ಗೋಯೆಂಕಾ ವಿರುದ್ಧ ಕೆಂಡಾಮಂಡಲ – ನಾನು ಐಪಿಎಲ್‌ ಅಧ್ಯಕ್ಷನಾಗಿದ್ದರೆ ನಿಷೇಧಿಸುತ್ತಿದ್ದೆ: ಲಲಿತ್‌ ಮೋದಿ

3 Min Read

ಮುಂಬೈ: ನಾನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಮುಖ್ಯಸ್ಥನಾಗಿದ್ದರೆ ಲಕ್ನೋ ಸೂಪರ್‌ ಜೈಂಟ್ಸ್‌ (LSG) ಮಾಲೀಕ ಸಂಜೀವ್ ಗೋಯೆಂಕಾ‌ ಅವರನ್ನು ನಿಷೇಧಿಸುತ್ತಿದ್ದೆ ಎಂದು ಐಪಿಎಲ್‌ ಸ್ಥಾಪಕ ಮತ್ತು ಮೊದಲ ಅಧ್ಯಕ್ಷ ಲಲಿತ್‌ ಮೋದಿ(Lalit Modi) ಹೇಳಿದ್ದಾರೆ.

ಡೆಲ್ಲಿ ವಿರುದ್ಧ ಪಂದ್ಯ ಸೋತ ಬಳಿಕ ಮೈದಾನದಲ್ಲಿ ನಾಯಕ ರಿಷಭ್‌ ಪಂತ್‌(Rishabh Pant) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಫುಟ್ಬಾಲ್ ಲೀಗ್‌ಗಳ ಮಾಲೀಕರು ಆಟಗಾರರನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆ. ಆದರೆ ಐಪಿಎಲ್ ಮಾಲೀಕರು ಕೇವಲ ಪ್ರಚಾರಕ್ಕಾಗಿ ಆಟಗಾರರನ್ನು ಸಾರ್ವಜನಿಕವಾಗಿ ಹೀಯಾಳಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಸಂಜೀವ್ ಗೋಯೆಂಕಾ (Sanjiv Goenka) ಅವರು ಐಪಿಎಲ್‌ನ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ. ಈ ವರ್ತನೆಯು ಫ್ರಾಂಚೈಸಿ ಒಪ್ಪಂದದ ನಿಯಮಗಳ ಉಲ್ಲಂಘನೆಯಾಗಿದೆ. ಒಂದು ವೇಳೆ ನಾನು ಈಗಲೂ ಐಪಿಎಲ್ ಕಮಿಷನರ್ ಆಗಿದ್ದರೆ ಅವರನ್ನು ತಕ್ಷಣವೇ ಐಪಿಎಲ್‌ನಿಂದ ನಿಷೇಧಿಸುತ್ತಿದ್ದೆ ಮತ್ತು ಅವರ ತಂಡದ ಮಾಲೀಕತ್ವವನ್ನೇ ರದ್ದುಪಡಿಸುತ್ತಿದ್ದೆ ಎಂದು ಸಿಟ್ಟು ಹೊರಹಾಕಿದ್ದಾರೆ. ಇದನ್ನೂ ಓದಿ: ಅಂದು ರಾಹುಲ್‌, ಇಂದು ಪಂತ್ – ಸೋಲಿನ ಬೆನ್ನಲ್ಲೇ ಗೋಯೆಂಕಾ ಭಾರೀ ಚರ್ಚೆ

 

ಒಂದು ತಂಡದ ಮಾಲೀಕತ್ವ ಹೊಂದುವ ಅರ್ಹತೆ ಇವರಿಗಿಲ್ಲ. ಒಂದು ಕ್ರೀಡಾ ತಂಡದ ಮಾಲೀಕತ್ವ ಅಂದರೆ ಅದು ದೊಡ್ಡ ಜವಾಬ್ದಾರಿ. ಇದು ಲಾಭದ ವಿಷಯವಲ್ಲ. ಇದು ಯಂತ್ರವಲ್ಲ. ಇದು ಎಂಜಿನ್ ಅಲ್ಲ. ದುರದೃಷ್ಟವಶಾತ್ ಈ ವಿದೂಷಕನಿಗೆ ಇದು ಅರ್ಥವಾಗದ ವಿಷಯ ಎಂದು ಮತ್ತೊಂದು ಪೋಸ್ಟ್‌ನಲ್ಲಿ ಸಿಟ್ಟು ಹೊರಹಾಕಿದ್ದಾರೆ.

ಪಂಜಾಬ್‌ ಕಿಂಗ್ಸ್‌ ಮಾಲಕಿ ಪ್ರೀತಿ ಜಿಂಟಾ ಸೋಲಿನ ನಂತರವೂ ತನ್ನ ತಂಡವನ್ನು ಅಪ್ಪಿಕೊಳ್ಳುತ್ತಾರೆ. ಮುಂಬೈ ಇಂಡಿಯನ್ಸ್‌ ಮಾಲಕಿ ನೀತಾ ಅಂಬಾನಿ ಯಾವಾಗಲೂ ತಂಡದ ಆಧಾರಸ್ತಂಭ. ಕೋಲ್ಕತ್ತಾ ನೈಟ್‌ ರೈಡರ್ಸ್‌ ಮಾಲೀಕ ಶಾರೂಖ್‌ ಖಾನ್‌ ತಂಡ ಸೋತರೂ ಹುಡುಗರಿಗೆ ಚಿಯರ್‌ ಮಾಡುತ್ತಾರೆ. ಸನ್‌ ರೈಸರ್ಸ್‌ ಹೈದರಾಬಾದ್‌ ಮಾಲಕಿ ಕಾವ್ಯ ಮಾರನ್‌ ಅವರು ಬೇಸರವಾಗಿದ್ದರೂ ತಂಡಕ್ಕೆ ಎಂದಿಗೂ ಅಗೌರವ ಸಲ್ಲಿಸುವುದಿಲ್ಲ. ಆದರೆ ಸಂಜಯ್‌ ಗೋಯೆಂಕಾ ಮೊದಲು ಧೋನಿಗೆ ಅಗೌರವ, ಬಳಿಕ ಕೆಎಲ್‌ ರಾಹುಲ್‌, ಈಗ ರಿಷಭ್ ಪಂತ್‌ಗೆ ಅವಮಾನ ಮಾಡುತ್ತಿದ್ದಾರೆ ಎಂದು ಬರೆದಿರುವ ಪೋಸ್ಟ್‌ ಅನ್ನು ರಿಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಲಕ್ನೋಗೆ ಹೀನಾಯ ಸೋಲು – ಮೈದಾನದಲ್ಲೇ ರಾಹುಲ್‌ಗೆ ಮಾಲೀಕರಿಂದ ಫುಲ್‌ ಕ್ಲಾಸ್‌

ಸಂಜಯ್‌ ಗೋಯೆಂಕಾ ಅವರನ್ನು ಲಲಿತ್‌ ಮೋದಿ ಟೀಕಿಸುವುದು ಇದು ಮೊದಲೆನಲ್ಲ. ಈ ಹಿಂದೆ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ದಾಖಲೆ ಮಟ್ಟದ ಮಾರಾಟದ ಬೆನ್ನಲ್ಲೇ, ಐಪಿಎಲ್‌ನ ಯಶಸ್ಸಿಗೆ ಜಯ್ ಶಾ ಕಾರಣ ಎಂದು ಸಂಜೀವ್ ಗೋಯೆಂಕಾ ಶ್ಲಾಘಿಸಿದ್ದರು. ಇದಕ್ಕೆ ಸಿಟ್ಟಾಗಿದ್ದ ಲಲಿತ್ ಮೋದಿ, ಗೋಯೆಂಕಾ ಅವರಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆ’ ಎಂದು ಲೇವಡಿ ಮಾಡಿ, ಅವರನ್ನು ‘ಕ್ಲೌನ್’ (ವಿದೂಷಕ) ಎಂದು ವ್ಯಂಗ್ಯವಾಡಿದ್ದರು.

Share This Article