ಐ ಆ್ಯಮ್ ಎ ಎಜುಕೇಟೆಡ್, ಐ ನೊ ವಾಟ್ ಐ ಆ್ಯಮ್- ಸಿಂಧೂರಿ ನೋಟಿಸ್‍ಗೆ ಮಂಜು ಗರಂ

Public TV
1 Min Read

ಹಾಸನ: ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಎ. ಮಂಜು ಅವರಿಗೆ ನೋಟಿಸ್ ಜಾರಿಯಾಗಿದ್ದು, ಈ ಕುರಿತು ಸಚಿವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

ಅರಕಲಗೂಡು ತಾಲೂಕಿನ ತಮ್ಮ ಸ್ವಗ್ರಾಮದಲ್ಲಿ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳಲ್ಲಿ ಬಂದ ಬಳಿಕ ನನ್ನ ಸ್ನೇಹಿತರು ಕರೆ ಮಾಡಿ ಡಿಸಿ ಕಚೇರಿಯಿಂದ ನೋಟಿಸ್ ಬಂದಿರುವುದಾಗಿ ನನ್ನ ಗಮನಕ್ಕೆ ತಂದ್ರು. ಆದ್ರೆ ಇಲ್ಲಿಯವರೆಗೂ ನನಗೆ ಯಾವುದೇ ರೀತಿಯ ನೋಟಿಸ್ ಬಂದಿಲ್ಲ. ನೋಟಿಸ್ ಕೊಡೋಕೆ ಸಮರ್ಥರ ಎಂಬುದನ್ನು ಮೊದಲು ಅವರು ಅರ್ಥ ಮಾಡಿಕೊಳ್ಳಬೇಕು. ಯಾಕಂದ್ರೆ ಆ ಕಚೇರಿ ಎ ಮಂಜು ಕಚೇರಿಯಲ್ಲ. ಬದಲಾಗಿ ಹಾಸನ ಜಿಲ್ಲೆಯ ಉಸ್ತುವಾರಿ ಮಂತ್ರಿ ಕಚೇರಿಯಾಗಿದೆ. ಹೀಗಾಗಿ ನಾನು ಸರ್ಕಾರದ ಓರ್ವ ಪ್ರತಿನಿಧಿಯಾಗಿ ಜನಸಾಮಾನ್ಯರು ಬಂದಾಗ ಅವರ ಕಷ್ಟ-ಸುಖಗಳನ್ನು ಆಲಿಸಲೆಂದು ಸರ್ಕಾರ ಕೊಟ್ಟಿರುವ ಕಚೇರಿಯನ್ನು ಬಳಸಿಕೊಂಡಿದ್ದೇನೆ. ಅದನ್ನು ದುರುಪಯೋಗಪಡಿಸಿಕೊಳ್ಳಬಾರದೆಂದು ನನಗೆ ಅರಿವಿದೆ ಅಂದ್ರು. ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ: ಸಚಿವ ಎ.ಮಂಜು ವಿರುದ್ಧ ಎಫ್‍ಐಆರ್ ದಾಖಲು

ನಾನು ಕೂಡ ಎರಡು ಪದವಿಗಳನ್ನು ಪಡೆದಿದ್ದೇನೆ. ಕಾನೂನು ನನಗೂ ತಿಳಿದಿದೆ. ನೋಟಿಸ್ ಬಂದಿದೆ ಅಂತ ಸ್ನೇಹಿತರಿಂದ ತಿಳಿಯಿತು. ಹೀಗಾಗಿ ಆ ನೋಟಿಸ್ ನನ್ನ ಕೈಸೇರಿದ ಬಳಿಕ ಅದರಲ್ಲೇನಿದೆ ಅಂತ ತಿಳಿದು ಆಮೇಲೆ ಪ್ರತಿಕ್ರಿಯಿಸುತ್ತೇನೆ ಅಂತ ಹೇಳಿದ್ರು.

ಚುನಾವಣೆಯಲ್ಲಿ ಜನ ನನ್ನನ್ನು ಗೆಲ್ಲಿಸಿ ಆಶೀರ್ವಾದ ಮಾಡಿದ್ದಾರೆ. ಅವರ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ನನ್ನನ್ನು ಮಂತ್ರಿಯನ್ನಾಗಿ ಮಾಡಿದೆ. ಮಂತ್ರಿಯಾದ ಬಳಿಕ ಜನಪರ ಕೆಲಸ ಮಾಡುವುದರ ಸಲುವಾಗಿ ಸರ್ಕಾರ ಕಚೇರಿ ನೀಡುತ್ತದೆ. ನಾನು ನನ್ನ ಕಚೇರಿಯನ್ನು ಸಾರ್ವಜನಿಕರ ಕೆಲಸಗಳನ್ನು ಆಲಿಸಲು ಮಾತ್ರ ಉಪಯೋಗಿಸುತ್ತೇನೆ ಹೊರತು ಯಾವುದೇ ರೀತಿಯ ರಾಜಕೀಯ ಪ್ರೇರಿತವಾಗಿ ಆ ಕಚೇರಿಯನ್ನು ಉಪಯೋಗಿಸಿಕೊಳ್ಳುವುದಿಲ್ಲ. ಅದು ನನಗೆ ತಿಳಿದಿದೆ. ಸೋ ಐ ಆ್ಯಮ್ ಎ ಎಜುಕೇಟೆಡ್. ಐ ನೋ ವಾಟ್ ಐ ಆ್ಯಮ್, ವಾಟ್ ಐ ಡಿಡ್ ಅಂತ ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *