ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ, ಯಾರನ್ನು ಬೇಕಾದರೂ ಡಿಸಿಎಂ ಮಾಡಲಿ: ಎಚ್.ವಿಶ್ವನಾಥ್

Public TV
1 Min Read

ಬೆಂಗಳೂರು: ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ, ಯಾರನ್ನು ಬೇಕಾದರೂ ಉಪಮುಖ್ಯಮಂತ್ರಿಗಳನ್ನಾಗಿ ಮಾಡಲಿ. ಹತ್ತು ಜನ ಡಿಸಿಎಂ ಮಾಡಿದರೂ ತೊಂದರೆ ಇಲ್ಲ. ಡಿಸಿಎಂ ಹುದ್ದೆ ಸಂವಿಧಾನಿಕ ಹುದ್ದೆಯೇ ಅಲ್ಲ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.

ಮತ್ತೆ ಎರಡು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುತ್ತಿರುವ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಸಚಿವ ಸ್ಥಾನ, ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ. ಉಪ ಮುಖ್ಯಮಂತ್ರಿ ಸ್ಥಾನ ಸಂವಿಧಾನಾತ್ಮಕ ಹುದ್ದೆಯೇ ಅಲ್ಲ. ಎಷ್ಟು ಜನರಿಗೆ ಬೇಕಾದರೂ ಡಿಸಿಎಂ ಹುದ್ದೆ ಕೊಡಬಹುದು. ಅನರ್ಹ ಶಾಸಕರು ಇರಲಿ ಎಂದು ಹತ್ತು ಜನರನ್ನು ಬೇಕಾದರೂ ಡಿಸಿಎಂ ಮಾಡಬಹುದು ತಪ್ಪೇನೂ ಇಲ್ಲ. ಆದರೆ, ನಾನು ಮಾತ್ರ ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ ಎಂದು ತಿಳಿಸಿದರು.

ಸೆ.11ರಂದು ಸುಪ್ರೀಂ ಕೋರ್ಟ್‍ನಲ್ಲಿ ಅನರ್ಹತೆಯ ಪ್ರಕರಣ ವಿಚಾರಣೆಗೆ ಬರಲಿದೆ. ಏನಾಗುತ್ತದೆಯೋ ಕಾದು ನೋಡೋಣ. ಆದರೆ, ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಮತ್ತೆ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಮೊದಲೇ ಘೋಷಿಸಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ. ನನ್ನ ಮಗ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾನೆ. ಟಿಕೆಟ್ ನೀಡಿದರೆ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸುತ್ತಾನೆ ಎಂದು ಎಂದು ಇಂಗಿತ ವ್ಯಕ್ತಪಡಿಸಿದರು.

ಜೆಡಿಎಸ್‍ನಲ್ಲಿ ಕುಮಾರಸ್ವಾಮಿಯವರ ಅಸಮಾಧಾನ, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯನವರ ಅಸಮಾಧಾನ, ಇಬ್ಬರ ಬಗ್ಗೆ ಮಾಧ್ಯಮದವರ ಅಸಮಾಧಾನ. ಅದರಿಂದಲೇ ಮೈತ್ರಿ ಸರ್ಕಾರ ಪತನವಾಯಿತು. ಈಗಲೂ ಜೆಡಿಎಸ್‍ನಲ್ಲಿ ಹಲವರಿಗೆ ಅಸಮಾಧಾನ ಇರಬಹುದು ಎಂದು ಮೈತ್ರಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *