ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ: ಸ್ವಾಮಿ ಅಸೀಮಾನಂದ ಸೇರಿ ಎಲ್ಲಾ ಆರೋಪಿಗಳ ಖುಲಾಸೆ

Public TV
1 Min Read

ಹೈದರಾಬಾದ್: 2007 ರಲ್ಲಿ ನಡೆದ ಹೈದರಾಬಾದ್ ನ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 10 ಮಂದಿ ಆರೋಪಿಗಳನ್ನು ಎನ್‍ಐಎ ವಿಶೇಷ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿದೆ. ನಬಕುಮಾರ್ ಶ್ರೀಕರ್ ಅಲಿಯಾಸ್ ಸ್ವಾಮಿ ಅಸೀಮಾನಂದ, ದೇವೇಂದ್ರ ಗುಪ್ತಾ, ಲೋಕೇಶ್ ಶರ್ಮಾ ಅಲಿಯಾಸ್ ಅಜಯ್ ತಿವಾರಿ, ಲಕ್ಷ್ಮಣ್ ದಾಸ್ ಮಹಾರಾಜ್, ಮೋಹನ್ ಲಾಲ್ ರಾತೇಶ್ವರ್ ಮತ್ತು ರಾಜೇಂದ್ರ ಚೌಧರಿ ಪ್ರಕರಣದಲ್ಲಿ ಖುಲಾಸೆಗೊಂಡ ಪ್ರಮುಖ ಆರೋಪಿಗಳಾಗಿದ್ದಾರೆ. ಇವರೆಲ್ಲರೂ ಅಭಿನವ್ ಭಾರತ ರತ್ನ ಸಂಘಟನೆಯ ಸದಸ್ಯರಾಗಿದ್ದರು.

ಕಳೆದ 11 ವರ್ಷಗಳ ಹಿಂದೆ 2007 ರ ಮೇ 18ರ ಶುಕ್ರವಾರದಂದು ಮೆಕ್ಕಾ ಮಸೀದಿಯಲ್ಲಿ ಪ್ರಬಲ ಬಾಂಬ್ ಸ್ಫೋಟಗೊಳಿಸಲಾಗಿತ್ತು. ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿ, 58ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಆರಂಭದಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸಲಾಗಿತ್ತು. 2011 ರಲ್ಲಿ ಎನ್‍ಐಎಗೆ ಘಟನೆಯ ವಿಚಾರಣೆಯ ಜವಾಬ್ದಾರಿಯನ್ನು ವಹಿಸಲಾಗಿತ್ತು. ಪ್ರಕರಣದ 10 ಮಂದಿ ಆರೋಪಿಗಳ ಪೈಕಿ ಐವರನ್ನು ಮಾತ್ರ ಪೊಲೀಸರು ಬಂಧಿಸಿದ್ದರು. ಪ್ರಮುಖ ಆರೋಪಿಗಳಾದ ಸಂದೀಪ್ ವಿ. ದಂಗೆ ಮತ್ತು ರಾಮಚಂದ್ರ ಕಲ್ಸಂಗ್ರಾ ಪ್ರಕರಣದ ತನಿಖೆ ಆರಂಭದಿಂದಲೂ ತಲೆಮರೆಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ಸುನೀಲ್ ಜೋಷಿಯನ್ನು ಹತ್ಯೆ ಮಾಡಲಾಗಿದೆ.

ಪ್ರಕರಣದಲ್ಲಿ ಒಟ್ಟು 226 ವ್ಯಕ್ತಿಗಳನ್ನು ಸಾಕ್ಷ್ಯಗಳನ್ನಾಗಿ ಪರಿಗಣಿಸಲಾಗಿತ್ತು. ಅಲ್ಲದೇ 411 ದಾಖಲೆಗಳನ್ನು ಸಾಕ್ಷ್ಯಾಧಾರಗಳನ್ನಾಗಿ ನ್ಯಾಯಾಲಯ ವಿಚಾರಣೆ ನಡೆಸಿದೆ. ಇನ್ನು ಅಜ್ಮೀರ್ ದರ್ಗಾ ಸ್ಫೋಟದ ಪ್ರಕರಣದಲ್ಲಿ 2017 ರಲ್ಲಿ ರಾಜಸ್ಥಾನದ ನ್ಯಾಯಾಲಯ ಆರೋಪಿ ಗುಪ್ತಾ ಗೆ ಜೈಲು ಶಿಕ್ಷೆ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *