ಮಂಡ್ಯ ಸಂಸದರ ಬಗ್ಗೆ ಕಮೆಂಟ್ ಮಾಡಲ್ಲ: ಸುಮಲತಾಗೆ ಎಚ್‍ಡಿಡಿ ಟಾಂಗ್

Public TV
1 Min Read

– ಪ್ರಜ್ವಲ್ ರೈತನ ಹೊಟ್ಟೆಯಲ್ಲಿ ಹುಟ್ಟಿ ಬಂದವನು

ಬೆಂಗಳೂರು: ಸಂಸತ್‍ನಲ್ಲಿ ನೀರಿನ ಬಗ್ಗೆ ಮಾತನಾಡದ ಮಂಡ್ಯ ಸಂಸದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸುಮಲತಾ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯ ಸಂಸದರ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ. ನಾನು ಯಾಕೆ ಅವರ ಬಗ್ಗೆ ಕಾಮೆಂಟ್ ಮಾಡಲಿ. ಸಂಸದ ಪ್ರಜ್ವಲ್ ರೇವಣ್ಣ ಮಂಡ್ಯ ಜಿಲ್ಲೆಗೆ ನೀರು ಬಿಡಿ ಎಂದು ಸಂಸತ್‍ನಲ್ಲಿ ಧ್ವನಿ ಎತ್ತಿದ್ದಾನೆ. ರೈತರ ಬೆಳೆಗಳಿಗೆ 2 ಟಿಎಂಸಿ ನೀರು ಕೊಡಿ ಅಂತ ಕೇಳಿಕೊಂಡಿದ್ದಾನೆ ಎಂದು ಹೇಳಿದರು.

ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ತಂದೆ ಎಚ್.ಡಿ.ರೇವಣ್ಣ ಹಾಗೂ ಚಿಕ್ಕಪ್ಪ ಸಿಎಂ ಹೋರಾಟ ಗೊತ್ತಿದೆ. ಹೀಗಾಗಿ ಸಂಸತ್‍ನಲ್ಲಿ ಭ್ರಷ್ಟ ಸರ್ಕಾರ ಎಂಬ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಅವರ ಮಾತಿಗೆ ಪ್ರಜ್ವಲ್ ಸಮರ್ಥ ಉತ್ತರ ಕೊಟ್ಟಿದ್ದಾನೆ ಎಂದು ಖುಷಿ ವ್ಯಕ್ತಪಡಿಸಿದರು.

ಪ್ರಜ್ವಲ್ ರೈತನ ಹೊಟ್ಟೆಯಲ್ಲಿ ಹುಟ್ಟಿ ಬಂದವನು. ಅವನ ಊರಲ್ಲಿ ಅತ್ಯುತ್ತಮ ಬೆಳೆ ಬೆಳೆಯುತ್ತಾನೆ. ಈ ಮಾತು ಸುಳ್ಳು ಎನ್ನುವುದಾದರೆ ಬನ್ನಿ ನಾನು ಅಲ್ಲಿಗೆ ಕರೆದುಕೊಂಡು ಹೋಗಿ ತೋರಿಸುತ್ತೇನೆ. ಅವರು ರೈತ ಕೆಲಸ ಮಾಡುತ್ತಿದ್ದಾರೆ. ಈಗ ಸಿಎಂ ಭೂಮಿ ಖರೀದಿ ಮಾಡಿದ್ದಾರೆ. ಈ ಮೂಲಕ ಕೃಷಿ ಚಟುವಟಿಕೆ ನಡೆಸುವ ಆಲೋಚನೆ ಹೊಂದಿದ್ದಾನೆ. ನಿಖಿಲ್ ಕೂಡ ಕೃಷಿ ಮಾಡಲು ಓಡಾಡುತ್ತಿದ್ದಾನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *