ಉಸಿರಾಡಲು ಬಿಡ್ತಿಲ್ಲ ಏನ್ ಮಾಡೋಣ: ಡಿಕೆಶಿ

Public TV
1 Min Read

ಬೆಂಗಳೂರು: ಐಟಿ ಇಲಾಖೆಯವರು ನೋಟಿಸ್ ಮೇಲೆ ನೋಟಿಸ್ ನೀಡುತ್ತಿದ್ದಾರೆ. ಅವರು ಉಸಿರಾಟು ಬಿಡುತ್ತಿಲ್ಲ ಏನ್ ಮಾಡೋಣ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.

ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಈ ತಿಂಗಳ ಕೊನೆಯೊಳಗೆ ಅಂತಿಮ ಹೇಳಿಕೆ (ಫೈನಲ್ ಸ್ಟೇಟ್‍ಮೆಂಟ್) ದಾಖಲು ಮಾಡಬೇಕು ಎಂದು ಐಟಿ ಇಲಾಖೆ ನೋಟಿಸ್ ನಲ್ಲಿ ಸೂಚಿಸಿದೆ.

ಐಟಿ ದಾಳಿಯ ಬಳಿಕ ಅಂತಿಮ ವರದಿ (ಫೈನಲ್ ರಿಪೋರ್ಟ್) ತಯಾರು ಮಾಡಲಾಗುತ್ತದೆ. ಈ ವರದಿಯನ್ನು ಅಧಿಕಾರಿಗಳು ಅಸೆಸ್ಸಿಂಗ್ ಡಿಪಾರ್ಟ್ ಮೆಂಟ್ ಗೆ ಕಳುಹಿಸುತ್ತಾರೆ. ಐಟಿ ದಾಳಿಗೆ ಒಳಗಾದ ವ್ಯಕ್ತಿ ಆದಾಯವನ್ನು ಘೋಷಿಸಿಕೊಳ್ಳಲು ಒಂದು ವರ್ಷದ ಕಾಲಾವಕಾಶ ನೀಡಲಾಗುತ್ತದೆ. ಅದೇ ರೀತಿ ಡಿಕೆ ಶಿವಕುಮಾರ್ ಅವರಿಗೆ ನೀಡಲಾಗಿದ್ದ ಅವಧಿ ಡಿಸೆಂಬರ್ 31ಕ್ಕೆ ಕೊನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಕುಟುಂಬಸ್ಥರಿಗೆ ಐಟಿ ಇಲಾಖೆ ನೋಟಿಸ್ ನೀಡುತ್ತಿದೆ.

ಸೂಕ್ತ ಸಮಯದಲ್ಲಿ ವಿಚಾರಣೆಗೆ ಹಾಜರಾಗದೇ ಇದ್ದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಐಟಿ ಇಲಾಕೆ ಎಚ್ಚರಿಕೆಯನ್ನು ನೀಡಿದೆ. ಈ ಸಂಬಂಧ ಚುನಾವಣಾ ಪ್ರಚಾರ ಕೊನೆಗೊಳಿಸಿರುವ ಡಿ.ಕೆ.ಶಿವಕುಮಾರ್ ಇಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಐಟಿ ನೋಟಿಸ್ ಸಂಬಂಧ ವಕೀಲರೊಂದಿಗೆ ಮೂರು ದಿನಗಳ ಕಾಲ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ನೋಟಿಸ್ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ಉಸಿರಾಡಲು ಅವಕಾಶ ನೀಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ. ತಕ್ಷಣವೇ ಅಸೆಸ್ಸಮೆಂಟ್ ಆರ್ಡರ್ ಮಾಡಬೇಕೆಂದು ಹೇಳುತ್ತಿದ್ದಾರೆ. ಈಗ ಬೆಂಗಳೂರಿಗೆ ಹೋಗಿ ಅಧಿಕಾರಿಗಳನ್ನು ಭೇಟಿಯಾಗುತ್ತೇನೆ. ಎಲ್ಲರ ಫೈನಲ್ ರಿಪೋರ್ಟ್ ನ್ನು ನಮ್ಮ ಅಧಿಕಾರಿಗಳು ಸಿದ್ಧಗೊಳಿಸುತ್ತಿದ್ದಾರೆ. ಕಾನೂನು ಅವರ ಕೈಯಲ್ಲಿದ್ದು, ಏನ್ ಬೇಕಾದ್ರೂ ಮಾಡಬಹುದು. ಕಾಗವಾಡಕ್ಕೆ ಹೆಲಿಕಾಪ್ಟರ್ ನಲ್ಲಿ ಹೋಗಲು ಅನುಮತಿಯನ್ನ ನೀಡಲಿಲ್ಲ. ಸಾಯಂಕಾಲ ಅನುಮತಿಯನ್ನು ನೀಡುತ್ತೇವೆ ಎಂದು ಹೇಳ್ತಿದ್ದಾರೆ. ಅಧಿಕಾರ ಅವರ ಕೈಯಲ್ಲಿದೆ ಇಲ್ವಾ ಎಂದು ಪ್ರಶ್ನೆ ಮಾಡಿ ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *