ಕೇಂದ್ರ ಸರ್ಕಾರ 2 ರೂ. 50 ಪೈಸೆಗೆ ವಿದ್ಯುತ್ ನೀಡಿದ್ರೆ ಬಿಎಸ್‍ವೈ ಹಿಂದೆ ಅಲೆಯುವೆ: ಡಿಕೆಶಿ

Public TV
2 Min Read

ಹುಬ್ಬಳ್ಳಿ: ಕೇಂದ್ರ ಸರ್ಕಾರ ಪ್ರತಿ ಯೂನಿಟ್ ವಿದ್ಯುತ್‍ಗೆ 2 ರೂಪಾಯಿ 50 ಪೈಸೆಯಲ್ಲಿ ನೀಡಿದ್ದೇ ಆದಲ್ಲಿ ನನ್ನ ವೈಯಕ್ತಿಕ ಕೆಲಸ ಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಿಂದೆ ಅಲೆಯುವೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ರಾಜ್ಯದ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಪ್ರತಿ ಯೂನಿಟ್‍ಗೆ 2 ರೂಪಾಯಿ 50 ಪೈಸೆಗೆ ವಿದ್ಯುತ್ ನೀಡಲು ಕೇಂದ್ರ ಸಿದ್ಧವಿದೆ ಎಂದಿದ್ದಾರೆ. ಕೇಂದ್ರ ಸರ್ಕಾರ 2.50 ರೂಪಾಯಿ ಗೆ ವಿದ್ಯುತ್ ನೀಡಿದ್ರೆ, ಎಲ್ಲ ಖರೀದಿ ಪ್ರಕ್ರಿಯೆ ರದ್ದು ಮಾಡುವೆ ಅಂದ್ರು.

ನನ್ನ ಮೇಲೆ ಐಟಿ ದಾಳಿ ನಡೆದಾಗ ಅದೊಂದು ದೇಶದ ದೊಡ್ಡ ಹಗರಣ ಎನ್ನುವಂತೆ ಬಿಜೆಪಿಯವರು ಬಿಂಬಿಸಿದ್ರು. ಆದ್ರೆ ವಿಧಾನ ಸಭೆಯಲ್ಲಿ ಯಾಕೆ ಈ ಬಗ್ಗೆ ಚರ್ಚೆ ಮಾಡಿಲ್ಲ. ಬಿಜೆಪಿ ನಾಯಕರು ಹಿಟ್ ಎಂಡ್ ರನ್ ಇದ್ದ ಹಾಗೆ ಅಂದ ಅವರು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್ ಶಡ್ಡಿಂಗ್ ಮಾಡೋದಿಲ್ಲ. ರಾಜ್ಯದ ರೈತರಿಗೆ ಬೇಸಿಗೆಯಲ್ಲಿ ಸಂಪೂರ್ಣ ವಿದ್ಯುತ್ ನೀಡಲಾಗುವುದು ಅಂತ ಅವರು ಹೇಳಿದ್ರು.

ಇನ್ನು ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಬಿಜೆಪಿಯವರು ಮಾಡುತ್ತಿರೋ ಸುಳ್ಳು ಆರೋಪವಾಗಿದೆ. ನಮ್ಮ ಯಾವೊಬ್ಬ ಸಚಿವರು ಕೂಡ ಅಕ್ರಮವನ್ನು ಎಸಗಿಲ್ಲ. ಅವರು ನಮ್ಮ ಬೆಳವಣಿಗೆಯನ್ನು ಕಂಡು ಹತಾಶರಾಗಿದ್ದಾರೆ. ಹೀಗಾಗಿ ಸಚಿವ ಕೆ.ಜೆ ಜಾರ್ಜ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಮೇಲೆ ಸುಳ್ಳು ಆರೋಪ ಮಾಡ್ತಾ ಇದ್ದಾರೆ ಅಂತ ಕಿಡಿಕಾರಿದ್ರು.

ಬಿಎಸ್‍ವೈ ಹೇಳಿದ್ದು ಏನು?: ಪ್ರತಿ ಯೂನಿಟ್‍ಗೆ 2.50ರಂತೆ ವಿದ್ಯುತ್ ಪೂರೈಸಲು ಕೇಂದ್ರ ಸರ್ಕಾರ ಸಿದ್ಧವಿರುವಾಗ ರಾಜ್ಯ ಸರ್ಕಾರ ಹೆಚ್ಚಿನ ದರ ನೀಡಿ ವಿದ್ಯುತ್ ಖರೀದಿಸುತ್ತಿರುವುದರ ಬಗ್ಗೆ ತನಿಖೆ ನಡೆಸಬೇಕು ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದರು.

ರಾಜ್ಯದಲ್ಲಿನ ವಿದ್ಯುತ್ ಕೊರತೆ ನೀಗಿಸುವುದಕ್ಕಾಗಿ ಪ್ರತಿ ಯೂನಿಟ್‍ಗೆ ಯುಪಿಸಿಎಲ್‍ನಿಂದ 4.71ರಂತೆ ಮತ್ತು ಜಿಂದಾಲ್‍ನಿಂದ ಪ್ರತಿ ಯೂನಿಟ್‍ಗೆ 4.17 ರಂತೆ ಖರೀದಿಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಅರ್ಧ ದರಕ್ಕೆ ವಿದ್ಯುತ್ ನೀಡುತ್ತೇವೆ ಎಂದು ಹೇಳಿದರೂ ದುಬಾರಿ ಬೆಲೆಯನ್ನು ನೀಡಿ ಖಾಸಗಿಯರಿಂದ ಖರೀದಿಸುತ್ತಿರುವುದು ಯಾಕೆ? ನನ್ನ ಪ್ರಶ್ನೆಗೆ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕೆಂದು ಆಗ್ರಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *