ಹೈಕಮಾಂಡ್ ತೀರ್ಮಾನಿಸೋವರೆಗೂ ನಾನೇ ಸಿಎಂ: ಸಿದ್ದರಾಮಯ್ಯ

1 Min Read

ಬೆಂಗಳೂರು: ಹೈಕಮಾಂಡ್ ತೀರ್ಮಾನ ಮಾಡೋವರೆಗೂ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಪುನರುಚ್ಚರಿಸಿದ್ದಾರೆ.

ಬಜೆಟ್ ಉತ್ತರ ವೇಳೆ ಸದನದಲ್ಲಿ ಡಿಕೆಶಿ ಹೆಸರು ಹಾಗೂ ಸ್ಪೀಕರ್ ಖಾದರ್ ಫೋಟೋ ಸೆಷನ್ ವಿಚಾರ ಪ್ರಸ್ತಾಪಿಸಿ ವಿಪಕ್ಷಗಳು ಸಿಎಂಗೆ ಕಾಲೆಳೆಯುತ್ತಿದ್ರು. ವಿಪಕ್ಷಗಳ ಲೇವಡಿಗೆ ಉತ್ತರಿಸಿದ ಸಿಎಂ, ನಮ್ಮಲ್ಲಿ ಎಲ್ಲ ಶಾಸಕರೂ ಅರ್ಹರು, ಯಾರಾದ್ರೂ ಸಿಎಂ ಆದರೂ ನನಗೆ ಖುಷಿಯಾಗುತ್ತದೆ. ಹೈಕಮಾಂಡ್ ಎಲ್ಲಿಯವರೆಗೆ ಇರು ಅಂತಾರೋ, ಅಲ್ಲೀವರೆಗೂ ಖಾದರ್ ಸ್ಪೀಕರ್ ಆಗಿರುತ್ತಾರೆ. ವಿಪಕ್ಷಗಳು ಏನೇ ಕಿತಾಪತಿ ಮಾಡಿದ್ರೂ ಖಾದರ್ ಮನ್ನಣೆ ಕೊಡಲ್ಲ. ಅವರು ಸಚಿವರಾಗೋದಾದರೆ ಸಂತೋಷವೇ. ಕನಸು ಎಲ್ಲರಿಗೂ ಇದೆ. ಅಶೋಕ್‌ಗೂ ಸಿಎಂ ಆಗೋ ಕನಸಿದೆ. ಆದರೆ ಅದಕ್ಕೆ ವಿಜಯೇಂದ್ರ ಅವಕಾಶ ಕೊಡಲ್ಲ. ಅಶೋಕ್ ಸಿಎಂ ಆದರೂ ಸಂತೋಷನೇ, ಬೆಲ್ಲದ್ ಆದರೂ ಸಂತೋಷ ಅಂತ ಹೇಳಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು – ರಾಹುಲ್ ಗಾಂಧಿ ಕೇರಳ ಪ್ರವಾಸ ರದ್ದು

ಈ ವೇಳೆ ಸುನೀಲ್ ಕುಮಾರ್ ಮಾತಾಡಿ, ಡಿಕೆಶಿ ಸಿಎಂ ಆದ್ರೂ ಖುಷಿ ಅಂತ ಹೇಳಿ ಸರ್ ನೋಡೋಣ ಅಂತ ಸವಾಲ್ ಹಾಕಿದ್ರು. ಇದಕ್ಕೆ ಉತ್ತರ ಕೊಟ್ಟ ಸಿಎಂ, ನೋಡಪ್ಪ, ಹೈಕಮಾಂಡ್ ತೀರ್ಮಾನ ಮಾಡೋವರೆಗೂ ನಾನೇ ಸಿಎಂ. ನಮ್ಮಲ್ಲಿ ಯಾರೂ ಸಿಎಂ ಆದರೂ ಖುಷಿನೇ. ಯಾಕೆ ಎಂ.ಬಿ ಪಾಟೀಲ್ ಆಗಬಾರದಾ? ಮುನಿಯಪ್ಪ ಆಗಬಾರದಾ? ಕೋನ ರೆಡ್ಡಿ, ಖಂಡ್ರೆ, ಶಿವಾನಂದ ಪಾಟೀಲ್, ದಿನೇಶ್ ಗುಂಡೂರಾವ್ ಸಿಎಂ ಆಗಬಾರದಾ? ಎಲ್ಲರಿಗೂ ಸಿಎಂ ಆಗುವ ಅರ್ಹತೆ ಇದೆ. ಅವಕಾಶಗಳು ಸಿಗಬೇಕು ಅಷ್ಟೇ. ಎಲ್ಲರಿಗೂ ಯೋಗ್ಯತೆ ಇದೆ, ಅವಕಾಶ ಸಿಗಲ್ಲ ಅಷ್ಟೇ. ಅವಕಾಶ ಬಂದರೆ ಎಲ್ರೂ ಆಗ್ತಾರೆ ಅಂದಿದ್ದಾರೆ. ಇಷ್ಟೆಲ್ಲಾ ಹೇಳಿದ್ರೂ ಕೊನೆಗೂ ಡಿಕೆಶಿ ಹೆಸರನ್ನು ಸಿಎಂ ಹೇಳಲೇ ಇಲ್ಲ.

Share This Article