ಮಾವ, ಪತ್ನಿಯ ಮೇಲೆ ಅಳಿಯನಿಂದ ಹಲ್ಲೆ- ತೀವ್ರವಾಗಿ ಗಾಯಗೊಂಡಿದ್ದ ಪತ್ನಿ ಸಾವು

Public TV
1 Min Read

ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಮಾವ ಹಾಗೂ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ತೀವ್ರವಾಗಿ ಗಾಯಗೊಂಡಿದ್ದ ಪತ್ನಿ ಮೃತಪಟ್ಟಿದ್ದಾರೆ.

ದಿವ್ಯಾ(35) ಮೃತಪಟ್ಟ ಪತ್ನಿ. ಅಳಿಯ ನಾಗೇಂದ್ರ ಬುಧವಾರ ಚನ್ನರಾಯಪಟ್ಟಣದ ವಿಜಯಾ ಬ್ಯಾಂಕ್ ಬಳಿ ತನ್ನ ಮಾವ ಪ್ರಕಾಶ್ ಹಾಗೂ ಪತ್ನಿ ದಿವ್ಯಾ ಮೇಲೆ ಹಾಡಹಗಲೇ ಮಚ್ಚಿನಿಂದ ಭೀಕರವಾಗಿ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಪ್ರಕಾಶ್ ಸ್ಥಳದಲ್ಲೇ ಮೃತಪಟ್ಟರೆ, ದಿವ್ಯಾರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಪಿ ನಾಗೇಂದ್ರ ಕೃತ್ಯ ಎಸಗಿದ ಬಳಿಕ ಪರಾರಿಯಾಗಿದ್ದಾನೆ.

ಏನಿದು ಘಟನೆ?
ದಿವ್ಯಾರನ್ನು ಕಳೆದ 6 ವರ್ಷಗಳ ಹಿಂದೆ ನಾಗೇಂದ್ರಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದಿವ್ಯಾ ಗಂಡನ ಮನೆ ತೊರೆದು ತವರು ಮನೆ ಸೇರಿದ್ದರು. ಪತಿಯಿಂದ ವಿಚ್ಛೇದನ ಪಡೆಯಲು ಬಯಸಿದ್ದ ಕಾರಣ ಬುಧವಾರ ವಕೀಲರ ಬಳಿ ತೆರಳಿ ಸಹಿ ಹಾಕಲು ಅಪ್ಪ, ಮಗಳು ನಗರಕ್ಕೆ ಬಂದಿದ್ದರು. ಈ ವೇಳೆ ಬೈಕಿನಲ್ಲಿ ಹಿಂಬದಿಯಿಂದ ಬಂದ ಆರೋಪಿ ನಾಗೇಂದ್ರ ಮನಸೋ ಇಚ್ಛೆ ಹಲ್ಲೆ ನಡೆಸಿದ್ದನು. ಇದನ್ನು ಓದಿ: ಹಾಡಹಗಲೇ ನಡು ರಸ್ತೆಯಲ್ಲಿ ಮಾವ, ಪತ್ನಿ ಮೇಲೆ ಮಚ್ಚು ಬೀಸಿದ ಅಳಿಯ

ಘಟನೆ ನಡೆದ ವೇಳೆ ಸಾಕಷ್ಟು ಜನರು ಸ್ಥಳದಲ್ಲೇ ಇದ್ದರೂ ಕೂಡ ಕ್ಷಣಾರ್ಧದಲ್ಲಿ ನಡೆದ ಘಟನೆಯಿಂದ ಭಯಭೀತರಾಗಿದ್ದರು. ಪತ್ನಿಯಿಂದ ವಿಚ್ಛೇದನ ಪಡೆಯಲು ಇಷ್ಟವಿಲ್ಲದ ಕಾರಣ ಆರೋಪಿ ನಾಗೇಂದ್ರ ಕೃತ್ಯ ನಡೆಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. ಅಲ್ಲದೇ ಕೃತ್ಯಕ್ಕೆ ಹೊಸ ಮಚ್ಚು ಕೂಡ ಖರೀದಿ ಮಾಡಿದ್ದ ಎನ್ನಲಾಗಿದೆ. ಘಟನೆಯಲ್ಲಿ ಪ್ರಕಾಶ್ ಅವರ ಕತ್ತಿನ ಭಾಗಕ್ಕೆ ಗಂಭೀರವಾಗಿ ಗಾಯವಾದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇತ್ತ ಇಬ್ಬರ ಮೇಲೆ ಹಲ್ಲೆ ನಡೆಸಿದ ಬಳಿಕ ನಾಗೇಂದ್ರ ಸ್ಥಳದಿಂದ ಪರಾರಿಯಾಗಿದ್ದರು.

ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಚನ್ನರಾಯಪಟ್ಟಣ ನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು.

https://www.youtube.com/watch?v=NCdmjBRRt60

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *