ಬಾಂಗ್ಲಾ ಅಭಿಮಾನಿಗಳೇ ನನ್ನನ್ನು ಕ್ಷಮಿಸಿ: ಬೌಲರ್ ರುಬೆಲ್

Public TV
1 Min Read

ಕೊಲಂಬೊ: ಟೀಂ ಇಂಡಿಯಾದ ಅಭಿಮಾನಿಗಳು ದಿನೇಶ್ ಕಾರ್ತಿಕ್ ಆಟದ ಕುರಿತು ಸಂಭ್ರಮಿಸುತ್ತಿದ್ದರೆ, ಇತ್ತ ಬಾಂಗ್ಲಾ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿರುವ ಬೌಲರ್ ರುಬೆಲ್ ಹುಸೇನ್ ಫೈನಲ್ ಪಂದ್ಯದ ಸೋಲಿಗೆ ನಾನೇ ಹೊಣೆ ಎಂದು ಹೇಳಿ ಕ್ಷಮೆ ಕೇಳಿದ್ದಾರೆ.

ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ತಂಡದ ಗೆಲುವಿನ ಸನಿಹದಲ್ಲಿತ್ತು. ಆದರೆ ನನ್ನ ತಪ್ಪಿನಿಂದ ಪಂದ್ಯದಲ್ಲಿ ಸೋಲು ಪಡೆಯುವುದನ್ನು ಊಹಿಸಿರಲಿಲ್ಲ. ನಾನು ದೇಶದ ಪ್ರಜೆಗಳಲ್ಲಿ ಕ್ಷಮೆ ಕೇಳುತ್ತೇನೆ. ನನ್ನನ್ನು ಕ್ಷಮಿಸಿ ಎಂದು ಬರೆದುಕೊಂಡಿದ್ದಾರೆ.

ನಿದಾಸ್ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ಆಟಗಾರರು ಭಾರತದ ವಿರುದ್ಧ ಐತಿಹಾಸಿಕ ಗೆಲುವಿನ ವಿಶ್ವಾಸದಲ್ಲಿ ಪಂದ್ಯವನ್ನು ಆರಂಭಿಸಿದ್ದರು. ಆದರೆ ರುಬೆಲ್ ಬೌಲ್ ಮಾಡಿದ 19ನೇ ಓವರ್ ಪಂದ್ಯದ ಗತಿಯನ್ನೇ ಬದಲಾಯಿಸಿತ್ತು.

ಪಂದ್ಯದ 18 ನೇ ಓವರ್ ಮುಕ್ತಾಯ ವೇಳೆಗೆ 2 ಓವರ್ ಗಳಲ್ಲಿ ಟೀಂ ಇಂಡಿಯಾ 34 ರನ್ ಗಳಿಸಿಬೇಕಿತ್ತು. ಬಾಂಗ್ಲಾ ಕ್ಯಾಪ್ಟನ್ ಶಕೀಬ್, ರೂಬೆಲ್ ಗೆ ಬೌಲ್ ಮಾಡಲು ನೀಡಿದ್ದರು. ಸ್ಟ್ರೇಕ್ ನಲ್ಲಿದ್ದ ದಿನೇಶ್ ಕಾರ್ತಿಕ್ ಮುಂದಿನ ಮೂರು ಎಸೆಗಳಲ್ಲಿ ಕ್ರಮವಾಗಿ 6, 4, 6 ರನ್ ಸಿಡಿಸಿ ಟೀಂ ಇಂಡಿಯಾ ಗೆಲುವಿನ ಆಸೆಯನ್ನು ಚಿಗುರುವಂತೆ ಮಾಡಿದ್ದರು. ಅಂತಿಮವಾಗಿ ಈ ಓವರ್ ನಲ್ಲಿ ರುಬೆಲ್ 22 ರನ್ ನೀಡಿದ್ದರು.

ಈ ಪಂದ್ಯದಲ್ಲಿ 4 ಓವರ್ ಎಸೆದ ರೂಬೆಲ್ ಒಂದು ವಿಕೆಟ್ ಪಡೆದು 8.75 ಎಕನಾಮಿಯಲ್ಲಿ 35 ರನ್ ನೀಡಿ ದುಬಾರಿ ಎನಿಸಿಕೊಂಡರು. ಟೀಂ ಇಂಡಿಯಾ ಭರ್ಜರಿ ಗೆಲುವಿಗೆ ಕಾರಣರಾದ ಕಾರ್ತಿಕ್ ಕೇವಲ 8 ಎಸೆತಗಳಲ್ಲಿ 362.50 ಸ್ಟ್ರೈಕ್ ರೇಟ್ ನಲ್ಲಿ ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿ ನೆರವಿನಿಂದ 29 ರನ್ ಸಿಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *