ಸಿದ್ದರಾಮಯ್ಯ ಇಲ್ಲದಿದ್ರೆ ರಾಜಕೀಯ ಬಿಡ್ತೀನಿ: ರಾಜಣ್ಣ

Public TV
3 Min Read

– ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಆಗಬಹುದು

ತುಮಕೂರು: ಸಿದ್ಧರಾಮಯ್ಯ (Siddaramaiah) ಇರುವುದರಿಂದ ನಾನು ರಾಜಕಾರಣ ಮಾಡುತ್ತಿರುವುದು. ಅವರಿಲ್ಲದಿದ್ದರೇ ರಾಜಕೀಯ ಬಿಡುತ್ತೇನೆ ಎಂದು ಸಚಿವ ಕೆಎನ್ ರಾಜಣ್ಣ (KN Rajanna) ಹೇಳಿದ್ದಾರೆ.

ತುಮಕೂರಿನಲ್ಲಿ (Tumakuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ ಕಾಂಗ್ರೆಸ್‌ನಲ್ಲಿ (Congress) ಮೂರು ಪವರ್ ಸೆಂಟರ್ ಇದೆ. ಹೈಕಮಾಂಡ್ , ಕೆಪಿಸಿಸಿ ಅಧ್ಯಕ್ಷ, ಹಾಗೂ ಸಿಎಂ ಮೂವರು ಪವರ್ ಸೆಂಟರ್ ಇದೆ. ಸಿಎಂ ಬದಲಾವಣೆ ಅನ್ನೋದನ್ನು ಕಾಲ ನಿರ್ಣಯ ಮಾಡಲಿದೆ. ಕೆಲ ಮಾಧ್ಯಮದವರು ರಾಜಣ್ಣನವರು ಸಿದ್ದರಾಮಯ್ಯನವರಿಂದ ದೂರವಾಗಿದ್ದಾರೆಂದು ಸುದ್ದಿ ಮಾಡಿದ್ದಾರೆ. ನಾನು ಯಾವತ್ತೂ ಸಿಎಂ ಸಿದ್ದರಾಮಯ್ಯರ ಜೊತೆ ಇದ್ದೇನೆ. ಇವತ್ತೂ, ನಾಳೆ, ಯಾವತ್ತೂ ನಾನು ಸಿದ್ದರಾಮಯ್ಯ ಬಣ ಎಂದರು. ಇದನ್ನೂ ಓದಿ: ಬಾಲಿವುಡ್ ನಟಿ ಶೆಫಾಲಿ ಸಾವು – ಮುಂಬೈ ಪೊಲೀಸರು ಹೇಳಿದ್ದೇನು?

ಆಗಸ್ಟ್- ಸೆಪ್ಟೆಂಬರ್ ಕ್ರಾಂತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕ್ರಾಂತಿ ಎಂದರೆ ಹಸಿರು ಕ್ರಾಂತಿಯೂ ಆಗಬಹುದು ಅಲ್ವಾ? ಬರೀ ಕಾಂಗ್ರೆಸ್‌ನಲ್ಲಿ ಮಾತ್ರ ಕ್ರಾಂತಿ ಎಂದು ಯಾಕೆ ಭಾವಿಸುತ್ತೀರಾ? ಬಿಜೆಪಿಯಲ್ಲೂ ಕ್ರಾಂತಿ ಆಗುತ್ತಿದೆ. ಕೇಂದ್ರದಲ್ಲೂ ಕ್ರಾಂತಿ ಆಗಬಹುದು. ಬಿಜೆಪಿಯಲ್ಲೂ 75 ವರ್ಷದ ನಂತರ ಹುದ್ದೆಯಿಂದ ಕೆಳಗೆ ಇಳಿಬೇಕು. 75 ವರ್ಷ ಆದ ಕಾರಣ ಅಡ್ವಾಣಿಯನ್ನು ಪ್ರಧಾನಿ ಹುದ್ದೆಯಿಂದ ತಪ್ಪಿಸಿದರು, ಅಲ್ಲೂ ಕ್ರಾಂತಿ ಆಗಬಹುದು. ರಾಜಕಾರಣ ಬದಲಾವಣೆಯ ನಿಯಮ ಹೊಂದಿದೆ. ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದರು. ಇದನ್ನೂ ಓದಿ: ಕೋಡಿಮಠ ಸ್ವಾಮೀಜಿ ಚಿನ್ನಾಭರಣ ಕಳ್ಳತನ; 7 ವರ್ಷಗಳ ಬಳಿಕ ಆರೋಪಿ ಬಂಧನ

ಕ್ರಾಂತಿ ಎಂದರೇ ಹಲವಾರು ರೀತಿಯ ಕ್ರಾಂತಿ ಇದೆ. ಜಗಜೀವನ್ ರಾಮ್ ಹಸಿರು ಕ್ರಾಂತಿ ಮಾಡಿಲ್ವಾ? ರಷ್ಯಾದ ಕ್ರಾಂತಿಯೂ ಸಹ ಅಕ್ಟೋಬರ್‌ನಲ್ಲಾಗಿರೋದು. ನಾನು ಹೇಳಿದ ತಕ್ಷಣ ಬರೀ ಕಾಂಗ್ರೆಸ್‌ನಲ್ಲಿ ಮಾತ್ರ ಕ್ರಾಂತಿ ಆಗುತ್ತದೆ ಅಂದುಕೊಳ್ಳಬಾರದು. ಬಿಜೆಪಿಯಲ್ಲೂ ಕ್ರಾಂತಿ ಆಗುತ್ತಿದೆ. ಕ್ರೇಂದ್ರ ಸರ್ಕಾರದಲ್ಲೂ ಸಹ ಬದಲಾವಣೆ ನಿರೀಕ್ಷೆ ಮಾಡಬಹುದು. ಆರ್‌ಎಸ್‌ಎಸ್‌ನವರ ಸೆಟ್ ಆಫ್ ಪ್ರಿನ್ಸಿಪಲ್‌ನಂತೆ 75 ವರ್ಷದ ನಂತರ ಯಾವುದೇ ಹುದ್ದೆಯಲ್ಲಿ ಇರಲಿಕ್ಕಿಲ್ಲ. ಹಾಗಾಗಿಯೇ ಅಡ್ವಾಣಿಗೆ ಪ್ರಧಾನಿ ಸ್ಥಾನ ಸಿಕ್ಕಿಲ್ಲ. ಈಗ ಅದೇ ಪ್ರಿನ್ಸಿಪಲ್ ಮೋದಿಯವರಿಗೂ ಅನ್ವಯಿಸುತ್ತದೆ. ಅದು ಒಂದು ಬದಲಾವಣೆ ಕ್ರಾಂತಿ ಅಲ್ವಾ? ಅದನ್ನು ಯಾಕೆ ನೀವು ಊಹೆ ಮಾಡಲ್ಲ? ಬರೀ ಕರ್ನಾಟಕದ ಕಾಂಗ್ರೆಸ್ ಪಾರ್ಟಿಯನ್ನು ಯಾಕೆ ಊಹೆ ಮಾಡ್ತೀರಾ? ಸಿಎಂ ಬದಲಾಯಿಸುತ್ತಾರೆ, ಸಂಪುಟ ವಿಸ್ತರಣೆ, ಅಧ್ಯಕ್ಷ ಬದಲಾವಣೆ, ಬರೀ ಇದರ ಬಗ್ಗೆ ಯಾಕೆ ಚರ್ಚೆ ಮಾಡುತ್ತೀರಾ? ರಾಜಕೀಯ ನಿಂತ ನೀರಲ್ಲ, ಅದು ಬದಲಾಗುತ್ತಿರುತ್ತದೆ. ರಾಜಿಕೀಯ ಸಂದರ್ಭಕ್ಕೆ ಅನುಗುಣವಾಗಿ ಬದಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು | ಒಂದೇ ಮೀಟರ್ – 16 ಮನೆಗಳಿಗೆ ವಿದ್ಯುತ್

ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಆಗುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಬದಲಾವಣೆಯಂತು ಆಗುತ್ತದೆ. ಆದರೆ ಯಾವಾಗ ಆಗತ್ತದೆ ಎಂಬುದು ಗೊತ್ತಿಲ್ಲ. ಸತೀಶ್ ಜಾರಕಿಹೊಳಿಯವರು ಕೆಪಿಸಿಸಿ ಅಧ್ಯಕ್ಷರಾಗಬಹುದು ಅಂದುಕೊಂಡಿದ್ದೇನೆ, ಅವರೇ ಆಗಬಹುದು. ಆದರೇ ಎಲ್ಲವನ್ನೂ ಕಾಲ ತೀರ್ಮಾನ ಮಾಡಲಿದೆ ಎಂದು ನುಡಿದರು. ಇದನ್ನೂ ಓದಿ: Kalaburagi | ಆಧಾರ್ ಕಾರ್ಡ್ ಕೇಳಿದ್ದಕ್ಕೆ ಮಹಿಳೆಯ ಸಂಬಂಧಿಕರಿಂದ ಕಂಡಕ್ಟರ್ ಮೇಲೆ ಹಲ್ಲೆ

ಮಧುಗಿರಿ ಜಿಲ್ಲೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಧುಗಿರಿ ಪ್ರತ್ಯೇಕ ಜಿಲ್ಲೆಯನ್ನಾಗಿ ಈ ಅವಧಿಯಲ್ಲೇ ಮಾಡುತ್ತೇನೆ. ತುಮಕೂರು ಜಿಲ್ಲೆ ಮೂರು ಜಿಲ್ಲೆಯಾಗಿ ಮಾಡಬಹುದು. ಧಾರವಾಡವನ್ನು ಮೂರು ಜಿಲ್ಲೆ ಮಾಡಿದ ಹಾಗೆ ತುಮಕೂರನ್ನು ತಿಪಟೂರು, ಮಧುಗಿರಿ, ತುಮಕೂರು ಆಗಿ ಮೂರು ಜಿಲ್ಲೆ ಮಾಡಬಹುದು ಎಂದರು. ಇದನ್ನೂ ಓದಿ: ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಸಾವು – ಒಂದು ತಿಂಗಳ ಅಂತರದಲ್ಲಿ 17 ಮಂದಿ ಬಲಿ

Share This Article