ಸರ್ಜಿಕಲ್ ದಾಳಿಯಲ್ಲಿ ಅಜರ್ ಮಸೂದ್‍ನ ಭಾಮೈದ ಅಜರ್ ಯೂಸುಫ್ ಹತ್ಯೆ!

Public TV
1 Min Read

ನವದೆಹಲಿ: ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ್ದ ಬಾಲಕೋಟ್ ನೆಲೆಯ ಮೇಲೆ ಭಾರತೀಯ ವಾಯು ಪಡೆಯು ಇಂದು ಬೆಳಗ್ಗೆ ನಡೆಸಿದ ದಾಳಿಯಲ್ಲಿ 300 ಉಗ್ರರು, ತರಬೇತುದಾರರು ಹಾಗೂ ಜೇಶ್ ಸಂಘಟನೆಯ ಕಮಾಂಡೋಗಳು ಬಲಿಯಾಗಿದ್ದಾರೆ ಎನ್ನಲಾಗಿದೆ.

ಈ ದಾಳಿಯಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಅಜರ್ ಮಸೂದ್‍ನ ಭಾಮೈದ ಅಜರ್ ಯೂಸುಫ್ ಅಲಿಯಾಸ್ ಉಸ್ತಾದ್ ಘೋರಿ ಹತ್ಯೆಯಾಗಿದ್ದಾನೆ ಎಂದು ವರದಿಯಾಗಿದೆ.

ಉಸ್ತಾದ್ ಘೋರಿ ಯಾರು?:
ಮಸೂದ್ ಅಜರ್ ಭಾಮೈದ ಯೂಸುಫ್ 1999ರಲ್ಲಿ ಇಂಡಿಯನ್ ಏರ್‌ಲೈನ್ಸ್‌ ವಿಮಾನ ಐಸಿ-814ರ ಹೈಜಾಕ್ ಪ್ರಕರಣದಲ್ಲಿ ಭಾಗಿಯಾಗಿದ್ದ. ಅಷ್ಟೇ ಅಲ್ಲದೆ ಪ್ರಮುಖ ಆರೋಪಗಳಿಂದ ಇಂಟರ್‍ಪೋಲ್‍ನ ಪಟ್ಟಿಸೇರಿದ್ದ.

ಭಾರತದ ಸಿಬಿಐ 2000ರಲ್ಲಿ ಸಲ್ಲಿಸಿದ್ದ ಮನವಿಯಂತೆ ಇಂಟರ್‍ಪೋಲ್, ಯೂಸುಫ್ ವಿರುದ್ಧ ಕಳೆದ ವರ್ಷ ರೆಡ್ ಕಾರ್ನನ್ ನೋಟಿಸ್ ಹೊರಡಿಸಿತ್ತು. ಇಂಟರ್‍ಪೋಲ್, ಮಾಹಿತಿ ಪ್ರಕಾರ ಯೂಸುಫ್ ಪಾಕಿಸ್ತಾನ ಕರಾಚಿ ನಗರದವನಾಗಿದ್ದು, ಉರ್ದು, ಹಿಂದಿ, ಮತ್ತು ಪಾಕಿಸ್ತಾನಿ ಭಾಷೆ ಮಾತನಾಡಬಲ್ಲವನಾಗಿದ್ದ.

ಯೂಸುಫ್ ಬಾಲಕೋಟ್‍ನಲ್ಲಿರುವ ಉಗ್ರ ತರಬೇತಿ ಶಿಬಿರದ ಮುಖ್ಯಸ್ಥನಾಗಿದ್ದ. ಈ ಶಿಬಿರವನ್ನೇ ಭಾರತೀಯ ವಾಯುಪಡೆ ಮಂಗಳವಾರದ ದಾಳಿಯಲ್ಲಿ ಧ್ವಂಸಗೊಳಿಸಿದೆ.

ಮಸೂದ್ ಅಜರ್ ನನ್ನು ಭಾರತೀಯ ಸೇನೆಯಿಂದ ಬಿಡುಗಡೆಗೊಳಿಸಲು ಯೂಸುಫ್ ಸೇರಿದಂತೆ ಕೆಲ ಉಗ್ರರು, 1999ರಲ್ಲಿ ನೇಪಾಳದಿಂದ ಕಂದಹಾರ್ ಗೆ ಇಂಡಿಯನ್ ಏರ್‍ಲೈನ್ಸ್ ವಿಮಾನವನ್ನು ಅಪಹರಣ ಮಾಡಿದ್ದರು. ಪ್ರಯಾಣಿಕರ ಜೀವ ರಕ್ಷಿಸುವ ಉದ್ದೇಶದಿಂದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಜರ್ ಮಸೂದ್ ಸೇರಿದಂತೆ ಒಟ್ಟು ಮೂವರು ಉಗ್ರರನ್ನು ಬಿಡುಗಡೆ ಮಾಡಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *