ತಿವಾರಿ ಸಾವಿನ ಹಿಂದೆ ಐಎಎಸ್ ಮಾಫಿಯಾದ ಕೈವಾಡವಿದೆ, ನನಗೂ ಜೀವ ಬೆದರಿಕೆ ಇತ್ತು: ನಿವೃತ್ತ ಅಧಿಕಾರಿ ವಿಜಯಕುಮಾರ್

Public TV
1 Min Read

ಬೆಂಗಳೂರು: ಐಎಎಸ್ ಅಧಿಕಾರಿ ಅನುರಾಗ್ ತಿವಾರಿಯಂತೆ ನನ್ನ ಅಧಿಕಾರಿವಾಧಿಯಲ್ಲಿ ಕೂಡ ನನ್ನನ್ನು ಮೂರು ಬಾರಿ ಕೊಲೆ ಮಾಡಲು ಪ್ರಯತ್ನ ಮಾಡಿದ್ರು ಅಂತಾ ನಿವೃತ್ತ ಐಎಎಸ್ ಅಧಿಕಾರಿ ಎಮ್‍ಎನ್ ವಿಜಯಕುಮಾರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಿವಾರಿ ಅನುಮಾನಾಸ್ಪದ ಸಾವಿನ ಪ್ರಕರಣದ ಸಿಬಿಐನಿಂದ ತನಿಖೆಯಾದ್ರೂ ಸತ್ಯ ಹೊರಬರುವ ಲಕ್ಷಣಗಳು ಇಲ್ಲ. ಯಾಕಂದ್ರೆ ಪ್ರಕರಣ ಕುರಿತು ಸೂಕ್ತ ರೀತಿಯಲ್ಲಿ ತನಿಖೆ ನಡೆಯುತ್ತಿಲ್ಲ. ಅಲ್ಲದೇ ಅತ್ಯಂತ ಕಳಪೆ ಮಟ್ಟದ ಅಧಿಕಾರಿಗಳು ಅನುರಾಗ್ ತಿವಾರಿಯ ಸಾವಿನ ಸಂಬಂಧ ತನಿಖೆ ನಡೆಸುತ್ತಿದ್ದಾರೆ ಅಂತಾ ಆರೋಪಿಸಿದರು.

ಅನುರಾಗ್ ತಿವಾರಿಯವರ ಸಾವಿನ ಹಿಂದೆ ಐಎಎಸ್ ಮಾಫಿಯಾದ ಕೈವಾಡವಿದೆ. ರಾಜ್ಯದಲ್ಲಿ ಐಎಎಸ್ ಮಾಫಿಯಾ ಹೆಮ್ಮರವಾಗಿ ಬೆಳೆದಿದೆ ಎಂದ ವಿಜಯ್ ಕುಮಾರ್, ಅನುರಾಗ್ ತಿವಾರಿಯವರ ಕೇಸನ್ನ ಸಿಬಿಐಗೆ ಒಪ್ಪಿಸ್ಸಿದ್ರೂ ನ್ಯಾಯ ಸಿಗುವುದು ಅನುಮಾನ ಅಂತಾ ಅನುಮಾನ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅನುರಾಗ್ ತಿವಾರಿಯ ಕಾಲೇಜು ಸ್ನೇಹಿತರು, ಈ ಸಿಸ್ಟಮ್ ನಲ್ಲಿ ನಮಗೆ ನಂಬಿಕೆಯಿಲ್ಲ, ಸಾವಿನ ತನಿಖೆ ನಿಷ್ಪಕ್ಷಪಾತವಾಗಿ ನಡೆಸಿದ್ರೆ ಮಾತ್ರ ಅನುರಾಗ್ ತಿವಾರಿಯವರ ಸಾವಿನ ಸತ್ಯ ಹೊರಬರುತ್ತೆ ಅಂತಾ ಹೇಳಿದ್ರು.

ಅನುರಾಗ್ ತಿವಾರಿಯ ಸ್ನೇಹಿತರಾದ ಮದನ್ ಮೋಹನ್ ಮಾಳವೀರಾ ಕಾಲೇಜಿನ ರಶ್ಮಿ, ಆಶಿಶ್, ಪವನ್ ಸುದ್ದಿಗೋಷ್ಠಿ ಯಲ್ಲಿ ಭಾಗಿಯಾಗಿದ್ದು, ತಮ್ಮ ಗೆಳೆಯನ ಸಾವಿನ ತನಿಖೆಯನ್ನು ಸರಿಯಾಗಿ ಮಾಡಿ ಅಂತಾ ಸರ್ಕಾರಕ್ಕೆ ಒತ್ತಾಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *