮ್ಮ ಮೊನಚಾದ ಮಾತುಗಳಿಂದ ಕಾಂಗ್ರೆಸ್ ಗೆ ವ್ಯಂಗ್ಯ ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಒಟ್ಟಿನಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿಗೆ ಸಿದ್ಧ ಎಂಬ ದೇವೇಗೌಡರ ಹೇಳಿಕೆ ಸಾಕಷ್ಟು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಚುನಾವಣೆಯನ್ನು ಎದುರಿಸುತ್ತಾ ಅಥವಾ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

Share This Article
Leave a Comment

Leave a Reply

Your email address will not be published. Required fields are marked *