ಪೊಲೀಸ್ ಕಮೀಷನರ್, ಡಿಸಿಪಿ ಬಳಿ ಕ್ಷಮೆಯಾಚಿಸಿದ್ದೇನೆ: ಸಂಸದ ಪ್ರತಾಪ್

Public TV
2 Min Read

ಮೈಸೂರು: ಪೊಲೀಸ್ ಕಮೀಷನರ್ ಹಾಗೂ ಡಿಸಿಪಿ ಅವರ ಬಳಿ ಕ್ಷಮೆಯಾಚಿಸಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಪ್ರತಾಪ್, “ಕಾನ್‌ಸ್ಟೇಬಲ್‌ನಿಂದ ಕಮೀಷನರ್, ಎಸ್‍ಪಿವರೆಗೂ ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಮಾಧ್ಯಮದವರು ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳಬೇಡಿ. ಏಕೆಂದರೆ ಸೆಪ್ಟೆಂಬರ್ 27ರಂದು ಚಾಮುಂಡಿಗೆ ಪುಷ್ಪಾರ್ಚನೆ ಮಾಡಿ ನಮ್ಮ ಅಧಿದೇವತೆ ಎಂದು ನಾವು ಹೊತ್ತು ಮೆರೆಯುತ್ತೇವೆ. ಹಾಗೆಯೇ ಚಾಮುಂಡಿಗೆ ಅವಳು, ಇವಳು ಎಂದು ಮಾತನಾಡಿ ಪುಷ್ಪಾರ್ಚನೆ ಮಾಡಿದರೆ ಆ ದೇವರು ಹಾಗೂ ಸಮಾಜವನ್ನು ಮೆಚ್ಚುವುದಿಲ್ಲ. ಅದನ್ನು ತಡೆ ಹಾಕುವ ಕೆಲಸವನ್ನು ನಾವು ಮಾಡಿದ್ದೇವೆ. ಅದಕ್ಕೆ ಅನ್ಯತಾ ಬಯಸುವ ಅಗತ್ಯವಿಲ್ಲ ಎಂದರು.

ನಾನು ಈಗಾಗಲೇ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಹಾಗೂ ಡಿಸಿಪಿ ಮುತ್ತುರಾಜ್ ಅವರ ಬಳಿ ವೈಯಕ್ತಿಕವಾಗಿ ಹೋಗಿ ಅಂದು ಮನಸ್ಸಿಗೆ ನೋವಾಗಿತ್ತು, ಘಾಸಿಯಾಗಿತ್ತು. ಇಷ್ಟಾದರೂ ಸಹ ಅಪಚಾರ ಮಾಡುವ ಸಲುವಾಗಿ ಶಾಮಿಯಾನ ಹಾಕುತ್ತಿದ್ದರು. ಆ ಸಂದರ್ಭದಲ್ಲಿ ನಾನು ಆವೇಶದಲ್ಲಿ ಈ ರೀತಿ ಮಾತನಾಡಿದ್ದೇನೆ ಕ್ಷಮಿಸಿ ಎಂದು ಕೇಳಿದ್ದೇನೆ. ನಾವೆಲ್ಲ ಒಂದೇ ಕುಟುಂಬದಂತೆ ಕೆಲಸ ಮಾಡಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಪ್ರತಾಪ್ ಸಿಂಹ ಅವರ ಸ್ಪಷ್ಟನೆ ನೀಡಿದರು.

ನಡೆದಿದ್ದೇನು?
ಬೆಟ್ಟದ ಮೇಲಿನ ಮಹಿಷಾಸುರ ಮೂರ್ತಿ ಬಳಿ ಮಹಿಷ ದಸರಾ ನಡೆಸುವ ಸಲುವಾಗಿ ಶಾಮಿಯಾನ, ವೇದಿಕೆ ಹಾಕಿ ತಯಾರಿ ಮಾಡಲಾಗುತ್ತಿತ್ತು. ಈ ವಿಷಯ ತಿಳಿದು ಪ್ರತಾಪ್ ಸಿಂಹ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿ ವೇದಿಕೆ ಹಾಕೋದಕ್ಕೆ ಯಾರು ನಿಮಗೆ ಅನುಮತಿ ಕೊಟ್ಟರು? ಇದನ್ನು ಮೊದಲು ಇಲ್ಲಿಂದ ತೆಗೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಹಾಕುವಾಗ ನೀವು ಏನು ಮಾಡುತ್ತಿದ್ರಿ ಪೊಲೀಸರೇ, ನಿಮ್ಮಿಂದ ಇಂತಹ ಕೆಲಸ ನಿರೀಕ್ಷೆ ಮಾಡಿರಲಿಲ್ಲ ಎಂದು ಅಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ಅಲ್ಲದೆ ಪೊಲೀಸ್ ಕಮೀಷನರ್ ಹಾಗೂ ಡಿಸಿಪಿ ವಿರುದ್ಧ ಕೂಗಾಡಿದ್ದರು.

ಆಗ ನಮಗೂ ಇದಕ್ಕೂ ಸಂಬಂಧವಿಲ್ಲ. ಇದು ಗ್ರಾಮ ಪಂಚಾಯ್ತಿ ಅವರು ಮಾಡಿರುವ ಕೆಲಸ ಎಂದು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದರು. ದಸರಾ ಉತ್ಸವ ಕಾರ್ಯಕ್ರಮಗಳಿಗೆ ವೇದಿಕೆ ಹಾಕುವ ಶಾಮಿಯಾನ ಮಾಲೀಕ ಶಫಿ ನೇತೃತ್ವದಲ್ಲಿ ಈ ವೇದಿಕೆ ಹಾಕಲಾಗಿತ್ತು. ಹೀಗಾಗಿ ಕೂಡಲೇ ಟ್ರಕ್ ತಂದು ಇದನ್ನು ತೆರವುಗೊಳಿಸಬೇಕು. ಇಲ್ಲವಾದರೆ ಅರಮನೆ ಆವರಣದಿಂದ ನಿನ್ನ ಓಡಿಸುತ್ತೇನೆಂದು ಶಾಮಿಯಾನ ಮಾಲೀಕರಿಗೆ ಪ್ರತಾಪ್ ಸಿಂಹ ಅವಾಜ್ ಹಾಕಿದ್ದರು.

Share This Article
Leave a Comment

Leave a Reply

Your email address will not be published. Required fields are marked *