– ನನಗೆ ಆತಂಕ ಯಾಕೆ, ಅಂಬಿ ಅಭಿಮಾನಿಗಳು ನಮಗೆ ವೋಟ್ ಹಾಕ್ತಾರೆ
ಮಂಡ್ಯ: ನೋವಾಗುವಂತ ಮಾತು ಯಾವ ನಾಯಕರು ಮಾತನಾಡಿದ್ದಾರೆ. ಅವರು ಯಾವ ಉತ್ತರ ಕೊಡ್ತಾರೆ ಕೊಡಲಿ. ಅವರನ್ನ ಯಾರು ಹಿಡಿದುಕೊಂಡಿಲ್ಲ ಎಂದು ಸುಮಲತಾ ಅವರಿಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಅವರು ರೋಡ್ ಶೋ ಮಾಡಿ, ಬಹಿರಂಗ ಸಮಾವೇಶ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅಂಬರೀಶ್ ಅಭಿಮಾನಿಗಳು ನಮಗೇ ವೋಟ್ ಹಾಕ್ತಾರೆ. ಸುಮ್ಮನೆ ಅಲ್ಲಿ ಹೋಗಿದ್ದಾರೆ, ವೋಟ್ ನಮಗೆ ಹಾಕ್ತಾರೆ. ನಾನು ಎಲ್ಲಾ ಕಡೆ ಪ್ರಚಾರಕ್ಕೆ ಹೋಗ್ತೇನೆ. ನನ್ನ ಕಾರ್ಯಕರ್ತರು ಬಲವಾಗಿದ್ದಾಗ ಯಾವ ಮುಖಂಡರ ಬಗ್ಗೆ ನಾನು ಯಾಕೆ ತಲೆ ಕೆಡಿಸಿಕೊಳ್ಳಬೇಕು? ನಮ್ಮ ನಾಯಕರು ಸುಮಲತಾ ಅವರಿಗೆ ನೋವಾಗುವಂತ ಮಾತನ್ನು ಆಡಿಲ್ಲ. ನನಗೂ ಅವರ ಎರಡರಷ್ಟು ಭಾವನಾತ್ಮಕವಾಗಿ ಮಾತನಾಡಲು ಬರುತ್ತದೆ ಎಂದು ಹೇಳಿದರು.
ಮಾದ್ಯಮಗಳಲ್ಲಿ ಸಿಎಂ ಅತಂಕದಲ್ಲಿ ಕೂತಿದ್ದಾರೆ ಅಂತಾ ಸುದ್ದಿ ಹಾಕುತ್ತಿದ್ದರು. ನನಗೇಕೆ ಆತಂಕ? ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಯಾವ ರೀತಿ ನಡೆಸಬೇಕು ಅಂತಾ ಚರ್ಚಿಸೋಕೆ ಬಂದಿರೋದು. ಮಂಡ್ಯ ಕ್ಷೇತ್ರವನ್ನ ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದರು.
ಕಳೆದ ಎರಡು ತಿಂಗಳಿಂದ ಕೊಟ್ಟಿರುವ ಪ್ರಚಾರ ಜೋರಾಗಿದೆ. ದೇಶದಲ್ಲಿ ಮೋದಿ, ರಾಹುಲ್ ಗಾಂಧಿಯವರ ಕ್ಷೇತ್ರಗಳಿಗೂ ಇಷ್ಟು ಪ್ರಾಧಾನ್ಯತೆ ನೀಡಿಲ್ಲ. ಮಂಡ್ಯದ ಚುನಾವಣೆಗೆ ಕೊಟ್ಟಿರುವ ಪ್ರಚಾರದಿಂದ ಮೈಮರೆಯದೇ ಕೆಲಸ ಮಾಡಬೇಕಿದೆ. ಕದ್ದುಮುಚ್ಚಿ ನಡೆಸುವ ಅವಶ್ಯಕತೆ ಇಲ್ಲ. ಪ್ರಚಾರದ ಬಗ್ಗೆಯಷ್ಟೇ ಇಂದು ಮಂಡ್ಯದ ಜಿಲ್ಲಾ ಪಂಚಾಯತ್ ಸದಸ್ಯರ ಜೊತೆ ಚರ್ಚೆ ನಡೆಸಿದ್ದೇನೆ. ಮಂಡ್ಯದಲ್ಲಿ ಜೆಡಿಎಸ್ ಉಳಿಸಿ ಬೆಳೆಸಿದ ಮತದಾರರು ಅಪಪ್ರಚಾರಗಳಿಗೆ ಒಳಗಾಗಬೇಕಿಲ್ಲ. ಮಂಡ್ಯದ ಜನರ ಕಷ್ಟಕ್ಕೆ ಸ್ಪಂದಿಸಿದ್ದೇವೆ ಎಂದು ತಿಳಿಸಿದರು.
ನಾರಾಯಣಗೌಡರಿಗೆ ಬುದ್ದಿ ಹೇಳಿದ್ದೇನೆ. ಹೊಗಳುವವರು ಇರ್ತಾರೆ ತೆಗಳುವವರು ಇರ್ತಾರೆ. ಇಬ್ಬರು ನಟರಿಗೆ ಧಮ್ಕಿ ಹಾಕಿದ್ದಾರೆ ಅಂತಾ ಹೇಳಿದ್ದಾರೆ. ಆದ್ರೆ ನಾವು ಅಧಿಕಾರ ಬಳಸಿಕೊಂಡು ರಾಜಕೀಯ ಮಾಡಿಲ್ಲ. ಇವತ್ತು ನಮ್ಮ ವಿರುದ್ಧ ಹೋರಾಡುವುದು ಅವರ ಹಕ್ಕು. ಭಯಬೀತರನ್ನಾಗಿ ಮಾಡುವುದು ನಮ್ಮ ಜಾಯಮಾನದಲ್ಲಿ ಬಂದಿಲ್ಲ. ಆ ರೀತಿ ಮಾತನಾಡದಂತೆ ಹೇಳಿದ್ದೇನೆ ಎಂದು ಸಿಎಂ ಹೇಳಿದರು.