ಅಂಬರೀಶ್ ನೆನೆದು ಕಣ್ಣೀರು – ಬಿಜೆಪಿಗೆ ಹೋಗೋ ಪ್ಲಾನ್ ಸದ್ಯಕ್ಕಿಲ್ಲ: ಸುಮಲತಾ

Public TV
1 Min Read

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ಮಂಡ್ಯದಲ್ಲಿ ಜಯಗಳಿಸಿದ ಬಳಿಕ ಅಂಬರೀಶ್ ಸಮಾಧಿಗೆ ನಮನ ಸಲ್ಲಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ನಾನು ಸದ್ಯಕ್ಕೆ ಬಿಜೆಪಿಗೆ ಹೋಗೋ ಪ್ಲಾನ್ ಇಲ್ಲ ಎಂದು ಹೇಳಿದ್ದಾರೆ.

ಅಂಬರೀಶ್ ಸಮಾಧಿಗೆ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, “ಜನರ ಅಭಿಪ್ರಾಯವೇ ನನ್ನ ಅಭಿಪ್ರಾಯ ಎಂದು ನಾನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೀನಿ. ಜನಾಭಿಪ್ರಾಯ ಪಡೆದು ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ದೆ. ಈಗ ಮುಂದಿನ ನನ್ನ ತೀರ್ಮಾನವೂ ಜನಾಭಿಪ್ರಾಯದ ಮೇಲೆ ನಿಂತಿರುತ್ತೆ” ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ಗೆಲುವಿನ ಅಂತರ ನಿರೀಕ್ಷೆ ಮಾಡಿದ್ದೆ. ಡಮ್ಮಿ ಸುಮಲತಾ ಅಭ್ಯರ್ಥಿಗಳಿಗೆ 25000 ವೋಟ್ ಬಿದ್ದಿವೆ. ಅಲ್ಲಿಗೆ 1.50 ಲಕ್ಷ ಅಂತರದಲ್ಲಿ ನಾನು ಗೆದ್ದಿದ್ದೀನಿ. ಸರ್ಕಾರ ನನಗೆ ವಿರುದ್ಧ ಇದ್ದರೂ ಇಡೀ ಮಂಡ್ಯ ಜನ ನನ್ನ ಕಡೆ ಇದ್ದರು. ಹಾಗಾಗಿ ಇದು ನನ್ನ ಗೆಲುವಲ್ಲ ಅಂಬಿ, ಸ್ವಾಭಿಮಾನಿ ಹಾಗೂ ಜೋಡೆತ್ತುಗಳ ಗೆಲುವು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ನನಗೆ ಸಾಥ್ ಕೊಟ್ಟಿದ್ದಾರೆ. ಸ್ವಾಭಿಮಾನಿ ಏನು ಎನ್ನುವುದನ್ನು ಮಂಡ್ಯದ ಜನ ತೋರಿಸಿಕೊಟ್ಟಿದ್ದಾರೆ ಎಂದರು.

ನಿಮ್ಮ ಮುಂದಿನ ನಡೆಯೇನು ಎಂಬ ಪ್ರಶ್ನೆಗೆ, ಎಲ್ಲರೂ ವಿಶ್ ಮಾಡಿದ್ದಾರೆ. ಈಗ ಗೆಲುವನ್ನು ಅನುಭವಿಸುವ ಸಮಯ, ಮೇ 29ರಂದು ಅಂಬಿ ಅವರ ಹುಟ್ಟುಹಬ್ಬವಿದೆ. ಸ್ವಾಭಿಮಾನಿಗಳ ವಿಜಯೋತ್ಸವ ಮಂಡ್ಯದಲ್ಲಿ ಆಚರಣೆ ಮಾಡುವುದಕ್ಕೆ ನಿರ್ಧರಿಸಿದ್ದೇನೆ. ಸ್ವಾಭಿಮಾನಿ ವಿಜಯೋತ್ಸವದಲ್ಲಿ ಜೋಡೆತ್ತುಗಳು ಭಾಗಿಯಾಗಲಿದ್ದಾರೆ. ರೆಬೆಲ್ ಇದ್ದಿದ್ರೆ ನನಗೆ ಏನು ಬೇಕಾಗಿರಲಿಲ್ಲ. ಕರ್ಣನಿಲ್ಲ ಆದರೆ ನನಗೆ ಅಂಬರೀಶ್ ಗೈಡ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ನನ್ನ ಮುಂದಿನ ನಡೆ ಜನಾಭಿಪ್ರಾಯದ ಮೇಲೆ ನಿಂತಿರುತ್ತೆ. ಒಬ್ಬ ಸಂಸದೆಯಾಗಿ ನಾನು ಮಾಡಬಹುದೋ ಅದೆಲ್ಲವನ್ನು ನಾನು ಮಂಡ್ಯ ಜನರಿಗೆ ಮಾಡುತ್ತೇನೆ. ಮಂಡ್ಯ ಜನರಿಗಾಗಿ ಅಂಬಿ ಕಂಡು ಕನಸುಗಳು ಒಂದಿಷ್ಟು ಬಾಕಿಯಿವೆ. ಅದೆಲ್ಲವನ್ನು ಪೂರ್ಣ ಮಾಡುವುದಾಗಿ ನಾನು ಭರವಸೆ ನೀಡುತ್ತೇನೆ. ಸದ್ಯ ಈಗ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಿಂದ ಕೆಲವರು ಕಾಲ್ ಮಾಡಿ ವಿಶ್ ಮಾಡಿದ್ದಾರೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *