‘ಹೆಂಡ್ತಿ ಮಕ್ಳನ್ನು ಬಿಟ್ ಬಂದಿದ್ದೀನಿ, ಸೇಫ್ ಆಗಿ ಮನೆಗೆ ಹೋಗ್ತೀನಾ?’: ಗಂಧದ ಗುಡಿಯಲ್ಲಿ ಕಣ್ಣೀರು ತರಿಸುತ್ತೆ ಅಪ್ಪು ಡೈಲಾಗ್

Public TV
2 Min Read

ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ (Gandhad Gudi) ಡಾಕ್ಯುಡ್ರಾಮಾ ಚಿತ್ರ ಇಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈ ಚಿತ್ರದ ವಿಶೇಷ ಅಂದರೆ, ಅಪ್ಪು (Appu) ಅಪ್ಪು ಆಗಿಯೇ ಕಾಣಿಸಿಕೊಂಡಿದ್ದಾರೆ. ಯಾವುದೇ ಮೇಕಪ್ ಇಲ್ಲದೇ, ಡೈಲಾಗ್ ಹೊಡೆಯದೇ ಸರಳವಾಗಿ ಹಾಗೂ ಸಹಜವಾಗಿದ್ದಾರೆ. ಹಾಗಾಗಿ ಪುನೀತ್ ಮತ್ತಷ್ಟು ಹತ್ತಿರವಾಗುತ್ತಾರೆ. ಈ ಚಿತ್ರದಲ್ಲಿ ಪುನೀತ್ ಕಾಡಿನ ಮಧ್ಯೆ ಹೋದಾಗ, ವಿಷ ಸರ್ಪಗಳನ್ನು ಕಾಣುತ್ತಾರೆ. ಹುಲಿ, ಚಿರತೆಗಳನ್ನು ನೋಡುತ್ತಾರೆ. ಈ ಸಂದರ್ಭದಲ್ಲಿ ಅವರು ಮಾತೊಂದನ್ನು ಆಡುತ್ತಾರೆ. ಆ ಮಾತು ನೋಡುಗನನ್ನು ಭಾವುಕನಾಗಿಸುತ್ತದೆ.

ಕಾಡಿನೊಳಗೆ ವಿಷದ ಹಾವು ಕಾಣುತ್ತಾ, ನಿರ್ದೇಶಕ ಅಮೋಘ ವರ್ಷ (Amogha Varsha) ಜೊತೆ ತಮಾಷೆಯಾಗಿ ಮಾತನಾಡಿದರೂ ಅದೀಗ ಪ್ರೇಕ್ಷಕರನ್ನು ಕಣ್ಣೀರು ಹಾಕಿಸುತ್ತದೆ. ಹಾವು ನೋಡುತ್ತಾ, ‘ಹೆಂಡ್ತಿ ಮಕ್ಕಳನ್ನು ಮನೇಲಿ ಬಿಟ್ಟು ಬಂದಿದ್ದೀನಿ. ಸೇಫ್ ಆಗಿ ಮನೆ ಸೇರ್ತೀನಿ ತಾನೆ?’ ಎಂದು ಪ್ರಶ್ನೆ ಮಾಡುತ್ತಾರೆ. ಅಂದು ಸೇಫ್ ಆಗಿಯೇ ಮನೆಗೆ ಬಂದ ಪುನೀತ್ ರಾಜ್ ಕುಮಾರ್, ಆ ನಂತರ ಆಸ್ಪತ್ರೆಗೆ ಹೋದವರು ಮತ್ತೆ ಸೇಫ್ ಆಗಿ ಬರಲಿಲ್ಲ ಎನ್ನುವುದು ನೋವಿನ ಸಂಗತಿ. ಈ ಮಾತು ಕೇಳುತ್ತಿದ್ದಂತೆಯೇ ಕಣ್ಣೀರು ಬರುವುದು ಸತ್ಯ. ಇದನ್ನೂ ಓದಿ: ಗಂಧದಗುಡಿ ಸಿನಿಮಾ ಅಲ್ಲವೇ ಅಲ್ಲ, ಅದೊಂದು ಅನುಭೂತಿ

ಡಾಕ್ಯುಮೆಂಟರಿ ಮಾದರಿಯ ಈ ಚಿತ್ರ ನಿಜಕ್ಕೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪುನೀತ್ ರಾಜ್‍ಕುಮಾರ್ (Puneeth Rajkumar) ಗಂಧದ ಗುಡಿ ಹೆಸರಿನಲ್ಲಿ ಡಾಕ್ಯುಮೆಂಟರಿ ಮಾಡಿದ್ದಾರೆ ಅಂದಾಗ, ಕುತೂಹಲಕ್ಕಿಂತ ಅನುಮಾನಿಸಿದವರೆ ಹೆಚ್ಚು. ಓಟಿಟಿ ಮೂಲಕ ಜಗತ್ತಿನ ಸಿನಿಮಾಗಳು ನಮ್ಮುಂದಿರುವಾಗ, ಡಿಸ್ಕವರಿ ಚಾನೆಲ್ ಗಳು ನಮ್ಮ ಬೆರಳ ತುದಿಯಲ್ಲೇ ನಲಿಯುತ್ತಿರುವಾಗ, ಅದಕ್ಕಿಂತ ಅಪ್ಪು ಇನ್ನೇನು ಮಾಡುವುದಕ್ಕೆ ಸಾಧ್ಯ? ಅಂತ ಅನಿಸಿದ್ದೂ ಇದೆ. ಪುನೀತ್ ಡ್ಯಾನ್ಸ್, ಪುನೀತ್ ಡೈಲಾಗ್, ಪುನೀತ್ ನಟನೆ, ಪುನೀತ್ ನಗುವನ್ನು ಬೆಳ್ಳಿ ಪರದೆಯಲ್ಲಿ ನೋಡಿ, ಕಣ್ತುಂಬಿಕೊಂಡಿರುವ ಅಭಿಮಾನಿಗಳು, ಇದ್ಯಾವುದೂ ಇಲ್ಲದ ಕಾಡು ಮೇಡುಗಳನ್ನು ನೋಡುವುದಕ್ಕೆ ಇಷ್ಟ ಪಡುತ್ತಾರಾ ಅಂತ ಚರ್ಚೆ ಮಾಡಿದ್ದೂ ಇದೆ. ಆದರೆ, ಅದೆಲ್ಲದರ ಆಚೆ ಗಂಧದ ಗುಡಿ ಹೊಸ ಅನುಭವವನ್ನು ನೀಡುತ್ತದೆ.

ಸಿನಿಮಾ ಕೊಡುವ ಥ್ರಿಲ್ ಗಿಂತ ಅಪ್ಪು ಇಲ್ಲಿ ಹೊಸ ಅನುಭೂತಿಯನ್ನು ಕಟ್ಟಿ ಕೊಡ ಯತಿ ಡೆತ್ ಕಟ್ಟಿ ಕೊಡುತ್ತಾರೆ. ಅವರು ಬೆಟ್ಟ ಹತ್ತಿದರೇ ನಾವೇ ಬೆಟ್ಟ ಹತ್ತಿದಷ್ಟು ಖುಷಿ, ಅವರು ಕಾಡಲ್ಲಿ ನಡೆದು ಹೊರಟರೇ ಅವರನ್ನು ನಾವೇ ಹಿಂಬಾಲಿಸುವಂತಹ ಅನುಭವ, ನಡು ನಡುವೆ ಅಪ್ಪು ಮಾತು, ತಮಾಷೆ, ಭಯ ಎಲ್ಲವೂ ಇಷ್ಟ ಇಷ್ಟ.

ಆನೆ, ಹುಲಿ, ಕರಡಿ, ಚಿರತೆ, ಕಪ್ಪೆ, ಹಾವು, ಚೇಳು, ಜಿಂಕೆ, ಪಾತರಗಿತ್ತಿ, ಮೀನು, ಮೊಸಳೆ ಅಬ್ಬಬ್ಬಾ ಎಷ್ಟೊಂದು ಪಾತ್ರಗಳು? ಅವಕ್ಕೆ ನಟನೆ ಕಲಿಸಿದವರಾರು, ಹಾಡು ಹೇಳಿಕೊಟ್ಟವರು ಯಾರು? ಅವು ಏಕೆ ಹಾಗೆ ಜೀವಿಸುತ್ತವೆ? ಇವೆಲ್ಲ ಪ್ರಶ್ನೆಗಳು ಪುನೀತ್ ಉತ್ತರ ಕೊಡುತ್ತಾ, ಕೊಡಿಸುತ್ತಾ ಸಾಗುತ್ತಾರೆ. ಇದೇ ಗಂಧದ ಗುಡಿಯ ಬ್ಯುಟಿ.

ಕರ್ನಾಟಕ ಸಂಸ್ಕೃತಿಗಳ ತವರು. ಕಾಡು ಮೇಡುಗಳ ನಾಡು, ಆರಾಧನೆಗಳ ಬೀಡು. ಎಲ್ಲವನ್ನೂ 96 ನಿಮಿಷಗಳಲ್ಲಿ ಹಿಡಿದಿಟ್ಟು ನಮ್ಮನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ನಿರ್ದೇಶಕ ಅಮೋಘ ವರ್ಷ, ಕ್ಯಾಮರಾ ಟೀಮ್, ಹಿನ್ನೆಲೆ ಸಂಗೀತ ಈ ಗಂಧದ ಗುಡಿಯ ಘಮವನ್ನು ಮತ್ತಷ್ಟು ಹೆಚ್ಚಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *