ವಿಜಯೋತ್ಸವದ ಖುಷಿಯಲ್ಲಿರುವ ಕಾರ್ಯಕರ್ತರಿಗೆ ಹೊಸ ಮಂತ್ರ ಪಠಿಸಿದ ಮೋದಿ

Public TV
3 Min Read

– 75ನೇ ಸ್ವಾತಂತ್ರ್ಯದಂದು ಭವ್ಯ ಭಾರತವನ್ನಾಗಿ ಮಾಡೋಣ

ನವದೆಹಲಿ: ವಿಜಯೋತ್ಸವದ ಖುಷಿಯಲ್ಲಿ ಮುಳುಗಿರುವ ಭಾರತೀಯ ಜನತಾ ಪಾರ್ಟಿಯ ಎಲ್ಲ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಪ್ರಧಾನಿ ಮೋದಿ, “ಜೀತೆ ಗಾ ಬೈ ಜೀತೆ ಗಾ ವಿಕಾಸ್ ಹೀ ಜೀತೆಗಾ, ವಿಕಾಸ್ ಹೀ ಹಮಾರ ಮಂತ್ರ ಹೈ” ಎಂಬ ಮಂತ್ರವನ್ನು ಪಠಿಸಿದ್ದಾರೆ.

ದೆಹಲಿಯಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಚುನಾವಣೆಗಳ ಗೆಲುವಿಗೆ ಕಾರಣರಾದ ಎಲ್ಲ ಜನತೆಗೆ, ಕಾರ್ಯಕರ್ತರಿಗೆ, ರಾಜ್ಯ ನಾಯಕರುಗಳಿಗೆ ನಾನು ಶತ ಶತ ನಮನಗಳನ್ನು ಸಲ್ಲಿಸುತ್ತೇನೆ. ಉತ್ತರ ಪ್ರದೇಶದಲ್ಲಿ ನಗರಸಭೆ ಮತ್ತು ಸ್ಥಳೀಯ ಆಡಳಿತ ಚುನಾವಣೆಗಳು ನಡೆಯುವಾಗ ಕೆಲವರು ಜಿಎಸ್‍ಟಿ ಮತ್ತು ನೋಟ್ ಬ್ಯಾನ್ ನಿಂದಾಗಿ ಬಿಜೆಪಿ ನಿರ್ನಾಮ ವಾಗುತ್ತದೆ ಅಂತಾ ಭವಿಷ್ಯ ನುಡಿದಿದ್ದರು. ಹಾಗೆಯೇ ಗುಜರಾತ್ ಚುನಾವಣೆಗೂ ಮುನ್ನ ಅದೇ ಮಾತುಗಳು ಕೇಳಿ ಬಂದಿದ್ದವು. ಆದರೆ ಆ ಎಲ್ಲ ಭವಿಷ್ಯಗಳು ಇಂದು ಸುಳ್ಳಾಗಿವೆ. ದೇಶದ ಜನತೆ ಬಿಜೆಪಿ ಗೆ ಮತ ನೀಡುವ ಮೂಲಕ ನಮ್ಮ ಸರ್ಕಾರದ ಯೋಜನೆಗಳನ್ನು ಒಪ್ಪಿಕೊಂಡಿದ್ದಾರೆ ಎಂದು ವಿರೋಧಿಗಳಿಗೆ ಮೋದಿ ಪರೋಕ್ಷವಾಗಿ ಟಾಂಗ್ ನೀಡಿದರು.

ತಂತ್ರ-ಕುತಂತ್ರ ಫಲಿಸಲ್ಲ: ಜಿಎಸ್‍ಟಿ ಯಿಂದಾಗಿ ಸಾಮನ್ಯ ಜನರಿಗೆ ತೊಂದರೆ ಆಗುತ್ತದೆ ಎಂದು ಆರೋಪಿಸುತ್ತಿದ್ದರು. ಆದರೆ ನಮ್ಮ ಯೋಜನಗೆಳಿಂದ ಜನರಿಗೆ ಯಾವುದೇ ತೊಂದರೆ ಆಗಿಲ್ಲ. ಇದರಿಂದ ದೇಶದ ಅಭಿವೃದ್ಧಿಯಾಗುತ್ತಿದ್ದು, ಮಧ್ಯಮವರ್ಗದ ಜೀವನ ಶೈಲಿ ಬದಲಾಗುತ್ತಿದೆ. ಮೂರೂವರೆ ವರ್ಷಗಳ ಹಿಂದೆ ನಾನು ಗುಜರಾತ್ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ತೆರಳಿದೆ. ಆದರೆ ಕಾರ್ಯಕರ್ತರು ನಾಯಕರು ರಾಜ್ಯದಲ್ಲಿ ಅತ್ಯತ್ತುಮ ಆಡಳಿತವನ್ನು ನಡೆಸಿದ್ದಾರೆ. ಗುಜರಾತ್ ನ ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ವಿರುದ್ಧ ಅಪಪ್ರಚಾರ ನಡೆಯಿತು. ಹಲವರು ಒಂದು ಬಾರಿಯಾದ್ರೂ ಗುಜರಾತಿನಲ್ಲಿ ಬಿಜೆಪಿ ಯನ್ನು ಸೋಲಿಸಲು ಸಾಕಷ್ಟು ತಂತ್ರ ಕುತಂತ್ರಗಳನ್ನು ಮಾಡಿದ್ರೂ ಯಾವುದೇ ಫಲಿಸಲ್ಲ. ಒಟ್ಟಿನಲ್ಲಿ ಕಾರ್ಯಕರ್ತರ ಕೆಲಸ ಮತ್ತು ವಿರೋಧಿಗಳ ಸೋಲು ಎರಡು ನನಗೆ ಡಬಲ್ ಖುಷಿ ತಂದಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.

ದೇಶದ ಪ್ರತಿಯೊಬ್ಬರು ಹೊಸ ಆಸೆ, ಕನಸು, ಮಾರ್ಗದತ್ತ ಸಾಗುತ್ತಿದ್ದಾರೆ. ಒಂದು ವೇಳೆ ಗೆದ್ದ ಬಳಿಕ ತಪ್ಪು ಕೆಲಸ ಮಾಡಿದರೆ ಜನತೆ ನಿಮ್ಮನ್ನು 5 ವರ್ಷಗಳ ನಂತರ ಸ್ವೀಕರಿಸುವುದಿಲ್ಲ. 5 ವರ್ಷದ ಅಧಿಕಾರ ನಡೆಸಿದ ಬಳಿಕ ಮತ್ತೊಮ್ಮೆ ಚುನಾವಣೆಯಲ್ಲಿ ಜಯ ಗಳಿಸುವುದು ಸಾಮಾನ್ಯ ಸಾಧನೆ ಅಲ್ಲ. ಇದನ್ನು ಗುಜರಾತ್ ಜನತೆ ಬಿಜೆಪಿ ಯನ್ನು ಗೆಲ್ಲಿಸುವ ಮೂಲಕ ಸಾಧಿಸಿ ತೋರಿಸಿದೆ. ಕಳೆದ 22 ವರ್ಷಗಳಿಂದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಹೀಗೆ ಚುನಾವಣೆಗಳಿಂದ ಕಾಂಗ್ರೆಸ್ ನ್ನು ಸೋಲಿಸುತ್ತಾ ಬರುತ್ತಿದೆ ಎಂದರು.

ವಿಕಾಸದತ್ತ ಭಾರತ: 30 ವರ್ಷಗಳ ಹಿಂದೆ ಗುಜರಾತಿನಲ್ಲಿ ಜಾತಿವಾದ ಎಂಬ ವಿಷವನ್ನು ಹಾಕಲಾಗಿತ್ತು. ಆದರೆ ಬಿಜೆಪಿ ಈಗ ಜಾತಿವಾದದ ವಿಷವನ್ನು ತೆಗೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಕೆಲವು ತಿಂಗಳ ಹಿಂದೆ ಮತ್ತೊಮ್ಮೆ ಜಾತಿವಾದದ ವಿಷವನ್ನು ಹಾಕುವ ಪ್ರಯತ್ನವನ್ನು ಕೆಲವರು ಮಾಡಿದ್ದರು. ಆದರೂ ಗುಜರಾತ್ ಜನರು ಮಾತ್ರ ಜಾತಿವಾದದ ವಿಷವನ್ನು ತಿರಸ್ಕರಿಸಿ ನಮಗೆ ಮತಗಳ ಮೂಲಕ ಆಶೀರ್ವಾದ ನೀಡಿದ್ದಾರೆ. ಗುಜರಾತ್, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದ ಜನತೆ ದೇಶದ ವಿಕಾಸಕ್ಕಾಗಿ ತಮ್ಮ ಮತಗಳನ್ನು ನೀಡಿದ್ದಾರೆ.

ಕೆಲವು ತಿಂಗಳ ಹಿಂದೆ ಕೆಲವರು ಗುಜರಾತ್ ಜನತೆಯೊಂದಿಗೆ ಜಾತಿ ಆಟವಾಡಿದರು. ಮುಂದೆಯೂ ಅವರು ತಮ್ಮ ಕುತಂತ್ರಗಳ ಮೂಲಕ ನಿಮ್ಮೊಂದಿಗೆ ಆಟ ಆಡಲಿದ್ದು, ನೀವೆಲ್ಲ ಎಚ್ಚರಿಕೆಯಿಂದ ಇರಬೇಕು. ಗುಜರಾತ್ ಜನತೆ ಒಂಟಿಯಲ್ಲ, ನಿಮ್ಮೆಲ್ಲರೊಂದಿಗೆ ನಾವೆಲ್ಲರೂ ಇದ್ದೇವೆ. ಈ ವಿಜಯ ಸಾಮನ್ಯವಾದುದಲ್ಲ, ರಾಜನೀತಿಯಲ್ಲೂ ಇದೊಂದು ಐತಿಹಾಸಿಕ ವಿಜಯವಾಗಲಿದೆ. ಚುನಾವಣೆಯಲ್ಲಿ ಜಯಕ್ಕೆ ಕಾರಣರಾದ್ರ ಎಲ್ಲ ಮತದಾರರಿಗೂ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ನಮ್ಮ ವಿಜಯ ಯಾತ್ರೆ ಹೀಗೆ ಮುಂದುವರೆಯಲಿದೆ. ಸ್ವತಂತ್ರ ಭಾರತವನ್ನು ಭವ್ಯ ಭಾರತವನ್ನಾಗಿ ಕಟ್ಟೋಣ. ದೇಶವನ್ನು ಅತಿ ಎತ್ತರದತ್ತ ತೆಗೆದುಕೊಂಡು ಹೋಗೋಣ. ವಿಕಾಸದತ್ತ ನಮ್ಮಲ್ಲರ ನಡೆ ಇರಲಿದೆ ಎಂದು ಕಾರ್ಯಕರ್ತರನ್ನು ಮೋದಿ ಹುರಿದುಂಬಿಸಿದರು.

Share This Article
Leave a Comment

Leave a Reply

Your email address will not be published. Required fields are marked *