‘ನಿನ್ನ ಹೆಂಡ್ತಿ ಕಳಿಸು’ – 25ನೇ ಕರೆಗೆ ರೊಚ್ಚಿಗೆದ್ದು ಕೊಲೆ ಮಾಡಿದ್ದ ಪತಿ ಅರೆಸ್ಟ್

Public TV
1 Min Read

ಬೆಂಗಳೂರು: ನಿನ್ನ ಹೆಂಡತಿಯನ್ನು ಕಳಿಸು ಎಂದವನನ್ನು ಕೊಚ್ಚಿ ಕೊಲೆ ಮಾಡಿದ ಪತಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ತಿಮ್ಮೇಗೌಡ ಕೊಲೆಯಾದ ವ್ಯಕ್ತಿಯಾಗಿದ್ದು, ಮಣಿಕಂಠ ಅರೆಸ್ಟ್ ಆದ ಆರೋಪಿ. ಮಣಿಕಂಠ ಬ್ಯಾಡರಹಳ್ಳಿ ನಿವಾಸಿಯಾಗಿದ್ದು, ಸೋಮವಾರ ತಡರಾತ್ರಿ ಸುಂಕದಕಟ್ಟೆಯಲ್ಲಿ ತಿಮ್ಮೇಗೌಡನನ್ನು ಕೊಲೆ ಮಾಡಿದ್ದಾನೆ. ಮಣಿಕಂಠ ಕಳೆದ 2 ವರ್ಷಗಳ ಹಿಂದೆ ರಮ್ಯಾ ಎಂಬಾಕೆಯನ್ನು ವಿವಾಹವಾಗಿ ಬ್ಯಾಡರಹಳ್ಳಿಯಲ್ಲಿ ವಾಸಿಸುತ್ತಿದ್ದನು.

ಬ್ಯಾಡರಹಳ್ಳಿಯಲ್ಲಿ ವಾಸಿಸುತ್ತಿದ್ದಾಗ ರಮ್ಯಾಗೆ ತಿಮ್ಮೇಗೌಡ ಪರಿಚಯವಾಗಿದ್ದನು. ಈ ವೇಳೆ ರಮ್ಯಾ ಹಾಗೂ ತಿಮ್ಮೇಗೌಡನ ನಡುವೆ ಪ್ರೇಮಾಂಕುರವಾಗಿತ್ತು. ಈ ಹಿನ್ನೆಲೆಯಲ್ಲಿ ರಮ್ಯಾ ತನ್ನ ಪತಿ ಹಾಗೂ ಮಗುವನ್ನು ಬಿಟ್ಟು ತಿಮ್ಮೇಗೌಡ ಬಳಿ ತೆರಳಿದ್ದಳು. ಈ ವೇಳೆ ಪತಿ ಕರೆದರೂ ಬರಲ್ಲ ಎಂದು ರಮ್ಯಾ ಹೇಳಿದ್ದಳು.

ರಮ್ಯಾ, ತಿಮ್ಮೇಗೌಡನ ಜೊತೆ 2 ತಿಂಗಳು ಸಂಸಾರ ನಡೆಸಿದ್ದಳು. ನಂತರ ತಿಮ್ಮೇಗೌಡ ಕೆಲಸ ಕಾರ್ಯ ಇಲ್ಲದೇ ಮನೆಯಲ್ಲೇ ಇರುವುದನ್ನು ನೋಡಿದ ರಮ್ಯಾ ಆತನನ್ನು ಬಿಟ್ಟು ಕಳೆದ 10 ದಿನಗಳಿಂದ ಖಾಸಗಿ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದಳು. ರಮ್ಯಾ ಕಾಣದ ಕಾರಣ ತಿಮ್ಮೇಗೌಡ ಆಕೆಯ ಪತಿಗೆ ಕರೆ ಮಾಡಿದ್ದಾನೆ.

ತಿಮ್ಮೇಗೌಡ ಬಾರಿನಲ್ಲಿ ಕುಳಿತು ಪದೇ ಪದೇ ಮಣಿಕಂಠನಿಗೆ ಫೋನ್ ಮಾಡುತ್ತಿದ್ದನು. ಕುಡಿದ ಅಮಲಿನಲ್ಲಿ ನಿನ್ನ ಪತ್ನಿ ಎಲ್ಲಿ, ಕಳುಹಿಸು ಕಳುಹಿಸು ಎಂದು ಕಿರಿಕಿರಿ ಮಾಡುತ್ತಿದ್ದನು. ಮೊದಲೇ ಪತ್ನಿ ಬಿಟ್ಟು ಹೋಗಿದ್ದ ಚಿಂತೆಯಲ್ಲಿ ಮಣಿಕಂಠನಿಗೆ ತಿಮ್ಮೇಗೌಡ ಕರೆ ಮಾಡುವ ಮೂಲಕ ಕಿರುಕುಳ ನೀಡುತ್ತಿದ್ದನು.

ತಿಮ್ಮೇಗೌಡನ 25ನೇ ಕರೆಗೆ ಮಣಿಕಂಠ ರೊಚ್ಚಿಗೆದ್ದು ಕೊಲೆ ಮಾಡಿದ್ದಾನೆ. ಆತ ಇದ್ದ ಏರಿಯಾಗೆ ಬಂದು ಮಾತನಾಡಬೇಕು ಬಾ ಎಂದು ಕರೆದು ಮಚ್ಚಿನಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಬಾರಿನಲ್ಲಿ ಕುಡಿದು ಕೂತಿದ್ದ ತಿಮ್ಮೇಗೌಡ ಬೀದಿ ಹೆಣವಾಗಿದ್ದಾನೆ.

ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *