ವರದಕ್ಷಿಣೆ ತರಲಿಲ್ಲ ಎಂದು ಗರ್ಭಿಣಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನ!

Public TV
1 Min Read

ಬೆಳಗಾವಿ: ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಗಂಡ, ಅತ್ತೆ, ಮಾವ, ನಾದಿನಿ ಸೇರಿಕೊಂಡು ಜೀವಂತವಾಗಿ ನಾಲ್ಕು ತಿಂಗಳ ಗರ್ಭಿಣಿಯನ್ನ ಸುಡಲು ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ತಪಸ್ಸಿ ಗ್ರಾಮದಲ್ಲಿ ನಡೆದಿದೆ.

ಅನುಸೂಯಾ(27) ವರ್ಷದ ಗೃಹಿಣಿ ಮೇಲೆ ಈ ರೀತಿ ಅಮಾನುಷವಾಗಿ ಕೊಲೆ ಮಾಡಲು ಗಂಡನ ಮನೆಯವರು ಯತ್ನಿಸಿದ್ದಾರೆ. ಅನುಸೂಯಾರಿಗೆ 4 ವರ್ಷದ ಹಿಂದೆ ಮದುವೆಯಾಗಿದ್ದು, ಈಗಾಗಲೇ ಒಂದೂವರೆ ವರ್ಷದ ಹೆಣ್ಣು ಮಗು ಕೂಡ ಇದೆ. ಜೊತೆಗೆ ಅನುಸೂಯಾ 4 ತಿಂಗಳ ಗರ್ಭಿಣಿ ಕೂಡ ಆಗಿದ್ದಾರೆ. ಆದರೆ ಇದ್ಯಾವುದಕ್ಕೂ ಲೆಕ್ಕಿಸದ ರಾಕ್ಷಸ ಮನಸ್ಥಿತಿಯ ಗಂಡನ ಮನೆಯವರು ಆಕೆಯನ್ನ ಸುಟ್ಟು ಕೊಲೆ ಮಾಡಲು ಯತ್ನಿಸಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ರಾತ್ರಿ ಗಂಡ ಸಿದ್ದಪ್ಪ ಹೆಂಡತಿಗೆ ತವರು ಮನೆಗೆ ಹೋಗಿ ಬಂಗಾರ ತರುವಂತೆ ಹಾಗೂ ಅನುಸೂಯಾ ತಂದೆ ಹೆಸರಿನಲ್ಲಿರುವ ಜಮೀನನ್ನ ತನ್ನ ಹೆಸರಿಗೆ ಬರೆಸುವಂತೆ ಕಿರುಕುಳ ನೀಡಿದ್ದಾನೆ. ಇದ್ಯಾವುದಕ್ಕೂ ಹೆಂಡತಿ ಅನುಸೂಯಾ ಒಪ್ಪದಿದ್ದಾಗ ಗಂಡ ಸಿದ್ದಪ್ಪ, ಮಾವ ಕಾಮೇಶ್, ಅತ್ತೆ ಪಾರ್ವತಿ ಹಾಗೂ ಗಂಡನ ಅಣ್ಣ ಹಾಗೂ ಹೆಂಡತಿ ಸೇರಿಕೊಂಡು ಸೀಮೆ ಎಣ್ಣೆ ಸುರಿದು ಅನುಸೂಯಾರ ಕೊಲೆ ಮಾಡಲು ಯತ್ನಿಸಿದ್ದಾರೆ.

ಶೇಕಡಾ 90ರಷ್ಟು ಬೆಂಕಿಯಲ್ಲಿ ಬೆಂದಿರುವ ಅನುಸೂಯಾರನ್ನು ನಂತರ ಎಚ್ಚೆತ್ತುಕೊಂಡ ಗಂಡ ಸಿದ್ದಪ್ಪನೇ ಗೋಕಾಕ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತಂದೆ, ತಾಯಿ, ಅಣ್ಣನ ಜೊತೆಗೆ ಪರಾರಿಯಾಗಿದ್ದಾನೆ. ಇತ್ತ ಗ್ರಾಮಸ್ಥರು ಗೋಕಾಕ್ ತಾಲೂಕಿನ ತಳಕಟ್ನಾಳ ಗ್ರಾಮದಲ್ಲಿದ್ದ ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಆಸ್ಪತ್ರೆಗೆ ಬಂದ ಅನುಸೂಯಾರ ಕುಟುಂಬಸ್ಥರು ಆಕೆಯ ಸ್ಥಿತಿ ನೋಡಿ ತಕ್ಷಣ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ದೇಹದ ಬಹುತೇಕ ಭಾಗ ಸುಟ್ಟಿದ್ದರಿಂದ ಅನುಸೂಯಾ ಬದುಕುಳಿಯುವುದು ಕಷ್ಟ ಎಂದು ವೈದ್ಯರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *