ಈಶ್ವರಪ್ಪ ಮಹಾ ಪೆದ್ದ, ಬುದ್ದಿ ಇಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

Public TV
2 Min Read

ಕೊಪ್ಪಳ: ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಮಹಾ ಪೆದ್ದ, ಕೈ ಸನ್ನೆ ಮಾಡಿ ಆತನಿಗೆ ಬುದ್ದಿ ಇಲ್ಲ. ಅವನ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರು ಗುಮಾಸ್ತನ ರೀತಿಯಲ್ಲಿ ಪತ್ರ ಬರೆಯುತ್ತಿದ್ದಾರೆ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದೆ. ರಾಜ್ಯದ ಆಡಳಿತಕ್ಕೆ ಸಂಬಂಧಿಸಿದಂತೆ ಶಾಸಕರಾದ ನಾವುಗಳು ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಪತ್ರದ ಮೂಲಕ ವ್ಯವಹಾರ ನಡೆಸಬೇಕು. ಹಾಗಾಗಿ ಈಶ್ವರಪ್ಪನವರ ಹೇಳಿಕೆಗಳಿಗೆ ನಾನು ಯಾವುದೇ ಪ್ರತಿಕ್ರಿಯೆಗಳನ್ನು ನೀಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ:  ನನ್ನ ಕ್ಷೇತ್ರ ಬದಾಮಿ ಅಭಿವೃದ್ಧಿ ಮಾಡಿ – ಸಿಎಂ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಪತ್ರ

ಲೋಕಸಭೆ ಚುನಾವಣೆಗೆ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ. ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಯಾವುದೇ ಮೈತ್ರಿಗಳಿಲ್ಲ. ಎಲ್ಲ ಕಡೆಯೂ ಕಾಂಗ್ರೆಸ್ ಏಕಾಂಗಿಯಾಗಿಯೇ ಸ್ಪರ್ಧೆ ಮಾಡಲಿದೆ. ಇತ್ತ ಲೋಕಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಕೆಲವು ಇಲಾಖೆಗಳನ್ನು ಹಾಸನಕ್ಕೆ ವರ್ಗಾಯಿಸಿಕೊಂಡಿರುವ ಪ್ರತಿಕ್ರಿಯೆ ನೀಡಲ್ಲ. ಈ ರೀತಿಯ ಎಲ್ಲ ವಿಷಯಗಳನ್ನು ಸಮನ್ವಯ ಸಮಿತಿಯಲ್ಲಿ ಚರ್ಚಿಸಲಾಗುತ್ತದೆ. ಸಮನ್ವಯ ಸಮಿತಿ ಅಧ್ಯಕ್ಷ ನಾನಾಗಿದ್ದು, ಸಮ್ಮಿಶ್ರ ಸರ್ಕಾರದ ಕುರಿತು ಬಹಿರಂಗ ಹೇಳಿಕೆ ನೀಡಬಾರದು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬೇಡಿಕೆ ಈಡೇರಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯರಿಂದ ಸರ್ಕಾರಕ್ಕೆ ಪತ್ರ

ಈ ಮೊದಲು ಬಾಗಲಕೋಟೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯನವರು, ಈಶ್ವರಪ್ಪಗೆ ಸಂವಿಧಾನ ಗೊತ್ತಿಲ್ಲ. ಈ ದೇಶದ ಸಮಾಜಿಕ ವ್ಯವಸ್ಥೆ ಗೊತ್ತಿಲ್ಲ. ಅಂತವರ ಬಗ್ಗೆ ಏನ್ ಹೇಳಬೇಕು ಅನ್ನೋ ಕನಿಷ್ಠ ಜ್ಞಾನ ಇಲ್ಲದವರಿಗೆ ಕಾನೂನು ಗೊತ್ತಿಲ್ಲದವರಿಗೆ ಹಾಗೂ ಬೆಂಕಿ ಹಚ್ಚುವವರಿಗೆ ಪ್ರಶ್ನೆಗೆ ಉತ್ತರಿಸಬಾರದು ಎಂದು ಸಿದ್ದರಾಮಯ್ಯ ಪಾಕಿಸ್ತಾನಿ ಎಂಬ ಈಶ್ವರಪ್ಪ ಹೇಳಿಕೆಗೆ ಖಡಕ್ ತಿರುಗೇಟು ನೀಡಿದ್ದರು. ಇದನ್ನೂ ಓದಿ:  ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮತ್ತೊಂದು ಪತ್ರ ಬರೆದ ಮಾಜಿ ಸಿಎಂ

ಬಳ್ಳಾರಿ ಉಸ್ತುವಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕೊಟ್ಟಿದ್ದಾರೆ. ಡಿಕೆಶಿಗೂ ಜನಾರ್ದನ ರೆಡ್ಡಿ ಪರಿಸ್ಥಿತಿ ಬರಲಿದೆ ಎಂಬ ಎಸ್.ಆರ್ ಹಿರೆಮಠ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಸುಮ್ಮನೆ ಹೇಳುತ್ತಾರೆ. ಆದ್ರೆ ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ಸಮರ್ಥವಾಗಿ ಕೆಲಸ ಮಾಡುವವರಿಗೆ ಉಸ್ತುವಾರಿ ಕೊಟ್ಟಿದ್ದಾರೆ ಎಂದು ಸುಮ್ಮನಾದ್ರು. ಬಿಜೆಪಿಯವರು ಹೇಗಾದರೂ ಮಾಡಿ ಹಿಂಬಾಗಿಲಿಂದ ಅಧಿಕಾರಕ್ಕೆ ಬರಬೇಕೆಂದು ಮಾಡ್ತಿದ್ದಾರೆ. ಇದರಲ್ಲಿ ಅವರು ಸಫಲ ಆಗೋದಿಲ್ಲ. ಅವರಿಗೆ ಮೊದಲೇ ಮುಖಭಂಗ ಆಗಿದೆ. ಯಡಿಯೂರಪ್ಪ ಮೂರೇ ದಿನ ಮುಖ್ಯಮಂತ್ರಿ ಆಗಿ ಕೆಳಗಿರೋದೆ ಇದಕ್ಕೆ ಉದಾಹರಣೆ ಎಂದು ವ್ಯಂಗ್ಯವಾಡಿದ್ರಲ್ಲದೇ, ನಮ್ಮ ಕಾಂಗ್ರೆಸ್ ನವರು ಯಾರೂ ಬಿಜೆಪಿ ಸಂಪರ್ಕದಲ್ಲಿಲ್ಲ. ಬಿಜೆಪಿಯವರೇ ನಮ್ಮ ಸಂಪರ್ಕದಲ್ಲಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *