ದುಬೈನಿಂದ ಹಾರಿಬಂದು ಎರಡನೇ ಮದ್ವೆಗೆ ಸ್ಕೆಚ್ – ಮೊದಲ ಪತ್ನಿಗೆ ಮದ್ವೆ ಮನೆಯಲ್ಲಿ ಸಿಕ್ಕಿಬಿದ್ದು ಬೆಪ್ಪಾದ ವರ

Public TV
1 Min Read

ಮಂಗಳೂರು: ದುಬೈನಲ್ಲಿ ಉದ್ಯೋಗದಲ್ಲಿರುವ ಯುವಕನೊಬ್ಬ ಎರಡನೇ ಬಾರಿಗೆ ಮದುವೆಗೆ ಯತ್ನಿಸಿ, ಸಿಕ್ಕಿಬಿದ್ದ ಘಟನೆ ಘಟನೆ ಮಂಗಳೂರಿನ ಮೂಲ್ಕಿಯ ಬಪ್ಪನಾಡಿನಲ್ಲಿ ನಡೆದಿದೆ.

ಸುರತ್ಕಲ್ ಮೂಲದ ಗುರುಪ್ರಸಾದ್ ಎಂಬ ಯುವಕ ದುಬೈಯಲ್ಲಿ ನೆಲೆಸಿದ್ದು 10 ವರ್ಷಗಳಿಂದ ಉಡುಪಿಯ ಮಿಶನ್ ಕಂಪೌಂಡ್ ನಿವಾಸಿ ಗೀತಾಂಜಲಿ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದನು. ಕಳೆದ ಜನವರಿಯಲ್ಲಿ ಗೀತಾಂಜಲಿ ಜೊತೆಗೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದ ಗುರುಪ್ರಸಾದ್, ಈ ಮಧ್ಯೆ ಮೂಲ್ಕಿ ಮೂಲದ ಮುಂಬೈ ನಿವಾಸಿ ದಿವ್ಯ ಎಂಬ ಯುವತಿಯೊಂದಿಗೆ ಕಳೆದ 4 ವರ್ಷಗಳಿಂದ ಸಂಬಂಧ ಇರಿಸಿಕೊಂಡಿದ್ದನು.

ಗುರುಪ್ರಸಾದ್ ಮದುವೆ ಆದ ನಂತರ ಗೀತಾಂಜಲಿಯನ್ನು ದುಬೈಗೆ ಕರೆದುಕೊಂಡು ಹೋಗಿದ್ದನು. ಆದರೆ ಈ ಮಧ್ಯೆ ದಿವ್ಯಾ ಜೊತೆಗೆ ಗುರುಪ್ರಸಾದ್ ನಿರಂತರ ಸಂಪರ್ಕದಲ್ಲಿರುವುದು ಪತ್ನಿ ಗೀತಾಂಜಲಿಗೆ ಗೊತ್ತಾಗಿತ್ತು. ವಿಚಾರಿಸಿದಾಗ ತನ್ನ ಸಂಬಂಧಿ ಎಂದು ಗುರುಪ್ರಸಾದ್ ತಿಳಿಸುತ್ತಿದ್ದನಂತೆ. ಆದರೆ ಗೀತಾಂಜಲಿ ಸಂಶಯ ಬಂದು ಅನೇಕ ಬಾರಿ ಗಂಡ – ಹೆಂಡತಿಯರ ಮಧ್ಯೆ ಜಗಳ ಆಗಿತ್ತು ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಗುರುಪ್ರಸಾದ್ ದುಬೈಯ ಮನೆಯಿಂದ ದಿಢೀರ್ ನಾಪತ್ತೆಯಾಗಿದ್ದನು.

ಪತ್ನಿ ಗೀತಾಂಜಲಿ ಗಂಡನಿಗೆ ಕರೆ ಮಾಡಿದಾಗ, ಕನ್ನಡದಲ್ಲಿ ಸಂದೇಶ ಬಂದಿದ್ದರಿಂದ ಉಡುಪಿಯ ಗೆಳೆಯರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಊರಿನಲ್ಲಿ ಗುರುಪ್ರಸಾದ್ ಬೇರೊಂದು ಮದುವೆಗೆ ರೆಡಿ ಮಾಡಿಕೊಂಡಿದ್ದನ್ನು ತಿಳಿದು, ಕೂಡಲೇ ಗೀತಾಂಜಲಿ ದುಬೈಯಿಂದ ವಾಪಾಸ್ಸಾಗಿ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೆ ಜಯಕರ್ನಾಟಕ ಸಂಘಟನೆಯವರಿಗೆ ಮಾಹಿತಿ ನೀಡಿದ್ದಾರೆ.

ಸೋಮವಾರ ಬಪ್ಪನಾಡು ದೇವಸ್ಥಾನದ ಸಭಾಗೃಹದಲ್ಲಿ ಗುರುಪ್ರಸಾದ್ ಮತ್ತು ದಿವ್ಯಾ ಮದುವೆ ನಿಗದಿಯಾಗಿತ್ತು. ಗೀತಾಂಜಲಿ ಸಂಬಂಧಿಕರು ಮತ್ತು ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಸೇರಿ ಸ್ಥಳಕ್ಕಾಗಮಿಸಿ ಜಟಾಪಟಿ ನಡೆಸಿದ್ದಾರೆ. ಮೂಲ್ಕಿ ಪೊಲೀಸರು ಆರೋಪಿ ಗುರುಪ್ರಸಾದ್ ನನ್ನು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಿಸಿ ಉಡುಪಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *