ಕೋಲ್ಕತ್ತಾ, ಅಹಮದಾಬಾದಲ್ಲಿ ವಕ್ಫ್ ಮಸೂದೆ ವಿರುದ್ಧ ಭಾರೀ ಪ್ರತಿಭಟನೆ – ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

Public TV
2 Min Read

– ಶುಕ್ರವಾರದ ಪ್ರಾರ್ಥನೆ ಬಳಿಕ ಪ್ರತಿಭಟನೆ ಆರಂಭ

ಕೋಲ್ಕತ್ತಾ/ ಅಹಮದಾಬಾದ್‌: ವಕ್ಫ್‌ ತಿದ್ದುಪಡಿ ಮಸೂದೆ (Waqf Amendment Bill) ಸಂಸತ್ತಿನಲ್ಲಿ ಅಂಗೀಕಾರವಾಗಿದ್ದು, ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು (Protest) ಆರಂಭಗೊಂಡಿವೆ. ಶುಕ್ರವಾರ ಪ್ರಾರ್ಥನೆಯ ಬಳಿಕ ಕೋಲ್ಕತ್ತಾ (Kolkata), ಚೆನ್ನೈ (Chennai) ಮತ್ತು ಅಹಮದಾಬಾದ್‌ನಲ್ಲಿ (Ahmedabad) ಸಾವಿರಾರು ಜನ ಬೀದಿಗಿಳಿದು ಪ್ರತಿಭಟಿಸಿದ್ದು, ಪ್ರತಿಭಟನಾಕಾರರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟಿದ್ದಾರೆ.

ಕೋಲ್ಕತ್ತಾದಲ್ಲಿ ರಾಷ್ಟ್ರಧ್ವಜ ಹಿಡಿದು, ‘ನಾವು ವಕ್ಫ್ ತಿದ್ದುಪಡಿಯನ್ನು ತಿರಸ್ಕರಿಸುತ್ತೇವೆ’ ಎಂಬ ಪೋಸ್ಟರ್‌ಗಳನ್ನು ಹಿಡಿದು ಸಾವಿರಾರು ಜನ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಪರದಾಡಿದ್ದಾರೆ. ಇದನ್ನೂ ಓದಿ: ರಾಜ್ಯಸಭೆಯಲ್ಲೂ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

ಅಹಮದಾಬಾದ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ರಸ್ತೆಯಲ್ಲಿ ಕುಳಿತಿದ್ದ ಪ್ರತಿಭಟನಾಕಾರರನ್ನು ಬಲವಂತವಾಗಿ ಪೊಲೀಸರು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀಮ್ (ಎಐಎಂಐಎಂ) ರಾಜ್ಯ ಘಟಕದ ಮುಖ್ಯಸ್ಥ ಮತ್ತು ಅದರ 40 ಸದಸ್ಯರನ್ನು ವಶಕ್ಕೆ ಪಡೆದರು.

ಚೆನ್ನೈನಲ್ಲಿ ಸಹ ಪ್ರತಿಭಟನೆಯ ಕಾವು ಹೆಚ್ಚಾಗಿತ್ತು. ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು. ಚೆನ್ನೈ ಮತ್ತು ಕೊಯಮತ್ತೂರು ಮತ್ತು ತಿರುಚಿರಾಪಳ್ಳಿಯಂತಹ ಪ್ರಮುಖ ನಗರಗಳಲ್ಲಿ ಟಿವಿಕೆ ಕಾರ್ಯಕರ್ತರು ಜಮಾಯಿಸಿ ವಕ್ಫ್ ಮಸೂದೆಯ ವಿರುದ್ಧ ಘೋಷಣೆ ಕೂಗಿದರು.

ನಟ ವಿಜಯ್‌ ಪ್ರತಿಕ್ರಿಯಿಸಿ, ವಕ್ಫ್ ಮಸೂದೆಯನ್ನು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಅದರ ಅಂಗೀಕಾರವು ಭಾರತದ ಜಾತ್ಯತೀತ ಅಡಿಪಾಯವನ್ನು ಪ್ರಶ್ನಿಸುತ್ತದೆ ಎಂದು ಟೀಕಿಸಿದರು.

ಏ.2 ರಂದು ವಿಪಕ್ಷಗಳ ವ್ಯಾಪಕ ವಿರೋಧದ ನಡುವೆಯೂ ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿತ್ತು. ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು (Kiran Rijiju) ಮಸೂದೆಯನ್ನು ಮಂಡಿಸಿದ್ದರು. ಲೋಕಸಭೆ ಅಂಗೀಕಾರದ ನಂತರ ಅವರು ಗುರುವಾರ ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ಮಂಡಿಸಿದ್ದರು. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಾರದೇ ಇದ್ದರೆ ಈ ಸಂಸತ್ತನ್ನೇ ಕಾಂಗ್ರೆಸ್‌ ವಕ್ಫ್‌ಗೆ ನೀಡ್ತಿತ್ತು: ಕಿರಣ್‌ ರಿಜಿಜು

Share This Article