ಪತ್ನಿಯ ಶವದ ಮುಂದೆ ದಾರಿ ತೋಚದೆ ಕಂಗಾಲಾಗಿದ್ದ ವ್ಯಕ್ತಿಗೆ ಯುವಕರ ತಂಡ ಸಹಾಯ

Public TV
1 Min Read

ಮಡಿಕೇರಿ: ಪತಿಯ ಶವ ಮುಂದಿಟ್ಟುಕೊಂಡು ದಾರಿ ತೋಚದೆ ಕಂಗಾಲಾಗಿದ್ದ ವ್ಯಕ್ತಿಗೆ ಯುವಕರ ತಂಡ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದೆ.

ಹೊನ್ನಪ್ಪ ಹಾಗೂ ಮಣಿ ಮಡಿಕೇರಿ ತಾಲೂಕಿನ ಭಾಗಮಂಡಲ ಸಮೀಪದ ಚೆಟ್ಟಿಮಾನಿಯ ನಿವಾಸಿಗಳಾಗಿದ್ದು, ಅದೇ ಗ್ರಾಮದ ಮಂಜು ಎಂಬವರ ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಇಬ್ಬರು ಪುಟ್ಟ ಹೆಣ್ಣು ಮಕ್ಕಳಿದ್ದು, ಒಬ್ಬಳು ತನ್ನ ತಂದೆಯ ಸ್ನೇಹಿತ ಮನೆಯಲ್ಲಿದ್ದರೆ, ಇನ್ನೂ ಚಿಕ್ಕ ಮಗು ಪೋಷಕರ ಜೊತೆಯಲ್ಲಿದ್ದಳು.

ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ಮಣಿ, ಮಂಗಳವಾರ ಸಂಜೆ ಏಕಾಏಕಿ ಅಸ್ವಸ್ಥರಾಗಿದ್ದರು. ತೋಟ ಮಾಲೀಕರಿಂದ ಸಾಲ ಬೇಡಿದ ಹೊನ್ನಪ್ಪ, ಪತ್ನಿಯನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದರು. ಅಷ್ಟರಲ್ಲಿ ಮಣಿ ನಿಧನರಾಗಿದ್ದಾರೆ.

ಈ ವಿದ್ಯಮಾನಗಳು ಮುಗಿಯುವಾಗ ಮಧ್ಯರಾತ್ರಿಯಾಗಿತ್ತು. ಆಸ್ಪತ್ರೆಯಲ್ಲಿ ಪತ್ನಿ ಶವವಿದ್ದು, ಬೆಳಕರಿಯಲು ಇನ್ನು ಕೆಲವೇ ಗಂಟೆ ಬಾಕಿಯಿತ್ತು. ಹೊನ್ನಪ್ಪ ಅವರಿಗೆ ದಾರಿ ತೋಚಲಿಲ್ಲ. ಮರಳಿ ಊರಿಗೆ ತೆರಳಲು ಸಾಧ್ಯವಿರಲಿಲ್ಲ. ತನ್ನವರು ಅಥವಾ ಪತ್ನಿಯ ಕಡೆಯವರು ಯಾರೂ ಇಲ್ಲ. ಪತ್ನಿಯ ಅಂತ್ಯಕ್ರಿಯೆ ಮಾಡುವುದಾದರೂ ಹೇಗೆ ಎಂದು ಯೋಚಿಸುತ್ತಾ ಮಡಿಕೇರಿಯ ಟೋಲ್‍ಗೇಟ್ ಬಳಿ ಅಲೆದಾಡುತ್ತಿದ್ದರು.

ಝೈನುಲ್ಲಾ ಆಬಿದ್ ಹಾಗೂ ಮಡಿಕೇರಿ ಯೂತ್ ಕಮಿಟಿಯ ಅಧ್ಯಕ್ಷರಾದ ಆಬಿದ್, ಹೊನ್ನಪ್ಪ ಅವರಿಂದ ಎಲ್ಲ ಮಾಹಿತಿ ಪಡೆದು, “ಬನ್ನಿ ನಾವಿದ್ದೇವೆ” ಎಂದರು. ಆಸ್ಪತ್ರೆಯಿಂದ ಶವವನ್ನು ರುದ್ರಭೂಮಿಗೆ ಕೊಂಡೊಯ್ಯಲಾಯ್ತು. ಹೂವು, ಧೂಪ, ಊದುಬತ್ತಿ, ಮಣ್ಣಿನ ಕುಡಿಕೆ, ಶ್ವೇತ ವಸ್ತ್ರ, ಚಾಪೆ, ನೀರು, ಕತ್ತಿ, ಗುದ್ದಲಿ, ಹಾರೆ ಎಲ್ಲವೂ ಬಂದವು. ಕೆಲವೇ ನಿಮಿಷಗಳಲ್ಲಿ ಗುಂಡಿಯೂ ಸಜ್ಜಾಯ್ತು. ಬಳಿಕ ನೆರೆದವರೆಲ್ಲ ಬಂಧುಗಳಾಗಿ ಮಣಿ ಅವರ ಅಂತ್ಯಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.

Share This Article
Leave a Comment

Leave a Reply

Your email address will not be published. Required fields are marked *