ನಾನು ಮುಂದೆ ರಾಜಕಾರಣದಲ್ಲಿ ಇರ್ತೇನೋ ಇಲ್ವೋ ಗೊತ್ತಿಲ್ಲ- ಅಚ್ಚರಿಯ ಹೇಳಿಕೆ ನೀಡಿದ್ರು ಶ್ರೀರಾಮುಲು

Public TV
2 Min Read

ಯಾದಗಿರಿ: ನಾನು ರಾಜಕಾರಣದಲ್ಲಿ ಮುಂದೆ ಇರುತ್ತೇನೋ ಇಲ್ಲವೋ ಗೊತ್ತಿಲ್ಲ, ನಮ್ಮ ಸಮುದಾಯವನ್ನು ಮುನ್ನಡೆಸುವ ಶಕ್ತಿ ರಾಜೂ ಗೌಡರಿಗೆ (Raju Gowda) ಇದೆ. ಹೀಗಾಗಿ ರಾಜೂ ಗೌಡರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಸಚಿವ ಶ್ರೀರಾಮುಲು (Sriramulu) ಭಾವುಕರಾಗಿ ಹೇಳಿದರು.

ಹುಣಸಗಿಯಲ್ಲಿ ನಡೆದ ಬಿಜೆಪಿ (BJP) ಜನ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮುಲು ತಮ್ಮ ಭಾಷಣದುದ್ದಕ್ಕೂ ರಾಜೂ ಗೌಡರನ್ನು ಬೆಂಬಲಿಸುವಂತೆ ಜನತೆಯಲ್ಲಿ ಪ್ರಾರ್ಥಿಸಿದರು. ಹುಣಸಗಿ ತಾಲೂಕು ಘೋಷಣೆ ಬಳಿಕ ನಿಮ್ಮ ಆಶೀರ್ವಾದ ಪಡೆಯಲು ಸಿಎಂ ಹಾಗೂ ನಾವು ಎಲ್ಲಾ ಬಂದಿದ್ದೇವೆ. ರಾಜೂ ಗೌಡ 3 ಬಾರಿ ಶಾಸಕರಾಗಿದ್ದಾರೆ. ನುಡಿದಂತೆ ನಡೆಯುವ ವ್ಯಕ್ತಿ ರಾಜೂ ಗೌಡರನ್ನು 4ನೇ ಬಾರಿ ಗೆಲ್ಲಿಸಬೇಕು. ಸಿಎಂ ಅವರು ಕಲ್ಯಾಣ ರಾಜ್ಯದ ಸಂಕಲ್ಪ ಮಾಡಿ ಇಲ್ಲಿಗೆ ಬಂದಿದ್ದಾರೆ. ಕಲ್ಯಾಣ ರಾಜ್ಯ ಆಗಬೇಕು, ಕಲ್ಯಾಣ ಕರ್ನಾಟಕ ಆಗಬೇಕು. ರಾಜೂ ಗೌಡ ಸೇರಿ 150 ಸ್ಥಾನ ಗೆಲ್ಲಬೇಕು. ರಾಜೂ ಗೌಡ ನಮ್ಮ ಸಮುದಾಯದ ಭವಿಷ್ಯದ ನಾಯಕರು ಎಂದರು.

ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನ (Congress) ಬೇರು ಸಹಿತ ಕಿತ್ತು ಹಾಕಬೇಕು. ಬೊಮ್ಮಾಯಿಯವರನ್ನು (Basavaraj Bommai) ಮತ್ತೆ ಸಿಎಂ ಮಾಡಬೇಕು. ಬಹಳ ಸಿಎಂಗಳು ಮೈಸೂರು ಭಾಗ ಅಭಿವೃದ್ಧಿ ಮಾಡ್ತಾರೆ, ಬಹಳ ಮಂದಿ ಸಿಎಂ ಆಗಬೇಕು ಅಂತ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಮೈಸೂರು ಭಾಗದಿಂದ ಆಗುವ ಸಿಎಂಗಳು ಕೇವಲ ಆ ಭಾಗದ ಅಭಿವೃದ್ಧಿ ನೋಡುತ್ತಾರೆ. ಬೊಮ್ಮಾಯಿ ತಂದೆಯವರು ಸಿಎಂ ಆಗಿದ್ದರು. ಅವರು ಹಿಂದುಳಿದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದರು. ಈಗ ಬಸವರಾಜ ಬೊಮ್ಮಾಯಿ ಮಾಡುತ್ತಿದ್ದಾರೆ. ಬಸವಣ್ಣನ ರೀತಿ ಸಾಮಾಜಿಕ ನ್ಯಾಯ ಕೊಡಿಸುವ ಕೆಲಸ ಬೊಮ್ಮಾಯಿ ಮಾಡುತ್ತಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಹೈಕಮಾಂಡ್ ಕೈ ಕಾಲು ಕಟ್ಟಿ ಹಾಕಿ, ಖರ್ಗೆ ಕೈಯಲ್ಲಿ ಕೆಲಸ ಮಾಡಿಸ್ತಾರೆ: ಸುಧಾಕರ್

371 ಅಡಿ ಬಂದಿರುವ ಪ್ರತಿ ಪೈಸೆಯ ಲೆಕ್ಕ ಸಿಗಬೇಕು ಅಂತ ಸಮಿತಿ ಅಧ್ಯಕ್ಷರನ್ನಾಗಿ ನನ್ನನ್ನು ಮಾಡಿದ್ದಾರೆ. ಅಧ್ಯಕ್ಷನಾದ ಮೇಲೆ 87 ಸಾವಿರ ಹುದ್ದೆ ಗುರುತಿಸುವ ಕೆಲಸ ಮಾಡಿದ್ದೇನೆ. 36 ಇಲಾಖೆಯಲ್ಲಿ ನೇರ ನೇಮಕಾತಿ ಮಾಡುತ್ತಿದ್ದೇವೆ. 68 ಸಾವಿರ ಹುದ್ದೆ ಭರ್ತಿ ಮಾಡುವ ಕೆಲಸ ಮಾಡುತ್ತಿದ್ದೇವೆ. ಮುಂಬಡ್ತಿಯಲ್ಲಿ ಆಗಿದ್ದ ಅನ್ಯಾಯ ಸರಿಪಡಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಈ ಹಿಂದೆ ಅಭಿವೃದ್ಧಿ ಹೆಸರಲ್ಲಿ ಕಾಂಗ್ರೆಸ್ ನಾಯಕರು, ಅವರ ಹಿಂಬಾಲಕರು ಅಭಿವೃದ್ಧಿ ಆಗಿದ್ದರು. ಆದರೆ ಈ ಭಾಗದ ಜನ ಅಭಿವೃದ್ಧಿ ಆಗಿರಲಿಲ್ಲ. ಈ ಭಾಗಕ್ಕೆ 3 ಸಾವಿರ ಕೋಟಿ ರೂ. ಅನುದಾನ ಕೊಡುವ ಕೆಲಸ ಸಿಎಂ ಮಾಡಿದ್ದಾರೆ. ಸಾಲದಿದ್ದರೆ ಮುಂದಿನ ಬಜೆಟ್‌ನಲ್ಲಿ 5 ಸಾವಿರ ಕೋಟಿ ರೂ. ಕೊಡಲು ಸಿದ್ಧರಿದ್ದಾರೆ ಎಂದರು.

ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮ ಮಾಡಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮ ಮಾಡಿದ್ದು ಬಿಜೆಪಿ ಸರ್ಕಾರ. ನಮ್ಮ ಹಾಸ್ಟೆಲ್‌ನಲ್ಲಿನ ಮಕ್ಕಳು ಉತ್ತಮ ಅಂಕ ಪಡೆದು ಉನ್ನತ ಹುದ್ದೆಗೇರುತ್ತಿದ್ದಾರೆ. ಸಿಎಂ ಮೀಸಲಾತಿ ಕೊಡಲ್ಲ ಅಂತ ನಮ್ಮನ್ನು ಹಲವರು ಗೇಲಿ ಮಾಡುತ್ತಿದ್ದರು. ಹೃದಯವಂತರಾದ ಬೊಮ್ಮಾಯಿಯವರು ಮೀಸಲಾತಿ ಹೆಚ್ಚಿಸಿದ್ದಾರೆ. ಇನ್ನೂ ಹೊಸ ತಾಲೂಕು ಕೇಂದ್ರ ಹುಣಸಿಗಿಗೆ ಬಸ್ ಡಿಪೋ ಬೇಡಿಕೆಯಿದೆ ಅದನ್ನೂ ಕೊಡುವ ಕೆಲಸ ಮಾಡುತ್ತೇನೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಭರವಸೆ ನೀಡಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಪ್ರಧಾನಿಯಲ್ಲ, ಮುಂದೆಯೂ ಆಗಲ್ಲ – ಬೊಮ್ಮಾಯಿ ಭವಿಷ್ಯ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *