ನನ್ನ ಉಸಿರು ಇರೋವರೆಗೂ ಕಾವೇರಿಗಾಗಿ ಹೋರಾಟ ಮಾಡ್ತೀನಿ: ಹೆಚ್.ಡಿ.ದೇವೇಗೌಡ

Public TV
3 Min Read

ಬೆಂಗಳೂರು: ನನ್ನ ಉಸಿರು ಇರೋ ವರೆಗೂ ಕಾವೇರಿ (Cauvery Dispute) ಪರವಾಗಿ ನಾನು ಹೋರಾಟ ಮಾಡ್ತೀನಿ ಎಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ (H.D.Deve Gowda) ತಿಳಿಸಿದರು.

ಜೆಪಿ‌ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ. ಕಾವೇರಿ ನೀರಾವರಿ ಬೋರ್ಡ್‌ನ ತೀರ್ಪು ರಾಜ್ಯಕ್ಕೆ ಮರಣ ಶಾಸನ. ನಿನ್ನೆ ಕೇಂದ್ರ ಜಲಶಕ್ತಿ ಸಚಿವಾಲಯದ ಜಲ‌ ಸಂಪನ್ಮೂಲ ಸ್ಥಾಯಿ ಸಮಿತಿ ಸಭೆ ಇತ್ತು. ಆ ಸಭೆಯಲ್ಲಿ ಈ‌ ಎಲ್ಲಾ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕೈ ನಾಯಕರಿಗೆ ರಾಮನ ಮೇಲಿನ ಭಕ್ತಿಗಿಂತ, ಹೈಕಮಾಂಡ್ ಮೇಲಿನ ಭಯವೇ ಜಾಸ್ತಿ: ಅಶೋಕ್‌ ವ್ಯಂಗ್ಯ

ಕಾವೇರಿ ಜಲ ವಿವಾದ ಮಂಡಳಿ ಏಕಪಕ್ಷೀಯವಾಗಿ 1991 ರಲ್ಲಿ ಮಧ್ಯಂತರ ಆದೇಶ ನೀಡಿ ಕರ್ನಾಟಕ ರಾಜ್ಯ ತನ್ನ ನೀರಾವರಿ ಅಚ್ಚುಕಟ್ಟನ್ನು 11.20 ಲಕ್ಷ ಹೆಕ್ಟೇರ್‌ಗೆ ಸೀಮಿತಗೊಳಿಸುವಂತೆ ಮತ್ತು ತಮಿಳುನಾಡಿನ 205 TMC ನೀರನ್ನು ಬಿಡುಗಡೆ ‌ಮಾಡುವಂತೆ ಆದೇಶಿಸಿರುವುದರಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಕಾವೇರಿ ಕಣಿವೆಯಲ್ಲಿ KRS, ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳನ್ನು ತಮಿಳುನಾಡಿಗೆ ಪ್ರತಿ ವರ್ಷ ಜೂನ್ ತಿಂಗಳಿಂದ ಮೇ ತಿಂಗಳವರೆಗೆ ಪ್ರತಿ ತಿಂಗಳು 177.25 TMC ನೀರು ಬಿಡುವ ಆದೇಶದಿಂದ ಕ್ಲಿಷ್ಟ ಮತ್ತು ಬರಗಾಲದಲ್ಲಿ ಕರ್ನಾಟಕ ರಾಜ್ಯವನ್ನು ಸಂಕಷ್ಟಕ್ಕೆ ಸಿಲುಕಿದೆ. ಈ‌ ಬಗ್ಗೆ ಸಮಿತಿ ಗಮನಕ್ಕೆ ತರಲಾಗಿದೆ. ಮೇಕೆದಾಟು ಯೋಜನೆಗೆ ಕೂಡಲೇ ಅನುಮತಿ ಕೊಡುವಂತೆ ಮನವಿ ಮಾಡಿದ್ದೇವೆ. ಮೇಕೆದಾಟು ಕುಡಿಯುವ ನೀರಿನ‌ ಯೋಜನೆ. ಹೀಗಾಗಿ ಕೂಡಲೇ ಮೇಕೆದಾಟು ಯೋಜನೆಗೆ ಅನುಮತಿ ಕೊಡುವಂತೆ ಮನವಿ ಮಾಡಿದ್ದೇವೆ ಎಂದರು.

ತಮಿಳುನಾಡಿನವರು ಪ್ರತಿ ವರ್ಷ ನೀರಾವರಿ ಬೋರ್ಡ್ ಮುಂದೆ ನೀರು ಬಿಡಿ ಅಂತಾ ಅರ್ಜಿ ಹಾಕ್ತಾರೆ. ನಮ್ಮ ಬಳಿ ನೀರು ಇಲ್ಲದೆ ಹೋದ್ರೂ ನೀರು ಬಿಡಿ ಅಂತಾರೆ. ನಮ್ಮ ಅಧಿಕಾರಿಗಳು ಏನೇ ವಾದ ಮಾಡಿದ್ರೂ ಪ್ರಯೋಜನ ಆಗಿಲ್ಲ. ನೀರಾವರಿ ಬೋರ್ಡ್ ಅವರು ಯಾವತ್ತು ನಮ್ಮ ರಾಜ್ಯಕ್ಕೆ ಬಂದು ನೀರು ಎಷ್ಟು ಇದೆ ಅಂತಾ ನೋಡಿಲ್ಲ. ನೀರು ಇಲ್ಲದೆ ಇದ್ದರೂ ನೀರು ಬಿಡಿ ಅನ್ನೋದು ಕರ್ನಾಟಕಕ್ಕೆ ಮರಣ ಶಾಸನ. ತಮಿಳುನಾಡಿನವರಿಗೆ ಶಕ್ತಿ ಇದೆ. ಹೀಗಾಗಿ ನೀರು ತೆಗೆದುಕೊಂಡು ಹೋಗ್ತಿದ್ದಾರೆ. ಕಾವೇರಿ ನೀರಾವರಿ ಬೋರ್ಡ್‌ನಿಂದ ನಮಗೆ ಅನ್ಯಾಯ ಆಗಿದೆ. ನಾನು ಈ‌ ಬಗ್ಗೆ ಮೋದಿ ಅವರ ಗಮನಕ್ಕೆ ತಂದಿದ್ದೇನೆ. ನಾವೆಲ್ಲರೂ ಈ‌ ಬಗ್ಗೆ ಹೋರಾಟ ಮಾಡ್ತೀವಿ. ಮೋದಿ ಅವರು ಕೂಡಲೇ ಎಲ್ಲಾ ಮಾಡಲು ಆಗೊಲ್ಲ. ಕಾವೇರಿ ನೀರಾವರಿ ಬೋರ್ಡ್‌ನಿಂದ ನಮಗೆ ಅನ್ಯಾಯ ಆಗಿದೆ. ಮಳೆ ಇಲ್ಲದೆ ಹೋದ್ರೂ ನೀರು ಬಿಡಿ ಅಂತ ಅದೇಶ ಮಾಡೋದು ಸರಿಯಲ್ಲ ಎಂದು ಕಾವೇರಿ ನೀರಾವರಿ ಬೋರ್ಡ್ ವಿರುದ್ಧ ದೇವೇಗೌಡ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಹಾವೇರಿ ಗ್ಯಾಂಗ್ ರೇಪ್ ಪ್ರಕರಣ ತನಿಖೆ ಬಳಿಕ ಕಾನೂನು ಕ್ರಮ: ಪರಮೇಶ್ವರ್

ತಮಿಳುನಾಡಿಗೆ ದೈತ್ಯ ರಾಜಕೀಯ ಶಕ್ತಿ ಇದೆ. ಅವರಿಗೆ ಎಷ್ಟು ನೀರು ಕೊಟ್ಟರೂ ಸಾಲದು. ತಮಿಳುನಾಡಿನಲ್ಲಿ ಎಲ್ಲಾ ಲಿಫ್ಟ್ ಇರಿಗೇನ್ ಮಾಡ್ತಿದ್ದಾರೆ. ಅವರಿಗೆ ಮಳೆ ಬಂದರೂ ನೀರು ಬೇಕು ಅಂತಾ ಕೇಳ್ತಾರೆ. ತಮಿಳುನಾಡಿನ ನೀರಾವರಿ ಬಗ್ಗೆ ಸ್ವಾಮಿನಾಥನ್ ಅವರು ವರದಿ ಕೊಟ್ಟಿದ್ದಾರೆ. ಅವರು ವಾರ್ಷಿಕ 3 ಬೆಳೆ ಅರಾಮವಾಗಿ ಬೆಳೆಯುತ್ತಾರೆ. ನಮಗೆ ಒಂದು ಬೆಳೆ ಬೆಳೆಯೋಕೆ ಆಗ್ತಿಲ್ಲ. ಇದು ಒಂದು ದಿನದ ಕೆಲಸ ಅಲ್ಲ. ಮಂಡ್ಯದಲ್ಲಿ ಹೋರಾಟ ಮಾಡ್ತಾರೆ. ಏನು ಆಗ್ತಿಲ್ಲ. ಇದೆಲ್ಲವನ್ನು ಸಮಿತಿ ಗಮನಕ್ಕೆ ತಂದಿದ್ದೇವೆ ಎಂದರು.

ಕಾವೇರಿ ಸಮಸ್ಯೆ ಪರಿಹಾರ ಇದೆ. ನಮಗೆ ಆಗಿರೋ ಅನ್ಯಾಯ ಪ್ರಧಾನಿ ಮೋದಿ ಅವರಿಗೆ ಮುಟ್ಟುವಂತೆ ನಾವು ಒಟ್ಟಾಗಿ ಹೋರಾಬೇಕು. ರಾಜಕೀಯ ಪಕ್ಷಗಳು ಒಟ್ಟಾಗಿ ನಾವು ಹೋರಾಟ ಮಾಡಬೇಕು. ‌ನಾನು ಇನ್ನೂ ಎರಡೂವರೆ ವರ್ಷ ರಾಜ್ಯಸಭೆಯಲ್ಲಿ ಇರುತ್ತೇನೆ. ನಾನು ಸಾಯೋವರೆಗೂ ಕಾವೇರಿ ಬಗ್ಗೆ ಹೋರಾಟ ಮಾಡ್ತೀನಿ. ನ್ಯಾಯ ಸಿಗೋವರೆಗೂ ನಾನು ಸುಮ್ಮನೆ ಕೂರೊಲ್ಲ. ನನ್ನ ಕೊನೆಯುಸಿರು ಇರೋವರೆಗೂ ಹೋರಾಟ ಮಾಡ್ತೀನಿ ಎಂದು ತಿಳಿಸಿದರು. ಇದನ್ನೂ ಓದಿ: ಮೈಸೂರಿನಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಅತಿಹೆಚ್ಚು ದೇಣಿಗೆ ಕೊಟ್ಟಿದ್ದು ಮುಸ್ಲಿಮರು!

Share This Article