– ಸಾಯ್ತೀನಿ ಎಂದು ಮೇಸೆಜ್ ಮಾಡಿದ್ದ ಪತ್ನಿಗೆ ಗುಡ್ ಬೈ ಎಂದು ರಿಪ್ಲೈ ನೀಡಿದ ಪತಿ
ಬೆಂಗಳೂರು: ಪತಿಯ (Husband) ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿಯೊಬ್ಬಳು (Wife) ಮದುವೆಯಾದ ಒಂದೇ ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ (Bengaluru) ರಾಮಮೂರ್ತಿ ನಗರದ ರಿಚರ್ಡ್ ಗಾರ್ಡನ್ನಲ್ಲಿ ನಡೆದಿದೆ.
ಐಟಿ ಉದ್ಯಮಿ ಆಗಿರುವ ಶ್ವೇತಾ (27) ನ.10ರಂದು ನೇಣಿಗೆ ಶರಣಾಗಿದ್ದಾಳೆ. ಐಬಿಎಂ ಕಂಪನಿಯ ಉದ್ಯೋಗಿಯಾಗಿದ್ದ ಶ್ವೇತಾ 11 ತಿಂಗಳ ಹಿಂದಷ್ಟೇ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಆದರೆ ಮದುವೆಗೂ ಮುನ್ನ ಅಭಿಷೇಕ್ಗೆ ಯುವತಿಯೊಬ್ಬಳೊಂದಿಗೆ ಸಂಬಂಧವಿತ್ತು ಎನ್ನುವ ವಿಷಯವು ಶ್ವೇತಾಳಿಗೆ ಮದುವೆಯಾದ ಬಳಿಕ ತಿಳಿದಿದೆ. ಈ ವಿಚಾರ ಗೊತ್ತಾದ ಬಳಿಕ ಶ್ವೇತಾ ಹಾಗೂ ಅಭಿಷೇಕ್ ಮಧ್ಯೆ ಪ್ರತಿನಿತ್ಯ ಜಗಳವಾಗುತ್ತಿತ್ತು.
ಅದಾದ ಬಳಿಕ ಪರಸ್ಪರ ರಾಜಿ ಪಂಚಾಯತಿ ನಡೆದಿತ್ತು. ಆ ನಂತರ ಅಭಿಷೇಕ್ ಹಾಗೂ ಶ್ವೇತಾ ಇಬ್ಬರೂ ಒಟ್ಟಿಗೆ ಜೀವನ ಸಾಗಿಸುತ್ತಿದ್ದರು. ಈ ನಡುವೆ ಅಭಿಷೇಕ್ ತನ್ನ ಹಳೆಯ ಚಾಳಿಯನ್ನೇ ಪುನಃ ಮುಯಂದುವರಿಸಿದ್ದಾನೆ. ಇದರಿಂದಾಗಿ ಬೇಸತ್ತ ಶ್ವೇತಾ ನೇಣಿಗೆ ಶರಣಾಗಿದ್ದಾಳೆ ಎಂಬ ಆರೋಪಗಳು ಮೃತ ಶ್ವೇತಾಳ ಕುಟುಂಬದಿಂದ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಶ್ವೇತಾಳ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದರು. ಪತ್ನಿಯ ಅಂತ್ಯ ಸಂಸ್ಕಾರದ ಬಳಿಕ ಅಭಿಷೇಕ್ ಸತ್ಯ ಒಪ್ಪಿಕೊಂಡಿದ್ದು, ಮದುವೆಗೂ ಮುನ್ನ ಇನ್ನೋರ್ವ ಯುವತಿಯ ಜೊತೆ ಸಂಬಂಧ ಹೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಶ್ವೇತಾಳೊಂದಿಗೆ ಮದುವೆ ನಿಶ್ಚಯವಾದ ನಂತರವೂ ಅದೇ ಯುವತಿಯೊಂದಿಗೆ ಟೂರ್ ಹೋಗಿದ್ದ. ಅಷ್ಟೇ ಅಲ್ಲದೇ ಮದುವೆಯ ನಂತರವೂ ಅನೈತಿಕ ಸಂಬಂಧ ಮುಂದುವರಿಸಿದ್ದ. ಈ ವಿಚಾರ ತಿಳಿದು ಶ್ವೇತಾ ಗಲಾಟೆ ಮಾಡಿದ್ದಳು. ಆ ಬಳಿಕ ಪತ್ನಿಯ ಬಳಿ ಕ್ಷಮೆಯಾಚಿಸಿ ಸುಮ್ಮನಾಗಿರುವ ಬಗ್ಗೆ ತಿಳಿಸಿದ್ದಾನೆ. ಇದನ್ನೂ ಓದಿ: 15 ವರ್ಷಗಳಿಂದ ಮಕ್ಕಳಿಲ್ಲದೇ ಹರಕೆ ಹೊತ್ತು ಹಿಂದಿರುಗುವಾಗಲೇ ದುರಂತ – ದಂಪತಿ ಸಾವು
ಅಷ್ಟೇ ಅಲ್ಲದೇ ಇತ್ತೀಚಿಗೆ ಕೊಯಮತ್ತೂರು ಹೋಗುವುದಾಗಿ ಅಭಿಷೇಕ್ ದೆಹಲಿಗೆ ಹೋಗಿದ್ದ. ಆ ಯುವತಿಯನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದ ಎನ್ನುವ ವಿಚಾರ ತಿಳಿದು ಪತ್ನಿ ಶ್ವೇತಾ ಗಲಾಟೆ ಮಾಡಿದ್ದಳು. ಅದಾದ ಬಳಿಕ ಶ್ವೇತಾ ಸಾಯ್ತೀನಿ ಗುಡ್ ಬೈ ಎಂದು ಮೇಸೆಜ್ ಕಳಿಸಿದ್ದಳು. ಅದಕ್ಕೆ ಅಭಿಷೇಕ್ ಗುಡ್ ಬೈ ಎಂದು ರಿಪ್ಲೈ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿ ರಾಮಮೂರ್ತಿ ನಗರ ಪೊಲೀಸರು ಆರೋಪಿ ಅಭಿಷೇಕ್ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸದ್ಯಕ್ಕೆ ಡಿಕೆ ಶಿವಕುಮಾರ್ ಬಂಧಿಸಲ್ಲ: ಇಡಿ