ಐಸಿಸಿ ಅಂಗಳ ತಲುಪಿದ ಸಿರಾಜ್‌ vs ಹೆಡ್‌ ವಾಗ್ವಾದ – ಇಬ್ಬರಿಗೂ ಬ್ಯಾನ್‌ ಭೀತಿ?

Public TV
2 Min Read

ಅಡಿಲೇಡ್‌: ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದ ವೇಳೆ ಆಸ್ಟ್ರೇಲಿಯಾ ಸ್ಟಾರ್‌ ಬ್ಯಾಟರ್‌ ಟ್ರಾವಿಸ್‌ ಹೆಡ್‌ ಹಾಗೂ ಟೀಂ ಇಂಡಿಯಾ ವೇಗಿ ಮೊಹಮ್ಮದ್‌ ಸಿರಾಜ್‌ ನಡುವಿನ ವಾಗ್ದಾದ ಐಸಿಸಿ ಅಂಗಳ ತಲುಪಿದೆ. ಇದರಿಂದ ಇಬ್ಬರ ವಿರುದ್ಧವೂ ಐಸಿಸಿ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಹೌದು. ಭಾರತ ಮತ್ತು ಆಸೀಸ್‌ ನಡುವಿನ 2ನೇ ಟೆಸ್ಟ್‌ ಪಂದ್ಯದ ವೇಳೆ ಆಸೀಸ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸಿರಾಜ್‌ ಎಸೆದ ಯಾರ್ಕರ್‌ಗೆ ಟ್ರಾವಿಸ್‌ ಹೆಡ್‌ ಕ್ಲೀನ್‌ ಬೌಲ್ಡ್‌ ಆಗಿದ್ದರು. ಅಷ್ಟರಲ್ಲಾಗಲೇ 140 ರನ್‌ ಬಾರಿಸಿದ್ದರು. ಟ್ರಾವಿಸ್‌ ಹೆಡ್‌ ಔಟಾಗುತ್ತಿದ್ದಂತೆ ʻವೆಲ್‌ ಬೌಲ್‌ʼ ಎಂದು ಹೇಳಿರುವುದಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ಸಿರಾಜ್‌ ಅವರು ತೋರಿದ ಅತಿರೇಖದ ವರ್ತನೆ ಈಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಹೈಬ್ರಿಡ್ ಮಾಡೆಲ್‌ನಲ್ಲಿ ಚಾಂಪಿಯನ್ಸ್ ಟ್ರೋಫಿಗೆ ಆಡಲು ಪಾಕಿಸ್ತಾನ ಒಪ್ಪಿಗೆ – ಆದ್ರೆ ಕಂಡೀಷನ್ ಅಪ್ಲೈ

ಔಟಾದ ಬಳಿಕ ಸಿರಾಜ್‌ಗೆ ಹೆಡ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಆದರೆ ಅವರಿಬ್ಬರ ನಡುವೆ ವಿನಿಮಯವಾದ ಮಾತುಗಳು ಏನು ಎನ್ನುವುದು ಸ್ಪಷ್ಟವಾಗಿಲ್ಲ. ಆದ್ರೆ ಇದನ್ನು ಅಭಿಮಾನಿಗಳು ಸುಮ್ಮನೆ ಬಿಡಲಿಲ್ಲ. ಸಿರಾಜ್ ಬೌಂಡರಿ ಲೈನ್ ಬಳಿ ಫೀಲ್ಡಿಂಗ್‌ಗೆ ನಿಂತಿದ್ದಾಗ ಆಸ್ಟ್ರೇಲಿಯಾ ಪ್ರೇಕ್ಷಕರು ʻಬೂʼ ಎಂದು ಅವರನ್ನು ಅಣುಕಿಸಿದ್ದರು. ಈ ವಿವಾದ ಐಸಿಸಿ ಅಂಗಳ ತಲುಪಿದ್ದು, ಇಬ್ಬರಿಗೂ ದಂಡ ವಿಧಿಸುವ ಅಥವಾ ಒಂದು ಪಂದ್ಯಕ್ಕೆ ಬ್ಯಾನ್‌ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಟ್ರಾವಿಸ್ ಹೆಡ್ ಹೇಳಿದ್ದೇನು?
2ನೇ ದಿನದ ಆಟ ಮುಕ್ತಾಯಗೊಂಡ ಬಳಿಕ ಟ್ರಾವಿಸ್‌ ಹೆಡ್‌ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ್ದರು. ನಾನು ಔಟಾದ ಬಳಿಕ ʻಚೆನ್ನಾಗಿ ಬೌಲ್ ಮಾಡಿದ್ದಿರಿʼ ಎಂದು ಹೇಳಿದೆ. ಆದ್ರೆ ಸಿರಾಜ್‌ ತಪ್ಪಾಗಿ ಅರ್ಥೈಸಿಕೊಂಡರು. ಇದು ಸ್ವಲ್ಪ ಜಾಸ್ತಿ ಆಯ್ತು ಎಂದು ಹೆಡ್‌ ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಟೆಕ್ವಾಂಡೋ ಸ್ಪರ್ಧೆ: ಪಾಣೆಮಂಗಳೂರಿನ‌ ಆಯಿಶಾ ಹಫೀಝ್‌ಗೆ ಚಿನ್ನ

ಸಿರಾಜ್‌ ಪ್ರತಿಕ್ರಿಯೆ ಏನು?
ಮರುದಿನ ಹರ್ಭಜನ್‌ ಸಿಂಗ್‌ ಅವರೊಂದಿಗೆ ನಡೆದ ಚುಟುಕು ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದ ಸಿರಾಜ್‌, ಹೆಡ್‌ ಹೇಳಿಕೆಯನ್ನು ನಿರಾಕರಿಸಿದ್ದರು. ʻಚೆನ್ನಾಗಿ ಬೌಲ್ ಮಾಡಿದ್ದಿʼ ಎಂಬುದಾಗಿ ಹೆಡ್ ಹೇಳಲೇ ಇಲ್ಲ. ಒಳ್ಳೆಯ ಎಸೆತವನ್ನು ಸಿಕ್ಸರ್‌ಗೆ ಬಾರಿಸಿದಾಗ, ಅದು ನಿಮ್ಮಲ್ಲಿ ವಿಭಿನ್ನವಾಗಿ ಕಿಚ್ಚು ಹೊತ್ತಿಸುತ್ತದೆ. ನಾನು ಅವರನ್ನು ಬೌಲ್ಡ್ ಮಾಡಿದಾಗ ನಾನು ಸಂಭ್ರಮಿಸಿದ್ದೆ ಅಷ್ಟೆ. ಆಗ ಅವರು ನನ್ನನ್ನು ನಿಂದಿಸಿದರು. ಅವರು ನನಗೆ ಹೇಳಿದ್ದು ಅದನ್ನಲ್ಲ ಎನ್ನುವುದು ಎಲ್ಲರಿಗೂ ಕಾಣುವಂತಿದೆ. ನಾವು ಎಲ್ಲರನ್ನೂ ಗೌರವಿಸುತ್ತೇವೆ. ಏಕೆಂದರೆ ಕ್ರಿಕೆಟ್ ಜೆಂಟಲ್‌ಮನ್‌ಗಳ ಆಟ ಎಂದು ತಿಳಿಸಿದ್ದರು.

ಮೂರನೇ ದಿನ ಸಿರಾಜ್ ಬ್ಯಾಟಿಂಗ್‌ಗೆ ಬಂದಾಗ, ಹೆಡ್ ಮತ್ತು ಅವರ ನಡುವೆ ಸ್ವಲ್ಪ ಹೊತ್ತು ಮಾತುಕತೆ ನಡೆದಿತ್ತು. ಅವರಿಬ್ಬರೂ ವಿವಾದ ಇತ್ಯರ್ಥಪಡಿಸಿಕೊಂಡರು, ಇದನ್ನು ಇಲ್ಲಿಗೆ ಬಿಟ್ಟು ಮುಂದೆ ಹೋಗೋಣ ಅಂತ ಹೇಳಿದ್ದರು ಎನ್ನಲಾಗಿದೆ. ಪಂದ್ಯ ಮುಗಿದ ಬಳಿಕ ಇಬ್ಬರೂ ಪರಸ್ಪರ ಆಲಂಗಿಸಿಕೊಂಡ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಆಸೀಸ್‌ ವಿರುದ್ಧ ಹೀನಾಯ ಸೋಲು – WTC ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಭಾರತ, ಫೈನಲ್‌ ಹಾದಿ ಕಠಿಣ

Share This Article