ಜಗನ್ನಾಥ ಯಾತ್ರೆಯಲ್ಲಿ ನುಸ್ರತ್ ಜಹಾನ್- ನನ್ನ ಧರ್ಮ ಯಾವುದು ಅಂತ ನನಗೆ ಗೊತ್ತು

Public TV
2 Min Read

-ಜನ್ಮದಿಂದಲೂ ಮುಸ್ಲಿಂ, ಈಗಲೂ ಮುಸ್ಲಿಂ
-ಫತ್ವಾ ಹೊರಡಿಸಿದವ್ರಿಗೆ ಸಂಸದೆ ತಿರುಗೇಟು

ಕೋಲ್ಕತ್ತಾ: ಹಲವು ಟೀಕೆ ಟಿಪ್ಪಣಿಗಳ ನಡುವೆಯೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ ಇಸ್ಕಾನ್ ಮಂದಿರದ ಜಗನ್ನಾಥ ಯಾತ್ರೆಯಲ್ಲಿ ಭಾಗಿಯಾದರು. ಈ ಮೂಲಕ ತಮ್ಮ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಧರ್ಮಗುರುಗಳು ಮತ್ತು ಟೀಕಾಕಾರರಿಗೆ ಖಡಕ್ ತಿರುಗೇಟು ನೀಡಿದರು.

ಸಂಸದೆಯಾಗಿ ಆಯ್ಕೆಯಾಗಿರುವ ನಟಿ ನುಸ್ರತ್ ಜಹಾನ್ ಅವರನ್ನು ಇಸ್ಕಾನ್ ದೇವಾಲಯ ಮಂಡಳಿ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿತ್ತು. ಕೆಲವು ದಿನಗಳ ಹಿಂದೆ ನುಸ್ರತ್ ಜಹಾನ್ ಕೋಲ್ಕತ್ತಾ ಹಿಂದೂ ಉದ್ಯಮಿ ನಿಖಿಲ್ ಜೈನ್ ರನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಸೀರೆ ತೊಟ್ಟು, ಸಿಂಧೂರವಿಟ್ಟು, ಕೈ ಬಳೆ ಹಾಕಿ ನವ ವಧುವಿನಂತೆ ಸಂಸತ್ತಿಗೆ ಆಗಿಸಿ ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಬುರ್ಖಾ ಧರಿಸದೇ ಬಂದಿದ್ದಕ್ಕೆ ಕೆಲವು ಮುಸ್ಲಿಂ ಧರ್ಮಗುರುಗಳ ಕೆಂಗಣ್ಣಿಗೆ ನುಸ್ರತ್ ಜಹಾನ್ ಗುರಿಯಾಗಿದ್ದರು.

ಯಾತ್ರೆಯಲ್ಲಿ ಭಾಗಿಯಾಗಿದ್ದ ವೇಳೆ ತಮ್ಮ ವಿರುದ್ಧ ಹೊರಡಿಸಲಾಗಿರುವ ಫತ್ವಾಗೆ ಪ್ರತಿಕ್ರಿಯಿಸಿದ ಸಂಸದೆ, ಆಧಾರರಹಿತ ವಿಚಾರಗಳತ್ತ ನಾನು ಗಮನ ನೀಡಲ್ಲ. ನನಗೆ ನನ್ನ ಧರ್ಮ ಯಾವುದು ಎಂಬುವುದು ಗೊತ್ತಿದೆ. ನಾನು ಜನ್ಮದಿಂದಲೂ ಮುಸ್ಲಿಂ, ಇಂದಿಗೂ ಮುಸ್ಲಿಂ ಧರ್ಮದಲ್ಲಿ ನಾನಿದ್ದೇನೆ. ಇದು ಧರ್ಮ ಮತ್ತು ನಂಬಿಕೆಯ ಪ್ರಶ್ನೆಯಾಗಿದ್ದು, ಕೆಲವರು ಈ ಕುರಿತು ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳುವುದು ಉತ್ತಮ ಎಂದು ತಿರುಗೇಟು ನೀಡಿದರು.

ಪೂಜೆ ಸಲ್ಲಿಸಿದ ಸಂಸದೆ:
ಯಾತ್ರೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಸಾಥ್ ನೀಡಿದ ನುಸ್ರತ್ ಜಹಾನ್ ಪೂಜೆ ಸಲ್ಲಿಸಿ ತೆಂಗಿನಕಾಯಿ ಒಡೆದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿಯೂ ನುಸ್ರತ್ ಜಹಾನ್ ಮಂಗಲಸೂತ್ರ, ಸಿಂಧೂರವಿಟ್ಟು ಆಗಮಿಸಿದ್ದರು. ಹಿಂದೂ ಮಹಿಳೆಯರಂತೆ ವೇಷಭೂಷಣ ತೊಟ್ಟಿದ್ದಕ್ಕೆ ಸ್ಥಳೀಯ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ನಾವು ಅಭಿವೃದ್ಧಿಯತ್ತ ಸಾಗುತ್ತಿರುವ ಹೊಸ ಭಾರತದ ನವ ನಾಗರೀಕರು. ಹಾಗಾಗಿ ಎಲ್ಲ ಧರ್ಮ ಮತ್ತು ಸಂಸ್ಕೃತಿಗೆ ಗೌರವ ನೀಡುವುದು ಅವಶ್ಯಕ. ಕೆಲವರು ಮತಗಳಿಗಾಗಿ ದೇವರನ್ನು ವಿಗಂಡನೆ ಮಾಡಲು ಹೊರಟಿದ್ದಾರೆ. ನಾನು ಮುಸ್ಲಿಂ ಮತ್ತು ಜಾತ್ಯಾತೀತ ಭಾರತದ ಮಹಿಳೆ. ದೇವರ ಹೆಸರಿನಲ್ಲಿ ಜನರನ್ನು ವಿಭಜಿಸುವುದು ನನ್ನ ಧರ್ಮ ಎಲ್ಲಿಯೂ ಹೇಳಿಲ್ಲ ಎಂದು ನುಸ್ರತ್ ಜಹಾನ್ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *