ಕಾಂಗ್ರೆಸ್‌ ಶಾಸಕರಿಗೆ ಮಂಪರು ಪರೀಕ್ಷೆ ಮಾಡಿಸಿದ್ರೆ ಸತ್ಯ ಹೊರ ಬರುತ್ತೆ: ಕೋರ್ಟ್‌ಗೆ ಸಿ.ಟಿ ರವಿ ಮನವಿ

Public TV
3 Min Read

ಬೆಂಗಳೂರು: ಕಾಂಗ್ರೆಸ್‌ ಶಾಸಕರಿಗೆ 50 ಕೋಟಿ ಆಫರ್‌ ಬಂದಿದೆ ಎಂಬ ಸಿಎಂ ಹೇಳಿಕೆ ಮೇಲೆ ನ್ಯಾಯಾಲಯ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು. ಯಾರೆಲ್ಲಾ ಶಾಸಕರು ತಮಗೆ ಆಫರ್‌ ಬಂದಿದೆ ಎಂದು ಆರೋಪ ಮಾಡುತ್ತಿದ್ದಾರೋ ಅವರ ಮಂಪರು ಪರೀಕ್ಷೆ (Narco Analysis Test) ಮಾಡಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ (CT Ravi) ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ʻಸರ್ಕಾರ ಕೆಡವಲು ಬಿಜೆಪಿಯಿಂದ (BJP) 50 ಕೋಟಿ ಅಲ್ಲ 100 ಕೋಟಿ ರೂ. ಆಫರ್ ಮಾಡಿದ್ದಾರೆ’ ಎಂಬ ಶಾಸಕ ಗಣಿಗ ರವಿಕುಮಾರ್ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ 50 ಕೋಟಿ ಅಲ್ಲ 100 ಕೋಟಿ ರೂ. ಆಫರ್ : ಗಣಿಗ ರವಿ

ಸಿಎಂ ಅವರು ನಮ್ಮ ಮೇಲೆ ಶಾಸಕರ ಖರೀದಿ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹಳ ಗಂಭೀರವಾಗಿದ್ದು, ಖುದ್ದು ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕಿದೆ. ಸಿಎಂ ಹೇಳಿಕೆ ಮೇಲೆ ನ್ಯಾಯಾಲಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಇನ್ನೂ ಗಣಿಗ ರವಿ ಸೇರಿ ಯಾರ‍್ಯಾರು ಶಾಸಕರು ತಮಗೆ ಆಫರ್ ಬಂದಿದೆ ಎಂದು ಹೇಳ್ತಿದ್ದಾರೋ ಆ ಎಲ್ಲ ಶಾಸಕರ ಮಂಪರು ಪರೀಕ್ಷೆ ಮಾಡಿಸಬೇಕು. ಕಾಂಗ್ರೆಸ್ ಶಾಸಕರ ಮಂಪರು ಪರೀಕ್ಷೆ ಮಾಡಿದರೆ ಸತ್ಯ ಗೊತ್ತಾಗುತ್ತೆ ಎಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಬಿಜೆಪಿಯಿಂದ ಯಾರು ಇವರನ್ನ ಸಂಪರ್ಕಿಸಿದ್ರು, ಯಾವಾಗ, ಏನು ಆಫರ್ ಕೊಟ್ಟಿದ್ದರು ಅನ್ನೋದು ಮಂಪರು ಪರೀಕ್ಷೆಯಲ್ಲಿ ಗೊತ್ತಾಗುತ್ತೆ. ಸಿಎಂ ಇಂಥ ಗಂಭೀರ ಆರೋಪ ಮಾಡಿ ಯಾಕೆ ಸುಮ್ಮನಿದ್ದಾರೆ? ಅವರ ಹೇಳಿಕೆಗೆ ಆಧಾರ ಇಲ್ಲ ಅಂತ ಸಿಎಂ ಸುಮ್ಮನಿದ್ದಾರಾ? ಸಿಎಂ ತಾವೇ ಮಾಡಿರುವ ಆರೋಪ ಬಗ್ಗೆ ತನಿಖೆ ನಡೆಸಲಿ, ಎಸ್‌ಐಟಿ ರಚಿಸಿ ತನಿಖೆಗೆ ಕೊಡಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಶಾಸಕರನ್ನು ಖರೀದಿ ಮಾಡೋ ಕೆಪಾಸಿಟಿ ಬಿಜೆಪಿಗರಿಗಿಲ್ಲ: ಶಿವಗಂಗಾ ಬಸವರಾಜ್ ವ್ಯಂಗ್ಯ

ಸಿಎಂಗೆ ಸಿ.ಟಿ ರವಿ ಸವಾಲ್:
ಸಿಎಂ ಆರೋಪದಲ್ಲಿ ಸತ್ಯ ಇದ್ರೆ, ಧಮ್-ತಾಕತ್ ಇದ್ರೆ ಮೊಕದ್ದಮೆ ದಾಖಲಿಸಿ ತನಿಖೆ ಮಾಡಿಸಲಿ. ತನಿಖೆ ಮಾಡಿಸಿದರೆ ನಿಮ್ಮ ಬುಡಕ್ಕೆ ಬರುತ್ತೆ ಅಂತ ಹೆದರುತ್ತಿದ್ದೀರಾ ಮುಖ್ಯಮಂತ್ರಿಗಳೇ ಅಂತ ಕೆಣಕಿದ್ದಾರೆ. ಇದನ್ನೂ ಓದಿ: DCSನಲ್ಲಿ ಸರ್ವರ್‌ ಸಮಸ್ಯೆ, KSRTC ಬಸ್‌ಗಳಿಗೆ ತಟ್ಟಿದ ಬಿಸಿ – ಮಡಿಕೇರಿಯಲ್ಲಿ ಪ್ರಯಾಣಿಕರು ಹೈರಾಣು

ಶಾಸಕ ಗಣಿಗ ರವಿ ಹೇಳಿದ್ದೇನು?
ಸರ್ಕಾರ ಕೆಡವಲು ಬಿಜೆಪಿಯಿಂದ 50 ಕೋಟಿ ಅಲ್ಲ 100 ಕೋಟಿ ರೂ. ಆಫರ್ ನೀಡಿದ್ದಾರೆ. ಇದಕ್ಕೂ ಮುನ್ನ ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿಕೆ ನೀಡಿದ್ದರು. ಬಿಜೆಪಿಯನ್ನು ಇಬ್ಬರು ಕಾಂಗ್ರೆಸ್ ಶಾಸಕರು ಸಂಪರ್ಕಿಸಿದ್ದಾರೆ. ಶೀಘ್ರದಲ್ಲೇ ಆಪರೇಷನ್ ಕಮಲದ ಸಾಕ್ಷಿ ಬಿಡುಗಡೆ ಮಾಡುತ್ತೇನೆ. ಬಿಜೆಪಿ-ಜೆಡಿಎಸ್ ಸರ್ಕಾರ ಬೀಳಿಸುವ ತವಕದಲ್ಲಿದ್ದಾರೆ. ಕಾಂಗ್ರೆಸ್‌ನ 50 ಶಾಸಕರಿಗೆ ಆಮಿಷ ಒಡ್ಡಲಾಗಿದೆ. ಕಾಂಗ್ರೆಸ್ ಶಾಸಕರು 50 ಕೋಟಿ ರೂ.ಗೆ ಬಗ್ಗಿಲ್ಲ ಎಂದು ಶಾಸಕರಿಗೆ ತಲಾ 100 ಕೋಟಿ ಆಫರ್ ನೀಡಿದ್ದಾರೆ ಎಂದು ಬಾಂಬ್‌ ಸಿಡಿಸಿದ್ದಾರೆ.

ಕಳೆದ ಸರ್ಕಾರದಲ್ಲಿ ಲೂಟಿ ಮಾಡಿರುವ ಹಣದಿಂದ ಕಾಂಗ್ರೆಸ್ ಸರ್ಕಾರ ಕೆಡವಲು ಬಿಜೆಪಿ ಪ್ಲಾನ್ ಮಾಡಿದೆ. ಕೆಲವರು ಪೆನ್‌ಡ್ರೈವ್ ತೋರಿಸಿ ರಿವಿಲ್ ಮಾಡಿಲ್ಲ, ನಾವು ತೋರಿಸಿದರೆ ಖಂಡಿತ ರಿವಿಲ್ ಮಾಡುತ್ತೇವೆ. ನಮ್ಮ ಬಳಿ ಆಪರೇಷನ್ ಕಮಲಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳಿವೆ. ಕಿತ್ತೂರು ಶಾಸಕ ಬಾಬು, ಚಿಕ್ಕಮಗಳೂರು ಶಾಸಕ ತಮ್ಮಯ್ಯರನ್ನ ಯಾಕೆ ಸಂಪರ್ಕಿಸಿದ್ದರು? ಯಾವ್ಯಾವ ಹೋಟೆಲ್, ಏರ್‌ಪೋರ್ಟ್, ಗೆಸ್ಟ್ ಹೌಸ್‌ನಲ್ಲಿ ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಆಡಿಯೋ, ವಿಡಿಯೋ, ಸಿಡಿ, ಪೆನ್‌ಡ್ರೈವ್ ಸೇರಿದಂತೆ ಮುಂದುವರಿದು ಐ ಕ್ಲೌಡ್ ಕೂಡ ಇದೆ ಎಂದರು. ಇದನ್ನೂ ಓದಿ: 40% ಕಮಿಷನ್‌ ಆರೋಪದಂತೆ ಕೋವಿಡ್‌ನಲ್ಲೂ ಕ್ಲೀನ್ ಚಿಟ್ ಸಿಗಲಿದೆ: ಸೋಮಣ್ಣ ವಿಶ್ವಾಸ

Share This Article