ಕನ್ನಡ ಮಾತಾಡಲ್ಲವೆಂದ ಬ್ಯಾಂಕ್ ಸಿಬ್ಬಂದಿ – ಮುತ್ತಿಗೆ ಹಾಕಿದ ರಕ್ಷಣಾ ವೇದಿಕೆ ಸದಸ್ಯರು

Public TV
1 Min Read

ಚಿಕ್ಕಬಳ್ಳಾಪುರ: ಗ್ರಾಹಕನೊಬ್ಬ ಬ್ಯಾಂಕಿಗೆ ತೆರಳಿದ್ದ ವೇಳೆ ಕನ್ನಡ ಮಾತಾಡುವುದಿಲ್ಲವೆಂದು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಸಿಬ್ಬಂದಿ ಕಿರಿಕ್ ಮಾಡಿದ್ದ ಹಿನ್ನೆಲೆ, ಇಂದು ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಬ್ಯಾಂಕಿಗೆ ಮುತ್ತಿಗೆ ಹಾಕಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ.

ವಿಜಯ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಂ.ಸತೀಶ್, ಉಪಾಧ್ಯಕ್ಷ ವಿನಯ್ ಈ ಕುರಿತು ಮಾತನಾಡಿದ್ದು, ಬ್ಯಾಂಕುಗಳು ಗ್ರಾಹಕರ ಸ್ನೇಹಿಯಾಗಿರಬೇಕಿದೆ. ಆದರೆ ಅನ್ಯ ರಾಜ್ಯದಿಂದ ಬಂದು ಉದ್ಯೋಗ ಮಾಡುತ್ತಾ ಸ್ಥಳೀಯ ಭಾಷೆಗಳ ಬಗ್ಗೆ ಅಸಡ್ಡೆ ತೋಡುವುದು ಖಂಡನೀಯ. ಬ್ಯಾಂಕ್ ಸಿಬ್ಬಂದಿ ‘ಐ ಡೋಂಟ್ ಟಾಕ್ ಕನ್ನಡ’ ಎಂದಿರುವುದು ಅತಿರೇಕದ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್‍ನಲ್ಲಿ ಗಾಂಧೀಜಿ ವಿಗ್ರಹ ಧ್ವಂಸಗೊಳಿಸಿದ ದುಷ್ಕರ್ಮಿಗಳು!

ಗ್ರಾಮೀಣ ಭಾಗದ ಜನತೆ ಬ್ಯಾಂಕಿಗೆ ಬರುವುದರಿಂದ ಅವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ. ಅವರೊಂದಿಗೆ ಸೌಜನ್ಯದಿಂದ ವರ್ತಿಸುವುದನ್ನು ಬಿಟ್ಟು ದುರಂಕಾರದಿಂದ ವರ್ತಿಸಿರುವುದು ಖಂಡನೀಯವಾಗಿದೆ ಎಂದು ವಿರೋಧ ಮಾಡಿದ್ದಾರೆ. ಈ ವೇಳೆ ವೇದಿಕೆಯ ಕಾರ್ಯಕರ್ತರು ಬ್ಯಾಂಕ್ ವಿರುದ್ಧ ಧಿಕ್ಕಾರ ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಬ್ಯಾಂಕ್ ವ್ಯವಸ್ಥಾಪಕ ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನಾ ನಿರತರನ್ನು ಸಮಾಧಾನಗೊಳಿಸಿದರು. ಅಲ್ಲದೆ ಸಿಬ್ಬಂದಿಯಿಂದ ಕ್ಷಮೆ ಕೋರಿಸಿದ್ದಾರೆ.

ಈ ವೇಳೆ ಬ್ಯಾಂಕಿನಲ್ಲಿ ಕನ್ನಡ ಮಾತನಾಡುವ ಸಹಾಯಕನನ್ನು ನೇಮಿಸಿ ಗ್ರಾಹಕರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದಲ್ಲದೆ, ತ್ವರಿತವಾಗಿ ಕನ್ನಡ ಕಲಿಯುವುದಾಗಿ ತಿಳಿಸಿದ್ದಾರೆ. ನಂತರ ಪ್ರತಿಭಟನಾ ನಿರತರು ಸುಮ್ಮನಾಗಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ವಿವಾಹಿತನಿಗೆ 10 ವರ್ಷ ಜೈಲು, 25 ಸಾವಿರ ದಂಡ

Share This Article
Leave a Comment

Leave a Reply

Your email address will not be published. Required fields are marked *