ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ರೆ ನಾವೂ ಹೋಗಲ್ಲ – ಜಾವೆದ್‌ ಮಿಯಾಂದದ್‌

Public TV
3 Min Read

ಇಸ್ಲಾಮಾಬಾದ್‌/ಮುಂಬೈ: BCCI ತಮ್ಮ ತಂಡವನ್ನ ನಮ್ಮ ದೇಶಕ್ಕೆ ಕಳುಹಿಸಲು ಒಪ್ಪಿಕೊಳ್ಳುವವರೆಗೂ ಈ ವರ್ಷದ ICC ವಿಶ್ವಕಪ್‌ (ODI WorldCup) ಸೇರಿದಂತೆ ಯಾವುದೇ ಪಂದ್ಯಗಳಿಗೂ ಪಾಕಿಸ್ತಾನ (Pakistan) ನೆರೆಯ ದೇಶಕ್ಕೆ ಹೋಗುವುದಿಲ್ಲ ಎಂದು ಪಾಕ್‌ ತಂಡದ ಮಾಜಿ ನಾಯಕ ಜಾವೆದ್‌ ಮಿಯಾಂದದ್‌ ಹೇಳಿದ್ದಾರೆ.

ಪ್ರತಿಷ್ಠಿತ ಏಷ್ಯಾ ಕಪ್‌ (ODI AisaCup) ಟೂರ್ನಿಯಲ್ಲಿ ಭಾಗವಹಿಸುವ ಸಲುವಾಗಿ ಪಾಕಿಸ್ತಾನಕ್ಕೆ ಭಾರತ ತಂಡವನ್ನ (Team India) ಕಳುಹಿಸಲು ನಿರಾಕರಿಸುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ವಿರುದ್ಧ ಪಾಕ್‌ ಹಿರಿಯ ಕ್ರಿಕೆಟಿಗರು ಹರಿಹಾಯ್ದಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ʻಭಾರತ ತಂಡ ನರಕಕ್ಕೆ ಹೋಗಲಿʼ ಎಂದು ನಾಲಗೆ ಹರಿಬಿಟ್ಟಿದ್ದ ಜಾವೆದ್‌ ಮಿಯಾಂದದ್‌, ಪಾಕ್‌ ತಂಡ ಭಾರತಕ್ಕೆ ಹೋಗದಂತೆ ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಆ.31 ರಿಂದ ಏಕದಿನ ಏಷ್ಯಾಕಪ್; ಲಂಕಾ, ಪಾಕ್ ಆತಿಥ್ಯ – ಬುಮ್ರಾ, ಅಯ್ಯರ್ ಕಂಬ್ಯಾಕ್ ಸಾಧ್ಯತೆ

2023ರ ಏಷ್ಯಾ ಕಪ್‌ ಟೂರ್ನಿಯ ಆಯೋಜನೆಗೆ ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ತಟಸ್ಥ ಸ್ಥಳಗಳನ್ನ ಆಯ್ಕೆ ಮಾಡಿದೆ. ಭಾರತ ತಂಡದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದರೆ, ಇನ್ನುಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ಜರುಗಲಿವೆ. ಏಷ್ಯಾಕಪ್‌ ಕ್ರಿಕೆಟ್‌ ಸಮಿತಿ ಈ ನಿರ್ಧಾರವನ್ನ ಜಾವೆದ್‌ ಮಿಯಾಂದದ್‌ ವಿರೋಧಿಸಿದ್ದರು. ಪಾಕಿಸ್ತಾನಕ್ಕೆ ಭಾರತ ತಂಡ ಬಂದಿಲ್ಲವಾದರೆ, ಪಾಕಿಸ್ತಾನ ತಂಡ ಕೂಡ ಭಾರತಕ್ಕೆ ಹೋಗುವುದನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದರು.

ಮತ್ತೊಮ್ಮೆ ಈ ಬಗ್ಗೆ ಮಾತನಾಡಿರುವ ಮಿಯಾಂದ್‌, ಬಿಸಿಸಿಐ ತನ್ನ ತಂಡವನ್ನ ಪಾಕ್‌ಗೆ ಕಳುಹಿಸಲು ಒಪ್ಪಿಕೊಳ್ಳುವವರೆಗೂ ಪಾಕಿಸ್ತಾನ ಐಸಿಸಿ ವಿಶ್ವಕಪ್‌ ಸೇರಿದಂತೆ ಯಾವುದೇ ಪಂದ್ಯಗಳಿಗೆ ಭಾರತಕ್ಕೆ ಹೋಗಬಾರದು ಎಂದು ಕರೆ ನೀಡಿದ್ದಾರೆ.

ಸದ್ಯ ಐಸಿಸಿ ಸಿದ್ಧಪಡಿಸಿರುವ ಕರಡು ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್‌ ಕದನ ನಡೆಯಲಿದೆ. ಆದ್ರೆ ಅದಕ್ಕೆ ತಗಾದೆ ತೆಗೆದಿರುವ ಮಿಯಾಂದ್‌ ಪಾಕಿಸ್ತಾನ ತಂಡ 2012 ಮತ್ತು 2016ರಲ್ಲಿ ಭಾರತಕ್ಕೆ ಪ್ರಯಾಣ ಬೆಳೆಸಿತ್ತು. ಹಾಗಾಗಿ ಭಾರತ ತಂಡ ಕೂಡ ಇಲ್ಲಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.

ನಾವು ಭಾರತದೊಂದಿಗೆ ಆಡಲು ಸಿದ್ಧರಿದ್ದೇವೆ, ಆದ್ರೆ ಅವರೂ ಅದೇ ರೀತಿ ಪ್ರತಿಕ್ರಿಯಿಸುವುದಿಲ್ಲ. ಹಾಗಾಗಿ ನಾವು ಯಾವುದೇ ಪಂದ್ಯವನ್ನಾಡಲು ಭಾರತಕ್ಕೆ ಹೋಗುವುದಿಲ್ಲ ಎಂದರಲ್ಲದೆ, ಪಾಕಿಸ್ತಾನ ಕ್ರಿಕೆಟ್‌ ತುಂಬಾ ದೊಡ್ಡದು, ನಾವು ಇನ್ನೂ ಗುಣಮಟ್ಟದ ಆಟಗಾರರನ್ನ ಉತ್ಪಾದಿಸುತ್ತೇವೆ. ಭಾರತಕ್ಕೆ ಹೋಗದಿದ್ದರೂ ನಮ್ಮ ತಂಡದಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತರ ಕುಟುಂಬಕ್ಕೆ 20 ಲಕ್ಷ ದೇಣಿಗೆ ನೀಡಿದ ಭಾರತೀಯ ಫುಟ್ಬಾಲ್‌ ತಂಡ

ಭಾರತ ಏಕೆ ಪಾಕ್‌ಗೆ ಹೋಗ್ತಿಲ್ಲ?:
ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ (ICC) ಟೂರ್ನಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ. ಕಳೆದ ವರ್ಷ ಟಿ20 ಏಷ್ಯಾಕಪ್‌ ಹಾಗೂ ಟಿ20 ವಿಶ್ವಕಪ್‌ನಲ್ಲಿ ಇತ್ತಂಡಗಳು ಭಾಗಿಯಾಗಿದ್ದವು. ನಂತರ ಏಷ್ಯಾಕಪ್‌ ಆಡಲು ಭಾರತ ತಂಡವನ್ನು ತನ್ನ ದೇಶಕ್ಕೆ ಕಳುಹಿಸಿಕೊಡುವಂತೆ ಪಾಕಿಸ್ತಾನ ಮನವಿ ಮಾಡಿತ್ತು. ಆದರೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಈ ಮನವಿಯನ್ನು ನಿರಾಕರಿಸಿದ್ದರು.

Share This Article