ಬೆಳಗಾವಿ: ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಇಂಗಳಿ ಗ್ರಾಮದಲ್ಲಿ ಶ್ರೀ ರಾಮಸೇನೆ ಕಾರ್ಯಕರ್ತರನ್ನ ಗಿಡಕ್ಕೆ ಕಟ್ಟಿ ಥಳಿಸಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಹಲ್ಲೆಗೊಳಗಾದ ಗೋ ರಕ್ಷಕರು ಹಾಗೂ ಹಲ್ಲೆ ಮಾಡಿದವರ ಇಬ್ಬರ ಮೇಲೂ ಪ್ರಕರಣ ದಾಖಲಿಸಿಕೊಂಡು ಪೊಲೀಸರು (Belagavi Police) ತನಿಖೆ ಆರಂಭಿಸಿದ್ದಾರೆ.
ಇಂಗಳಿ ಗ್ರಾಮದಲ್ಲಿ ಅಕ್ರಮ ಗೋ ಸಾಗಾಟ ತಡೆಯಲು ಹೋದ ಶ್ರೀರಾಮಸೇನೆ ಕಾರ್ಯಕರ್ತರ (Sri Rama Sena Workers) ಮೇಲಿನ ಹಲ್ಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಡೆತ ತಿಂದ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಎಫ್ಐಅರ್ ದಾಖಲಾಗಿದೆ. ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಶಿವಪುತ್ರ ಸನದಿ ಎಂಬುವರು ದೂರು ದಾಖಲಿಸಿದ್ದಾರೆ. ಎಫ್ಐಆರ್ನಲ್ಲಿ ಮಹಿಳೆಯರ ಮೇಲೆ ಹಲ್ಲೆ ಮಾಡಿದ ಆರೋಪ ದಾಖಲಾಗಿದೆ. ಇದನ್ನೂ ಓದಿ: ಗೋ ರಕ್ಷಣೆ ಮಾಡಲು ಮುಂದಾಗಿದ್ದಕ್ಕೆ ಮರಕ್ಕೆ ಕಟ್ಟಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ
ಇನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೊಟೊ ಪ್ರಕರಣವನ್ನ ಯಮಕನಮರಡಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಶಿವಪುತ್ರ ಸನದಿ, ಬಾಬುಸಾಬ್ ಮುಲ್ತಾನಿ ಮತ್ತು ಇಂಗಳಿ ಗ್ರಾಮದ ಕೆಲವರ ಮೇಲೆ ದೂರು ದಾಖಲಾಗಿದೆ. ಎರಡೂ ಕಡೆ ದೂರುಗಳನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿದ ಶ್ರೀರಾಮಸೇನೆ ಪ್ರತಿಭಟನೆಗೆ ಕರೆ ನೀಡಿದೆ. ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಜುಲೈ 3ರಂದು ಇಂಗಳಿ ಚಲೋ ಪ್ರತಿಭಟನೆಗೆ ಕರೆ ನೀಡಲಾಗಿದೆ. ಇದನ್ನೂ ಓದಿ: ಶ್ರೀರಾಮಸೇನೆ ಕಾರ್ಯಕರ್ತರು ನೈತಿಕ ಪೊಲೀಸ್ಗಿರಿ ಮಾಡಲು ಹೋಗಿದ್ದು ತಪ್ಪು – ಪರಮೇಶ್ವರ್
ನಾಲ್ವರ ಬಂಧನ
ಗೋರಕ್ಷಕರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧ ಬೆಳಗಾವಿ (Belagavi) ಎಸ್ಪಿ ಭೀಮಾಶಂಕರ್ ಗುಳೇದ್ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶ್ರೀರಾಮಸೇನೆ ಕಾರ್ಯಕರ್ತರೇ ಮೊದಲು ಮನೆಗೆ ನುಗ್ಗಿದ್ದು ಬಳಿಕ ಅವರ ಮೇಲಿನ ಹಲ್ಲೆ ನಡೆದಿದ್ದು ದುರಾದೃಷ್ಟಕರ. ಹಲ್ಲೆ ಕುರಿತು ನಾವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ. ಜೂನ್ 28ರಂದು ಗೋ ಶಾಲೆಯಲ್ಲಿ ದನದ ಮಾಲೀಕ ಗೋವು ಬಿಡಿಸಿಕೊಳ್ಳಲು ಹೋಗ್ತಾನೆ. ಆತನನ್ನ ಹಿಂಬಾಲಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು ವಾಹನದ ಮಾಲೀಕ ಬಾಬು ಸಾಬ್ ಮನೆಗೆ ನುಗ್ಗುತ್ತಾರೆ. ಮನೆಯಲ್ಲಿ ಹೆಣ್ಣು ಮಕ್ಕಳಿರ್ತಾರೆ. ಈ ವೇಳೆ ಮಹಿಳೆಯರು ಕಿರುಚಿಕೊಂಡಾಗ ಪಕ್ಕದ ಜನರು ಬರ್ತಾರೆ. ಬಂದು ಎಲ್ಲರನ್ನೂ ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರ ಬಳಿ ಆ ದಿನವೇ ಇಬ್ಬರು ಯಾವುದೇ ತಂಟೆ ತಕರಾರು ಇಲ್ಲ ಅಂತಾ ಬರೆದುಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಹಾಸನ ಯುವಜನತೆಯಲ್ಲಿ ಹೃದಯಾಘಾತ – ತನಿಖೆಗೆ ವಿಶೇಷ ಸಮಿತಿ ರಚಿಸಿದ ಸರ್ಕಾರ
ಇನ್ನೂ ಈ ಘೋರ ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿ ನಾಲ್ವರನ್ನು ಬಂಧಿಸಿದ್ದೇವೆ. ನಾಲ್ವರಲ್ಲಿ ಓರ್ವ ಹಿಂದೂ, ಮೂವರು ಮುಸ್ಲಿಮರ ಬಂಧನವಾಗಿದೆ. ಮುಸ್ಲಿಮರು ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಲ್ಲ. ಎಲ್ಲರೂ ಸೇರಿಕೊಂಡು ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಶ್ರೀರಾಮ ಸೇನೆ ಕಾರ್ಯಕರ್ತ ಮಹಾವೀರ್ ಸೊಲ್ಲಾಪುರೆ ಸೇರಿ ಇನ್ನುಳಿದವರ ಮೇಲೆ ಎಫ್ಐಆರ್ ದಾಖಲಾಗಿದೆ. ಶಿವಪುತ್ರ ಸನದಿ ಡ್ರೈವರ್ನಿಂದ ದೂರು ದಾಖಲಾಗಿದೆ. ಮಹಾವೀರ್ಗೆ ಕಲಬುರಗಿಗೆ ಗಡಿ ಪಾರು ಮಾಡಲಾಗಿತ್ತು. ಗಡಿ ಪಾರಾದ ರೌಡಿ ಶೀಟರ್ ಮಹಾವೀರ್ ಇಲ್ಲಿಗ್ಯಾಕೆ ಬಂದಿದ್ದ. ಒಬ್ಬ ರೌಡಿ ಶೀಟರ್ಗೆ ಸಂಘಟನೆಯವರು ಯಾಕೆ ಸಪೋರ್ಟ್ ಮಾಡ್ತಿದ್ದಾರೆ. ಇಂತವರ ಪರ ಪ್ರತಿಭಟನೆ ಮಾಡಲು ನಾವು ಅವಕಾಶ ಕೊಡಲ್ಲ ಎಂದು ಎಸ್ಪಿ ಶ್ರೀ ರಾಮಸೇನೆ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.