ಸಿಗರೇಟ್ ಸೇದ್ಬೇಡ ಅಂದಿದ್ದಕ್ಕೆ ಪತ್ನಿಗೆ ಚಾಕುವಿನಿಂದ್ಲೇ ಇರಿದ..!

Public TV
1 Min Read

ಬೆಂಗಳೂರು: ಸಿಗರೇಟ್ ಸೇದಬೇಡ ಎಂದು ಪತ್ನಿ ಹೇಳಿದ್ದಕ್ಕೆ ಪತಿ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ.

ಗಾಯತ್ರಿ ಚಾಕು ಇರಿತಕ್ಕೊಳಗಾದ ಮಹಿಳೆ. ನಗರದ ಬಾಣಸವಾಡಿ ನಿವಾಸಿಯಾಗಿರುವ ಗಾಯತ್ರಿಗೆ ಎಲ್ಲ ಮಹಿಳೆಯರಿಗೆ ಇರುವಂತೆ, ತನ್ನ ಗಂಡನಿಗೆ ಯಾವುದೇ ದುಶ್ಚಟಗಳಿಬಾರದು. ಒಳ್ಳೆಯ ಗುಣವಿರುವ ಆರೋಗ್ಯವಂತ ಗಂಡ ಸಿಗಬೇಕು. ಅವನನ್ನು ತುಂಬಾ ಚೆನ್ನಾಗಿ ನೋಡ್ಕೋಬೇಕು ಎಂದು ಆಸೆ ಪಟ್ಟಿದ್ದರು. ಆದರೆ ಗಾಯತ್ರಿಗೆ ಎಲ್ಲ ಚಟಗಳಿರುವ ಧರ್ಮ ಎನ್ನುವ ಪಾಪಿ ಗಂಡ ಸಿಕ್ಕಿದ್ದಾನೆ.

ಗಾಯತ್ರಿ ಪತಿ ಧರ್ಮನಿಗೆ ಮಾಡುವುದಕ್ಕೆ ಯಾವುದೇ ಕೆಲಸ ಇಲ್ಲ. ದಿನ ಕಂಠಪೂರ್ತಿ ಕುಡಿಬೇಕು. ಸದಾ ಸಿಗರೇಟು ಘಾಟಲ್ಲೇ ತೇಲಾಡುತ್ತಿದ್ದನು. ಇಷ್ಟೆಲ್ಲ ಆದರೂ ಕೂಡ ಪತ್ನಿ ಗಾಯತ್ರಿ ತಾನೇ ಗಾರ್ಮೆಂಟ್ಸ್ ನಲ್ಲಿ ಕೆಲಸ ಸೇರಿಕೊಂಡು ಪತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಧರ್ಮ ಮಾತ್ರ ದಿನ ಕುಡಿದು ಮನೆಗೆ ಬಂದು ಪತ್ನಿಯನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದನು.

ಪತಿ ಧರ್ಮನ ಈ ದುಶ್ಚಟಗಳ ಪರಿಣಾಮ ಕ್ಯಾನ್ಸರ್ ಕಾಯಿಲೆ ಅಟ್ಯಾಕ್ ಆಗಿತ್ತು. ಇನ್ನು ಮೇಲೆ ಇವೆಲ್ಲಾ ಬಿಟ್ಟು ಬದುಕಿ ಎಂದು ಪತ್ನಿ ಬುದ್ಧಿ ಹೇಳಿ, ಮೊದಲಿನಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.

ಫೆ. 18ರ ಸಂಜೆ ಧರ್ಮ ಮನೆ ಮುಂದೆ ಕೈಯಲ್ಲಿ ಸಿಗರೇಟ್ ಪ್ಯಾಕ್ ಹಿಡಿದು ಸಿಗರೇಟ್ ಸೇದುತ್ತಿದ್ದನು. ಇದನ್ನು ನೋಡಿದ ಪತ್ನಿ ಗಾಯತ್ರಿ ಮತ್ತೆ ಸಿಗರೇಟು ಶುರು ಮಾಡಿದ್ಯಾ ಅದನ್ನು ಬಿಸಾಕು ಎಂದು ಕೈಯಿಂದ ಸಿಗರೇಟು ಕಿತ್ತು ಎಸೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಧರ್ಮ ಅಲ್ಲಿಯೇ ಇದ್ದ ಚಾಕುವಿನಿಂದ ಪತ್ನಿಯ ಎಡಗಣ್ಣಿಗೆ ಇರಿದ್ದಾನೆ. ಕಣ್ಣಿಗೆ ಗಂಭೀರ ಸ್ವರೂಪದ ಗಾಯವಾಗಿರುವ ಗಾಯತ್ರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *