ನಾನೊಬ್ಬ ದತ್ತಪೀಠದ ಹೋರಾಟಗಾರ, ಹಿಂದೆ ಸರಿಯೋ ಮಾತೇ ಇಲ್ಲ: ಸುನಿಲ್ ಕುಮಾರ್

Public TV
2 Min Read

ಚಿಕ್ಕಮಗಳೂರು: ದತ್ತಪೀಠ ಹೋರಾಟದ ವಿಚಾರದಲ್ಲಿ ಅಂದಿನಿಂದ ಇಂದಿನವರೆಗೂ ನಾನೊಬ್ಬ ಹೋರಾಟಗಾರ. ದತ್ತಪೀಠ ಹಿಂದೂಗಳ ಪೀಠವಾಗಬೇಕೆಂಬ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಖಾಸಗಿ ಹಾಗೂ ಸರ್ಕಾರಿ ಕಾರ್ಯಕ್ರಮದ ನಿಮಿತ್ತ ಗುರುವಾರ ಚಿಕ್ಕಮಗಳೂರಿಗೆ ಭೇಟಿ ನೀಡಿದ ಸುನಿಲ್ ಕುಮಾರ್, ಜಿಲ್ಲೆಯ ಶೃಂಗೇರಿಯಲ್ಲಿರುವ ಶಾರದಾಂಬೆ ದೇಗುಲಕ್ಕೆ ಕುಟುಂಬ ಸಮೇತರವಾಗಿ ತೆರಳಿದ್ದರು. ಶೃಂಗೇರಿ ಶಾರದಾಂಬೆ ದರ್ಶನ ಪಡೆದು, ಗುರುವರ್ಯರ ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ವೇಳೆ ಪತ್ರಕರ್ತರ ಜೊತೆ ಮಾತನಾಡಿದ ಅವರು, ಅಂದಿನಿಂದ ಇಂದಿನವರೆಗೂ ನಾನೊಬ್ಬ ದತ್ತಪೀಠದ ಹೋರಾಟಗಾರ. ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಕಾನೂನು ತಜ್ಞರ ಸಲಹೆಯಂತೆ ಅಗತ್ಯ ಕ್ರಮಗಳನ್ನು ಕೈಗೊಂಡು, ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಹಾಗೂ ನಮ್ಮ ಪರಂಪರೆಯಂತೆ ಪೂಜೆ-ಪುನಸ್ಕಾರಗಳು ನಡೆಯುವ ರೀತಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ದತ್ತಪೀಠದ ವಿಚಾರದಲ್ಲಿ ಸರ್ಕಾರದ ಮಟ್ಟದಲ್ಲಿ ಕಾನೂನಿನನ್ವಯ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನೂ ಬಿಜೆಪಿ ಸರ್ಕಾರ ಕೈಗೊಂಡಿದೆ. ದತ್ತಪೀಠ ಹಿಂದೂಗಳದ್ದಾಗಬೇಕು ಎಂದು ಅನೇಕ ವರ್ಷಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಶೀಘ್ರವೇ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಹಾಗೂ ಪೂಜೆ ನಡೆಯಲಿದೆ ಎಂದರು. ಇದನ್ನೂ ಓದಿ: ಟ್ರಕ್ ಟರ್ಮಿನಲ್ ನಿರ್ಮಾಣ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಗ್ರಾಮಸ್ಥರು

ಶೃಂಗೇರಿ ಶಾರದಾಂಬೆ ದರ್ಶನದ ಬಳಿಕ ಮಳೆ ದೇವರು ಎಂದೇ ಖ್ಯಾತಿಯಾಗಿರುವ ಕಿಗ್ಗಾದ ಋಷ್ಯಶೃಂಗೇಶ್ವರ ದೇಗುಲಕ್ಕೆ ಭೇಟಿ ನೀಡಿ ಋಷ್ಯಶೃಂಗೇಶ್ವರನ ದರ್ಶನವನ್ನೂ ಪಡೆದರು. ಬಳಿಕ ಕೊಪ್ಪಕ್ಕೆ ಭೇಟಿ ನೀಡಿದ ಸಚಿವ, ಅಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮೆಸ್ಕಾಂ ವಿಭಾಗೀಯ ಕಚೇರಿ ಕಟ್ಟಡ ಹಾಗೂ ವಿಭಾಗೀಯ ಉಗ್ರಾಣ ಕಟ್ಟಡವನ್ನು ಉದ್ಘಾಟನೆ ಮಾಡಿದರು.

ಮಲೆನಾಡು ಭಾಗದ ಮನೆಗಳಿಗೆ ಅರಣ್ಯ ಇಲಾಖೆಯ ಕಾನೂನುಗಳಿಂದ ವಿದ್ಯುತ್ ಸಂಪರ್ಕ ನೀಡಲು ತೊಂದರೆಯಾಗಿದ್ದಲ್ಲಿ ಅಂತಹ ಮನೆಗಳಿಗೆ ಸೋಲಾರ್ ಲೈಟ್ ಅಳವಡಿಕೆಯ ಮೂಲಕ ವಿದ್ಯುತ್ ಸಂಪರ್ಕ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಇದನ್ನೂ ಓದಿ: ಕಾಂಗ್ರೆಸ್ ಈಗ ಒಡೆದ ಮನೆ ಒಂದಷ್ಟು ಬಣ ವಲಸೆರಾಮಯ್ಯರಿಗೆ ಜೈಕಾರ ಹಾಕುತ್ತಿದೆ: ಬಿಜೆಪಿ ವ್ಯಂಗ್ಯ

ಮಲೆನಾಡಿನ ಅನೇಕ ಮನೆಗಳಿಗೆ ವಿದ್ಯುತ್ ನೀಡುವಲ್ಲಿ ಅಡೆತಡೆಗಳು ಎದುರಾಗಿವೆ. ಸೆಕ್ಷನ್ 4, ಡೀಮ್ಡ್ ಫಾರೆಸ್ಟ್, ಮೀಸಲು ಅರಣ್ಯ ಸೇರಿದಂತೆ ಅನೇಕ ಸಮಸ್ಯೆಗಳು ಈ ಭಾಗದಲ್ಲಿ ಎದುರಾಗಿವೆ. ಈ ಕಾರಣದಿಂದ ವಿದ್ಯುತ್ ಸೌಲಭ್ಯ ನೀಡಲು ಸಾಧ್ಯವಾಗದ ಮನೆಗಳಿಗೆ ಪರ್ಯಾಯವಾಗಿ ಸೋಲಾರ್ ದೀಪಗಳನ್ನು ನೀಡುವ ಭರವಸೆ ನೀಡಿದರು.

ಕೃಷಿ ಸಂಬಂಧಿತ ಮೋಟಾರ್ ಹಾಗೂ ಪಂಪ್ ಸೆಟ್‌ಗಳ ಚಾಲನೆಗೆ ವಿದ್ಯುತ್ ಅತ್ಯಾವಶ್ಯಕ. ಈ ನಿಟ್ಟಿನಲ್ಲಿ ಅಗತ್ಯವಾಗಿ ದೊರೆಯಬೇಕಿರುವ 110 ಕೆ.ವಿ ವಿದ್ಯುತ್ ಸ್ಥಾವರಕ್ಕೆ ಈಗಾಗಲೇ ಅನುಮೋದನೆ ದೊರೆತಿದ್ದು, 3 ತಿಂಗಳ ಒಳಗಾಗಿ ತಲೆದೋರಿರುವ ಜಾಗದ ಸಮಸ್ಯೆಯನ್ನು ಬಗೆಹರಿಸಿ ತ್ವರಿತಗತಿಯಲ್ಲಿ ಈ ಕಾರ್ಯ ನಡೆಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿಎನ್ ಜೀವರಾಜ್, ಶೃಂಗೇರಿ ಶಾಸಕ ರಾಜೇಗೌಡ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *